CM Siddaramiah : ಕೆಲವು ದಿನಗಳ ಹಿಂದೆ ಆದಿಚುಂಚನಗಿರಿಯಲ್ಲಿ ನಡೆದ ಭೈರವ ಇಕ್ಯ ಮಂದಿರದ ಉದ್ಘಾಟನೆಗಾಗಿ ರಾಜ್ಯಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಸಿಎಂ ಸಿದ್ದರಾಮಯ್ಯ ಅವರು ಹೂ ಗುಚ್ಚ ನೀಡುವುದರ ಮೂಲಕ ಸ್ವಾಗತಿಸಿದ್ದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರ ಸಿದ್ದರಾಮಯ್ಯ ಕಿವಿಯಲ್ಲಿ ಏನೋ ಗುನುಗುಟ್ಟಿದ್ದರು. ಇದು ಏನು ಎಂಬುದಾಗಿ ಭಾರೀ ಕುತೂಹಲ ಕೆರಳಿಸಿತ್ತು. ಈ ವಿಚಾರವಾಗಿ ಈ ಇದೀಗ ಕೊನೆಗೂ ಸಿದ್ದರಾಮಯ್ಯ ಬಾಯಿಬಿಟ್ಟಿದ್ದಾರೆ.


ಮೈಸೂರಿನಲ್ಲಿ ಮಾತನಾಡಿದ ಸಿಎಂ, ಮಹಿಳಾ ಮೀಸಲಾತಿ ವಿಚಾರದಲ್ಲಿ ನಿಮ್ಮ ನಿಲುವು ಏನು ಎಂದು ನನ್ನ ಕಿವಿಯಲ್ಲಿ ಪ್ರಧಾನಿ ಮೋದಿ ಕೇಳಿದರು. ನಾನು ಮಹಿಳಾ ಮೀಸಲಾತಿ ಪರವಾಗಿದ್ದೇನೆ ಎಂದು ಹೇಳಿದೆ ಅಂತಾ ಪಿಎಂ ಗುಟ್ಟನ್ನು ಸಿಎಂ ರಟ್ಟು ಮಾಡಿದ್ದಾರೆ.
ಮಹಿಳಾ ಮೀಸಲಾತಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಪ್ರಧಾನಿಯವರಿಗೆ ಸಾಮಾಜಿಕ ನ್ಯಾಯದ ಮೇಲೆ ನಂಬಿಕೆಯಿದ್ದರೆ 2023ರಲ್ಲೇ ಮೀಸಲಾತಿಯನ್ನು ಜಾರಿಗೆ ತರಬೇಕಿತ್ತು. ಮೀಸಲಾತಿ ಜಾರಿಗೆ ನಮ್ಮ ಅಭ್ಯಂತರವಿಲ್ಲ, ಆದರೆ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯಲ್ಲಿ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗಬಾರದು ಎಂದು ತಿಳಿಸಿದರು.
ಪಂಚರಾಜ್ಯ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿ, ತಮಿಳುನಾಡಿಗೆ ಪ್ರಚಾರಕ್ಕೆ ನಾನು ಹೋಗುವುದಿಲ್ಲ. ತಮಿಳುನಾಡಿನಲ್ಲಿ ಡಿಎಂಕೆ ಗೆಲ್ಲಬಹುದು. ಬಿಜೆಪಿಯವರು ಪಂಚರಾಜ್ಯ ಚುನಾವಣೆಯಲ್ಲಿ ನಮ್ಮ ಗ್ಯಾರಂಟಿಗಳನ್ನ ನಕಲು ಮಾಡಿಕೊಂಡಿದ್ದಾರೆ. ನಮ್ಮ ಗ್ಯಾರಂಟಿಗಳನ್ನ ಮೊದಲು ಬಿಜೆಪಿ ವಿರೋಧ ಮಾಡುತ್ತಿತ್ತು. ಈಗ ಇದನ್ನ ಅವರೇ ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ಟಾಂಗ್ ಕೊಟ್ಟರು.

