ಕೋರೋಣ ವೈರಸ್ಸಿನ ಭೀತಿಯಲ್ಲಿ ಸಂಕಷ್ಟದಲ್ಲಿರುವ ಜನತೆಗೆ ಕರೆಂಟ್ ಶಾಕ್ ನೀಡಿದ ಮೆಸ್ಕಾಂ

ವರದಿ : ಹಸೈನಾರ್ ಜಯನಗರ


ಕೋರೋಣ ವೈರಸ್ ಮಹಾಮಾರಿ ಹಿನ್ನೆಲೆ ಭಾರತದ ಲಾಕ್ ಡೌನ್ ಗೊಂಡಿದ್ದು ಜನಸಾಮಾನ್ಯರು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಜನತೆಯ ಸಂಕಷ್ಟಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರ ಹತ್ತು ಹಲವಾರು ಯೋಜನೆಗಳನ್ನು ರೂಪಿಸಿ ಜನತೆಯ ಸಹಾಯಕ್ಕೆ ಮುಂದಾಗಿದ್ದವು. ಆದರೆ ಇದೀಗ ಅದೇ ಸಹಾಯ ಮುಳ್ಳಾಗಿ ಚುಚ್ಚಲು ಪ್ರಾರಂಭಿಸಿದಂತೆ ಗೋಚರಿಸುತ್ತಿದೆ. ಜನಸಾಮಾನ್ಯರು ಕೂಲಿಕಾರ್ಮಿಕರು ಕೆಲಸಕಾರ್ಯಗಳು ಇಲ್ಲದೆ ಮನೆಯಲ್ಲಿಯೇ ಕಾಲ ಕಳೆಯುವಂತ ಪರಿಸ್ಥಿತಿ ಎದುರಾಗಿದ್ದು ಜೀವನೋಪಾಯಕ್ಕೆ ಮಾರ್ಗ ಕಾಣದೆ ಸಂಕಷ್ಟದಲ್ಲಿ ಇರುವುದು ಈಗಿನ ಸ್ಥಿತಿಯಾಗಿದೆ.ಇದೇ ಸಂದರ್ಭದಲ್ಲಿ ಇದೀಗ ರಾಜ್ಯಾದ್ಯಂತ ವಿದ್ಯುಚ್ಛಕ್ತಿಯ ಬಿಲ್ಲು ಅವೈಜ್ಞಾನಿಕವಾಗಿ ಮನೆಗಳಿಗೆ ಮತ್ತು ಸಂಸ್ಥೆಗಳಿಗೆ ಬರುತ್ತಿದೆ ಎಂದು ರಾಜ್ಯಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ.
ಅದೇ ರೀತಿ ಕಳೆದ ಕೆಲವು ದಿನಗಳಿಂದ ಸುಳ್ಯ ನಗರದಲ್ಲಿ ಕೆಲವು ಕಡೆಗಳಲ್ಲಿ ಈ ರೀತಿಯ ದುಪ್ಪಟ್ಟು ಬಿಲ್ಲುಗಳು ಬರುತ್ತಿದ್ದು ಜನಸಾಮಾನ್ಯರು ಕಕ್ಕಾಬಿಕ್ಕಿಯಾಗಿ ಪರಸ್ಪರ ಮಾತನಾಡಿಕೊಳ್ಳುವುದು ಕಂಡುಬರುತ್ತಿದೆ.

ವಿಷಯ ತಿಳಿದ ಕೆಲವು ನಾಯಕರುಗಳು ಮೆಸ್ಕಾಂ ಅಧಿಕಾರಿಗಳಿಗೆ ಈ ಸಮಸ್ಯೆಯನ್ನು ಪರಿಹರಿಸುವಂತೆ ಮನವಿಯನ್ನು ನೀಡುತ್ತಿದ್ದರೆ ಇನ್ನೂ ಕೆಲವರು ಉಗ್ರ ಹೋರಾಟದ ಎಚ್ಚರಿಕೆಯನ್ನು ನೀಡುತ್ತಿದ್ದಾರೆ.ಇದಕ್ಕೆಲ್ಲ ಕಾರಣ ಕಳೆದ ಎರಡು ತಿಂಗಳ ಹಿಂದೆ ಲಾಕ್ಡೌನ್ ಆರಂಭಗೊಂಡಾಗ ರಾಜ್ಯಸರ್ಕಾರದಿಂದ ಮುಂದಿನ ಮೂರು ತಿಂಗಳವರೆಗೆ ವಿದ್ಯುತ್ ಬಿಲ್ಲಿನಲ್ಲಿ ರಿಯಾಯಿತಿಯನ್ನು ನೀಡುವ ಭರವಸೆಯನ್ನು ನೀಡಿತ್ತು. ಅದೇ ರೀತಿ ಕಳೆದ ಮಾರ್ಚ್ ತಿಂಗಳಲ್ಲಿ ಯಾವುದೇ ವಿದ್ಯುಚ್ಛಕ್ತಿಯ ಬಿಲ್ಲುಗಳು ಬಾರದೆ ಇರುವುದರಿಂದ ಜನರು ನಿಟ್ಟುಸಿರು ಬಿಟ್ಟಿದ್ದರು. ಆದರೆ ಇದೀಗ ತಲೆಯ ಮೇಲೆ ಬರಸಿಡಿಲು ಬಡಿದಂತೆ ಎಂಬ ಗಾದೆಯಂತೆ ಏಪ್ರಿಲ್ ತಿಂಗಳ ವಿದ್ಯುಚ್ಛಕ್ತಿಯ ಬಿಲ್ಲುಗಳು ಮನೆಗೆ ಬಂದಾಗ ಜನರು ಆಕಾಶದತ್ತ ಮುಖ ಮಾಡಿ ಯೋಚಿಸಲು ತೊಡಗುವ ರೀತಿಯಲ್ಲಿತ್ತು.ಕಳೆದ ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಎರಡು ಬಿಲ್ಲು ಒಟ್ಟು ಸೇರಿ ಡಬಲ್ ಬರುವಲ್ಲಿ ಡಬಲ್ ಗೆ ಡಬಲ್ ಬಂದಿರುತ್ತದೆ ಎಂದು ಯೋಚಿಸು ತೊಡಗಿದ್ದಾರೆ.

ಇದೇಕೆ ಹೀಗಾಯಿತು ಎಂದು ಮೆಸ್ಕಾಂ ಅಧಿಕಾರಿಗಳೊಂದಿಗೆ ಸಂಪರ್ಕಿಸಿದಾಗ ಉತ್ತರ ಈರೀತಿ ಆಗಿತ್ತು. ಕಳೆದ ಎರಡು ತಿಂಗಳಿನಿಂದ ಲಾಕ್ ಡೌನ್ ಆಗಿ ಪ್ರತಿಯೊಂದು ಮನೆಯಲ್ಲಿಯೂ ಕುಟುಂಬದ ಎಲ್ಲಾ ಸದಸ್ಯರುಗಳು ಮನೆಯಲ್ಲಿಯೇ ಇರುವ ಕಾರಣ ತಮ್ಮ ತಮ್ಮ ಮನೆಗಳಲ್ಲಿನ ಫ್ಯಾನ್, ಲೈಟ್ ,ಏಸಿ,
ಎಲ್ಲವೂ ಅತಿ ಹೆಚ್ಚು ಬಳಕೆಯಾಗುತ್ತದೆ. ಅದರೊಂದಿಗೆ ಬಿಸಿಲಿನ ತಾಪಮಾನವು ಹೆಚ್ಚಿದ್ದ ಕಾರಣ ಈ ಎಲ್ಲಾ ಉಪಕರಣಗಳು ಹೆಚ್ಚಿಗೆ ಬಳಸಿರುವ ಕಾರಣ ಈ ರೀತಿಯ ಬಿಲ್ಲುಗಳು ಬಂದಿರುತ್ತದೆ ಅಲ್ಲದೆ ಬೇರೇನೂ ಇಲ್ಲ. ನಾವು ನಿಗದಿತ ದರವನ್ನು ಹಾಕಿದ್ದೇವೆ ವಿನಹ ಹೆಚ್ಚಿನ ದರವನ್ನು ಹಾಕುವ ಅಧಿಕಾರ ನಮಗಿರುವುದಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ಆದರೆ ಸಾರ್ವಜನಿಕರು ತಮ್ಮ ತಮ್ಮ ಅಭಿಪ್ರಾಯವನ್ನು ಈ ರೀತಿಯಲ್ಲಿ ಹೇಳುತ್ತಿದ್ದಾರೆ 1ತಿಂಗಳಲ್ಲಿ ಮಿನಿಮಮ್ ಬಳಸುವ ವಾಟ್ಸ್ ಗಳಿಗೆ ಕಡಿಮೆ ದರದ ಬಿಲ್ಲು ಬರುತ್ತಿತ್ತು ಆದರೆ ಇದೀಗ ಎರಡು ತಿಂಗಳ ಬಿಲ್ಲನ್ನು ಒಟ್ಟಾಗಿ ನೀಡುವ ಸಂದರ್ಭಅದರ ಎರಡು ಪಟ್ಟು ಹೆಚ್ಚಾಗುತ್ತದೆ ಅದನ್ನು ತೋರಿಸಿರುತ್ತಾರೆ . ಇದಕ್ಕೆಲ್ಲಾ ಕಾರಣವಾದ ಎರಡು ತಿಂಗಳ ಬಿಲ್ಲು ಒಟ್ಟಿಗೆ ಬೇಡ . ಪ್ರತಿ ತಿಂಗಳ ಬೇರೆಬೇರೆ ಬಿಲ್ಲುಗಳನ್ನು ನಮಗೆ ನೀಡಲಿ ಎಂದು ಅಹವಾಲುಗಳನ್ನು ಹೇಳಿಕೊಳ್ಳುತ್ತಿದ್ದಾರೆ.

ಇದೀಗ ಇದಕ್ಕೆ ಸಂಬಂಧಿಸಿದಂತೆ ಸುಳ್ಯ ನಗರ ಯೂತ್ ಕಾಂಗ್ರೆಸ್ ಅಧ್ಯಕ್ಷ ಸಿದ್ಧಿ ಕೋಕೋ ಈ ಸಮಸ್ಯೆಯನ್ನು ಸರಿಪಡಿಸಿ ಕೊಡುವಂತೆ ಮೆಸ್ಕಾಂಅಧಿಕಾರಿಗಳಿಗೆ ಮನವಿಯನ್ನು ನೀಡಿರುತ್ತಾರೆ. ಅದೇರೀತಿ ಇನ್ನೊಬ್ಬ ಕಾಂಗ್ರೆಸ್ಸಿನ ಮುಖಂಡ ಕೆಪಿಸಿಸಿ ಕಾರ್ಯದರ್ಶಿ ಎಂ ವೆಂಕಪ್ಪ ಗೌಡ ಈ ಸಮಸ್ಯೆಯನ್ನು ಪರಿಹರಿಸಿ ಕೊಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆಯನ್ನು ನೀಡಿರುತ್ತಾರೆ.
ಒಟ್ಟಿನಲ್ಲಿ ಸಮಸ್ಯೆಗೆ ಸಂಬಂಧಿಸಿದಂತೆ ಮೆಸ್ಕಾಂ ಇಲಾಖೆ ಜನಸಾಮಾನ್ಯರಿಗೆ ಹೆಚ್ಚಿನ ಹೊರೆಯನ್ನು ನೀಡದೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.

Leave A Reply

Your email address will not be published.