ಆಧುನಿಕ ಕಾಲದಲ್ಲೂ ಪುರಾತನ ಕಾಲವನ್ನು ಅನುಸರಿಸುವಂತೆ ಮಾಡಿದ ಕೊರೊನಾ

ವಿಶ್ವಾದ್ಯಂತ ಜನರು ಕೊರೋನ ಎಂಬ ರೋಗದಿಂದ ಬಳಲುತ್ತಿದ್ದು , ಈ ಮಾರಕ ರೋಗದಿಂದ ತಪ್ಪಿಸಿಕೊಳ್ಳಲು ಅದೆಷ್ಟು ಕ್ರಮಗಳನ್ನು ವಿಶ್ವಾದ್ಯಂತ ಕೈಗೊಳ್ಳುತ್ತಿದ್ದಾರೆ . ನಮ್ಮ ದೇಶ ಭಾರತದಲ್ಲೂ ಕೊರೋನ ಭೀತಿ ಎದುರಾಗಿದ್ದು ಇದರ ವಿರುದ್ಧ ಹೋರಾಡಲು ನಮ್ಮ ದೇಶದ ಹೆಮ್ಮೆಯ ಪ್ರಧಾನಿಯಾದ ಶ್ರೀ ನರೇಂದ್ರ ದಾಮೋದರದಾಸ್ ಮೋದಿ ಅವರು ಭಾರತದಲ್ಲಿ 21 ದಿನಗಳ ಕಾಲ ಲಾಕ್ ಡೌನ್ ಅನ್ನು ಘೋಷಿಸಿದ್ದಾರೆ.

ಇವರು ಭಾರತೀಯ ಜನರ ಆರೋಗ್ಯದ ರಕ್ಷಣೆಗೋಸ್ಕರ ತೆಗೆದುಕೊಂಡ ನಿರ್ಧಾರ ಇದಾಗಿದೆ. ಇನ್ನು ಲಾಕ್ ಡೌನ್ ಪೂರ್ತಿಯಾಗಿ ಮುಗಿಯದಿದ್ದರು, ಈ ಸಂದರ್ಭದಲ್ಲಿ ಕಳೆದ ಕೆಲ ದಿನಗಳು ನಮ್ಮನ್ನು ಪೂರ್ವಜರ ಕಾಲಕ್ಕೆ ಕೊಂಡೊಯ್ದದ್ದು ಹಗಲಿನಂತೆ ಸತ್ಯ .

ಇತರ ದಿನಗಳಲ್ಲಿ ನಾವುಗಳೆಲ್ಲ ನಮ್ಮ ನಮ್ಮ ಕೆಲಸದಲ್ಲಿ ಬಹಳ ತಲ್ಲೀನರಾಗಿ ಇರುತ್ತೇವೆ.ಎಷ್ಟರಮಟ್ಟಿಗೆ ಎಂದರೆ ನಮ್ಮ ಮನೆಯಲ್ಲಿರುವ ಇನ್ನೊಬ್ಬರ ಜೊತೆ ಮಾತನಾಡಲು ಸಮಯ ಇರುವುದಿಲ್ಲ.

ಮನೆಯ ಮಕ್ಕಳು ಹಾಗೂ ಕೆಲವು ಸದಸ್ಯರು ದೂರದ ನಗರಗಳಿಗೆ ಹೋಗಿ ಯಾವ್ಯಾವುದೋ ಕಂಪನಿಯಲ್ಲಿ ಕೆಲಸ ಮಾಡುತ್ತಾ ತಮ್ಮನ್ನು ತಾವೇ ಮರೆತುಬಿಡುತ್ತಾರೆ. ಆದರೆ ಲಾಕ್ ಡೌನ್ ಸಮಯದಲ್ಲಿ ಹಕ್ಕಿಗಳೆಲ್ಲ ಸಂಜೆ ಹೊತ್ತಿಗೆ ಗೂಡು ಸೇರುವ ಹಾಗೆ ದೇಶ-ವಿದೇಶದ ನಾನಾ ಕಡೆಗಳಲ್ಲಿ ಕೆಲಸ ಮಾಡುತ್ತಿದ್ದವರು ತಮ್ಮ ತಮ್ಮ ಮನೆಸೀರಿದ್ದಾರೆ .

ಮನೆಯಿಂದ ಹೊರಗೆ ಹೋಗಬಾರದು ಎಂದು ತಿಳಿದಿರುವ ನಮಗೆಲ್ಲ ಮನೆಯೊಳಗೆ ಸುಮ್ಮನೆ ಕುಳಿತುಕೊಳ್ಳಲು ಈ ಜನ್ಮದಲ್ಲಿ ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಅಜ್ಜ-ಅಜ್ಜಿಯ ಕಾಲದಲ್ಲಿ ಬಳಕೆ ಮಾಡುತ್ತಿದ್ದ ಚೆನ್ನಮಣೆ, ಪಗಡೆ, ಲೂಡೋ , ಚೆಸ್ ಮೊದಲಾದವುಗಳು ನೆನಪಾಗುತ್ತದೆ.

ಮಾತ್ರವಲ್ಲದೆ ಅವುಗಳೊಂದಿಗೆ ಆಟ ಆಡುತ್ತಾ ಸಮಯ ಕಳೆಯುತ್ತೇವೆ. ಇದರ ಜೊತೆಗೆ ಇತರ ದಿನಗಳಲ್ಲಿ ನಾವುಗಳು ವಿಧವಿಧದ ಪಾಶ್ಚಿಮಾತ್ಯ ಅಡುಗೆಗಳನ್ನು ತಯಾರಿಸುತ್ತಾ, ಕೆಲವೊಂದನ್ನು ಬಗೆಯ ಅಡುಗೆಗಳನ್ನು ಆನ್ಲೈನ್ನಲ್ಲಿ ತರಿಸಿ ಸವಿಯುತ್ತಿದ್ದೆವು.

ಆದರೆ ಈಗ ಅದೆಲ್ಲ ಹೋಗಿ ಮನೆಯಲ್ಲಿ ಬೆಳೆದ ತರಕಾರಿ ಬಳಸಿಕೊಂಡು ಅಡುಗೆ ಮಾಡುತ್ತಾ , ಇರುವ ಒಂದಿಷ್ಟು ಸಾಮಗ್ರಿಗಳಲ್ಲಿ ಹೊಟ್ಟೆ ತುಂಬಿಸುತ್ತಾ ನಾವೆಲ್ಲರೂ ಪೂರ್ವಜರ ಕಾಲದತ್ತ ಮುಖ ಮಾಡುತ್ತಿದ್ದೇವೆ.

ಹೀಗೆ ವರ್ಷದ ಆರಂಭದಿಂದಲೇ ಕೆಲಸದ ನಿಮಿತ್ತ ಮನೆಯಿಂದ ಹೊರಗೆ ಇರುವ ಮಕ್ಕಳು, ತಂದೆ-ತಾಯಿ ಇವರೆಲ್ಲ ಕೊರೋನ ಎಂಬ ಮಹಾಮಾರಿ ಯಿಂದ ಒಂದೆಡೆ ಸೇರುವಂತಾಗಿದೆ. ಮನೆಯ ಸದಸ್ಯರೆಲ್ಲ ಒಟ್ಟುಗೂಡಿ ಮಾತನಾಡುತ್ತಾ, ಸುತ್ತಲೂ ಕೂತು ಊಟ ಮಾಡುತ್ತಾ, ಯಾವುದಾದರೊಂದು ಸಿನಿಮಾ ನೋಡಿ ಅದರ ಬಗ್ಗೆ ಕಮೆಂಟ್ ಹೊಡೆಯುತ್ತಾ ಸಮಯ ಕಳೆಯುತ್ತೇವೆ.

ರಾತ್ರಿಯಾದರೆ ಸಾಕು ಪದ ಬಂಡಿ, ಪದ್ಯ ಬಂಡಿ ಆಡುತ್ತಾ ಖುಷಿ ಖುಷಿಯಾಗಿ ಇರುತ್ತೇವೆ. ಇಲ್ಲಿಯವರೆಗೆ ಯಾರು ಇಲ್ಲದೆ ಇದ್ದ ಮನೆಗಳು ಇಂದು ತುಂಬಿದ ಮನೆಯಾಗಿ ಕಂಗೊಳಿಸುವಂತಾಗಿದೆ.

ಕೊರೋನ ಎಂಬ ಮಹಾಮಾರಿ ನಮ್ಮ ದೇಶದಿಂದ ಮತ್ತು ವಿಶ್ವ ದಿಂದಲೇ ಆದಷ್ಟು ಬೇಗ ತೊಲಗಲಿ ಈಗಾಗಲೇ ಈ ಸಮಸ್ಯೆಯಿಂದ ಬಳಲುತ್ತಿರುವ ಜನರು ಚೇತರಿಸಿಕೊಳ್ಳುವಂತೆಆಗಲಿ ಎಂದು ಆಶಿಸೋಣ. ಏನೇ ಇರಲಿ ಲಾಕ್ ಡೌನ್ ಸಮಯದಲ್ಲಿ ನಾವೆಲ್ಲರೂ ಹಿಂದಿನ ಕಾಲದ ಜೀವನಕ್ಕೆ ಬದಲಾಗುತ್ತಿರುವುದಂತು ಸೂರ್ಯನಷ್ಟೇ ಸತ್ಯ.

-ಸಂದೀಪ್ . ಎಸ್ . ಮಂಚಿಕಟ್ಟೆ , ಪ್ರಥಮ ಪತ್ರಿಕೋದ್ಯಮ ವಿಭಾಗ ವಿವೇಕಾನಂದ ಕಾಲೇಜು ಪುತ್ತೂರು.

Leave A Reply

Your email address will not be published.