ಕನಕಮಜಲು ಗ್ರಾಮದ ಕಾರಿಂಜದಲ್ಲಿ ಚಾರಣಕ್ಕೆ ಹೋಗಿ ಪೊಕ್ಕುಲ್ ಬರುವಂತೆ ಛಡಿ ಏಟು ತಿಂದರು !
ಲಾಕ್ ಡೌನ್ ಯಾಕೆ ಮಾಡಿದರು ಎಂದು ಜನಗಳಿಗೆ ಇನ್ನೂ ಅರ್ಥವಾಗಿಲ್ವಾ ?
ಹೌದು ವಿಶ್ವದಲ್ಲೆಡೆ ವ್ಯಾಪಿಸಿರುವ ಕೋರೋನಾ ವೈರಸ್ನಿಂದ ಬಳಲುತ್ತಿರುವುದು ಎಲ್ಲರಿಗೂ ತಿಳಿದಿರುವ ಮಾಹಿತಿ. ಅದಕ್ಕೋಸ್ಕರ ಇಡೀ ಭಾರತವೇ ಲಾಕ್ಡೌನ್ ಆಗಿದೆ. ಆದರೆ ಕೆಲವರು ಮೋಜು-ಮಸ್ತಿ ಎಂದು ಇನ್ನೂ ತಿರುಗಾಡುತ್ತಿದ್ದಾರೆ.
ಸುಳ್ಯ ತಾಲೂಕಿನ ಕನಕಮಜಲು ಗ್ರಾಮದ ಕಾರಿಂಜ ಎಂಬ ಊರಿನಲ್ಲಿ ಓಟೆಕಜೆ ಅರಣ್ಯ ಪ್ರದೇಶವಿದ್ದು ಅದೊಂದು ಸಣ್ಣ ಮಟ್ಟಿನ ಚಾರಣ ಪ್ರದೇಶವಾಗಿದ್ದು ಅದಕ್ಕೆ ಚಾರಣಕ್ಕೆಂದು ಜನ ಬರುತ್ತಿರುತ್ತಾರೆ. ಆದರೆ ಈ ಲಾಕ್ ಡೌನ್ ಇರುವ ಸಮಯದಲ್ಲಿ 18 ಜನರ ತಂಡ ಚಾರಣಕ್ಕೆ ಬಂದು ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ನಡೆದಿದೆ.
ಈ ಅರಣ್ಯ ಪ್ರದೇಶಕ್ಕೆ ಮೂರು ನಾಲ್ಕು ದಿನದಿಂದ ಕೆಲವರು ಬಂದು ಹೋಗುವುದನ್ನು ನೋಡಿ ಅಲ್ಲಿಯ ಸ್ಥಳೀಯರು ಭಯಬೀತಗೊಂಡಿದ್ದರು. ಯಾರ್ಯಾರೋ ಊರಿಗೆ ಬಂದು ಎಲ್ಲೆಲ್ಲಿಂದಲೋ ರೋಗ ತಂದು ನಮ್ಮ ಊರಿಗೆ ಬೀಜ ಹಾಕಿ ಹೋದರೆ ಎಂಬುದು ಜನರ ಸಹಜ ಆತಂಕ.
ಇವತ್ತು ಕನಕಮಜಲು ಗ್ರಾಮದ ಸುಣ್ಣ ಮೂಲೆ ನಿವಾಸಿಗಳಾದ 4 ವರ್ಷದ ಮಗು ಸೇರಿದಂತೆ ಮಹಿಳೆಯರು ಮತ್ತು ಪುರುಷರು ಸುಮಾರು 18 ಜನರ ತಂಡವೊಂದು ಕಾರಿನಲ್ಲಿ ಅಲ್ಲಿಗೆ ಚಾರಣಕ್ಕೆಂದು ಬಂದಿದೆ. ಅದನ್ನು ಕಂಡ ಸ್ಥಳೀಯರು ಪ್ರಜ್ಞಾವಂತರು ಕೂಡಲೇ ದೂರವಾಣಿಯ ಮೂಲಕ ಪೊಲೀಸರಿಗೆ ಮಾಹಿತಿ ನೀಡಿದರು.
ಅಲ್ಲಿಗೆ ಚಾರಣಕ್ಕೆ ಹೋದ ತಂಡ ತಮ್ಮ ಜತೆಗೆ ಚಾಪೆ, ಬಟ್ಟೆಬರೆ, ಹಗ್ಗ ಪಾತ್ರೆ ಪಗಡೆ ಮುಂತಾದುವುಗಳನ್ನು ತೆಗೆದುಕೊಂಡು ಹೋಗಿದ್ದರು. ಅಲ್ಲಿ ಒಲೆ ಹಚ್ಚಿ ಅಡುಗೆ ಮಾಡಿದ ಕುರುಹೂ ಕಂಡುಬರುತ್ತಿತ್ತು. ಗ್ರಾಮಸ್ಥರು ಎಚ್ಚೆತ್ತುಕೊಂಡು ಪೊಲೀಸರಿಗೆ ತಿಳಿಸದೆ ಹೋಗಿದ್ದರೆ, ಸಂಸಾರವನ್ನು ಕೂಡಾ ಹೂಡುತ್ತಿದ್ದರೋ ಏನೋ ?!
ಆದರೆ ಸಂಸಾರ ಹೂಡಲು ರೆಡಿಯಾಗಿದ್ದ ವ್ಯಕ್ತಿಗಳ ಬುಡಕ್ಕೆ ಪೊಕ್ಕುಲ್ ಬರುವ ಥರ ನಾಲ್ಕು ಬಾರಿಸಲಾಗಿದೆ. ಆನಂತರ ಚಾರಣಿಗರನ್ನು ಠಾಣೆಗೆ ಕರೆದೊಯ್ದು ನಂತರ ಅವರನ್ನು ವಿಚಾರಣೆಯ ಬಳಿಕ ಮನೆಗೆ ಬಿಡುಗಡೆ ಮಾಡಲಾಯಿತು.
ಚಾರಣಕ್ಕೆ ಬಂದ ವ್ಯಕ್ತಿಗಳಿಗೆ ಮಾಹಿತಿಯ ಕೊರತೆಯಿಲ್ಲ, ವಿದ್ಯಾಭ್ಯಾಸದ ಕೊರತೆಯಿಲ್ಲ, ಕೊರತೆಯಿದ್ದರೆ ಅದು ಸಾಮಾಜಿಕ ಜವಾಬ್ದಾರಿ ! ಅಲ್ಲಾ, ಏನೋ ಒಬ್ಬ ಇಬ್ಬರು ಹೊರಗಡೆ ಹೋದರೆ, ಅದೊಂದು ರೀತಿ. ಇಲ್ಲಿ 18 ಜನರು ಒಟ್ಟಿಗೆ ಹೊರಟಿದ್ದಾರೆ. ಅವರಲ್ಲಿ, ಆ 18 ಜನರಲ್ಲಿ ಗಂಡಸರು ಹೆಂಗಸರು ಇಬ್ಬರೂ ಇದ್ದಾರೆ. ಕನಿಷ್ಟ ಪಕ್ಷ ಒಬ್ಬರಾದರೂ ಆ ಗುಂಪಿನಲ್ಲಿ ಪ್ರಜ್ಞಾವಂತ ಇರಲಿಲ್ಲವಾ ಎನ್ನುವ ಪ್ರಶ್ನೆಗೆ ಉತ್ತರ ಇನ್ನೂ ಸಿಕ್ಕಿಲ್ಲ.
ಮದ್ಯ ಜೀವನಾವಶ್ಯಕ ವಸ್ತು ಹೌದಾ ಅಲ್ವಾ ? । ಸಂಪಾದಕೀಯ