ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಯಾರು ನಿರೀಕ್ಷಿಸದ ಮಟ್ಟದಲ್ಲಿ ದಳಪತಿ ವಿಜಯ್ ನೇತೃತ್ವದ ಟಿ ವಿ ಕೆ ಪಾರ್ಟಿ ಭರ್ಜರಿ ಜಯಭೇರಿ ಬಾರಿಸಿದೆ. ಇದೀಗ ಸರ್ಕಾರ ರಚನೆಗೆ ಹಕ್ಕು ಮಂಡನೆಯನ್ನು ಕೂಡ ಪಕ್ಷ ಮಾಡಿದೆ. ಪಕ್ಷ ಗೆಲುವಿನ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿಯವರು ನಟ ವಿಜಯ್ ಅವರಿಗೆ ಶುಭಾಶಯ ಕೋರಿದ್ದರು. ಆದರೆ ವಿಜಯ್ ಅವರು ಕೂಡಲೇ ಸ್ಪಂದಿಸದೆ ಒಂದು ದಿನದ ಬಳಿಕ ಇದೀಗ ಮೋದಿ ಶುಭಾಶಯಕ್ಕೆ ಕುತೂಹಲಕಾರಿ ರಿಪ್ಲೈ ನೀಡಿದ್ದಾರೆ.


ಹೌದು, ಫಲಿತಾಂಶ ಬಂದ ಬೆನ್ನಲ್ಲೆ ‘ತಮಿಳು ವೆಟ್ರಿ ಕಳಗಂ’ (ಟಿವಿಕೆ) ಪಕ್ಷಕ್ಕೆ ಶುಭಾಶಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಕ್ಷದ ಮುಖ್ಯಸ್ಥ ದಳಪತಿ ವಿಜಯ್ 1 ದಿನದ ಬಳಿಕ ಪ್ರತಿಕ್ರಿಯೆ ನೀಡಿದ್ದಾರೆ. ಇದರಲ್ಲಿ ಕುತೂಹಲಕರ ಸಂಗತಿ, ರಾಜಕೀಯ ತಂತ್ರಗಾರಿಕೆ ಅಡಗಿದ್ದು, ಸದ್ಯ ಇಬ್ಬರ ಟ್ವೀಟ್ ವೈರಲ್ ಆಗಿದೆ.
ಸೋಮವಾರ ಸಂಜೆ ಟ್ವೀಟ್ ಮಾಡಿದ ನರೇಂದ್ರ ಮೋದಿಯವರು “ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟವನ್ನು ಬೆಂಬಲಿಸಿದ ತಮಿಳುನಾಡಿನ ಮತದಾರರಿಗೆ ಕೃತಜ್ಞತೆಗಳು. ಜನರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಮತ್ತು ಅವರ ಜೀವನಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ನಾವು ಯಾವಾಗಲೂ ಮುಂಚೂಣಿಯಲ್ಲಿರುತ್ತೇವೆ. ಚುನಾವಣೆಯಲ್ಲಿ ಪ್ರಭಾವಶಾಲಿ ಸಾಧನೆ ಮಾಡಿರುವ ಟಿವಿಕೆ ಪಕ್ಷಕ್ಕೆ ಅಭಿನಂದನೆಗಳು,” ಎಂದಿದ್ದರು.
ಮಂಗಳವಾರ ಸಂಜೆ ಪ್ರಧಾನಿ ಮೋದಿ ಟ್ವೀಟ್ ರೀ ಟ್ವೀಟ್ ಮಾಡಿ ವಿಜಯ್ “ನಿಮ್ಮ ಶುಭಾಶಯಕ್ಕೆ ಧನ್ಯಾವಾದ. ನಮ್ಮ ಜನರ ಯೋಗಕ್ಷೇಮ ನಮ್ಮ ಏಕೈಕ ಗುರಿಯಾಗಿದೆ. ರಾಜಕೀಯವನ್ನು ಮೀರಿ, ನಾವು ರಾಜ್ಯದ ಪ್ರಗತಿ ಮತ್ತು ತಮಿಳುನಾಡಿನ ಜನರ ಕಲ್ಯಾಣದ ಮೇಲೆ ಕೇಂದ್ರೀಕರಿಸುತ್ತೇವೆ. ಈ ಪ್ರಯತ್ನದಲ್ಲಿ ನಾವು ಕೇಂದ್ರ ಸರ್ಕಾರದ ಬೆಂಬಲವನ್ನು ಎದುರು ನೋಡುತ್ತಿದ್ದೇವೆ” ಎಂದು ಬರೆದುಕೊಂಡಿದ್ದಾರೆ.
ಇಲ್ಲಿ ಪ್ರಧಾನಿ ಮೋದಿಯವರು ಶುಭಾಶಯ ಕೋರುವ ಸಂದರ್ಭದಲ್ಲಿ ತಮ್ಮ ಪ್ರಧಾನಿ ಖಾತೆಯಿಂದ ಟ್ವೀಟ್ ಮಾಡುವ ಬದಲು ವೈಯಕ್ತಿಕ ಖಾತೆಯಿಂದ ಟ್ವೀಟ್ ಮಾಡಿದ್ದರು. ಅಲ್ಲದೆ ನಟ ವಿಜಯ್ ದಳಪತಿ ಅವರ ಹೆಸರನ್ನು ಉಲ್ಲೇಖಿಸದೆ ಟಿ ವಿ ಕೆ ಪಾರ್ಟಿಯನ್ನು ಮಾತ್ರ ಹೆಸರಿಸಿದ್ದರು. ಇದಕ್ಕೆ ಕೌಂಟರ್ ಕೊಡುವ ರೀತಿಯಲ್ಲಿ ವಿಜಯ್ ಅವರು ಪ್ರತಿಕ್ರಿಯೆ ನೀಡಿದ್ದು, ಮೋದಿಯವರ ವೈಯಕ್ತಿಕ ಖಾತೆಯನ್ನು ಉಲ್ಲೇಖಿಸುವ ಬದಲು ಪ್ರಧಾನಿ ಅವರ ಖಾತೆಯನ್ನು ಮೆನ್ಷನ್ ಮಾಡಿದ್ದಾರೆ. ಪ್ರಧಾನಿಯವರ ಬೆಂಬಲ ಕೋರುತ್ತೇನೆ ಎನ್ನುವ ಬದಲು ಕೇಂದ್ರ ಸರ್ಕಾರದ ಬೆಂಬಲ ಕೋರುತ್ತೇನೆ ಎಂದು ಹೇಳಿದ್ದಾರೆ.

