ಪೆರ್ನಾಜೆ: ಸ್ವರೂಪ ಶಿಕ್ಷಣ ಸಾಧನ ಕೇಂದ್ರ, ಪೆರ್ನಾಜೆಯಲ್ಲಿ ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಶಾಲಾ ವಿದ್ಯಾರ್ಥಿ ನಾಯಕ ಹಾಗೂ ಸಹಾಯಕ ಶಾಲಾ ವಿದ್ಯಾರ್ಥಿ ನಾಯಕ ಚುನಾವಣೆ ಅತ್ಯಂತ ಸಂಭ್ರಮ, ಶಿಸ್ತು ಮತ್ತು ಉತ್ಸಾಹದೊಂದಿಗೆ ನಡೆಯಿತು.


ಶಾಲಾ ಆವರಣದಲ್ಲಿ ನೈಜ ಚುನಾವಣೆಯ ಮಾದರಿಯಲ್ಲೇ ಸುಸಜ್ಜಿತ ಮತಗಟ್ಟೆಗಳನ್ನು ಸಿದ್ಧಪಡಿಸಲಾಗಿತ್ತು. ಮತದಾರರ ಸಹಿ ಪಡೆಯುವ ಅಧಿಕಾರಿಗಳು, ಮತದಾರರ ಗುರುತಿನ ಪರಿಶೀಲನೆ ನಡೆಸುವ ಸಿಬ್ಬಂದಿ ಹಾಗೂ ಇಂಕ್ ಗುರುತು ಹಾಕುವ ಅಧಿಕಾರಿಗಳನ್ನು ನೇಮಿಸಲಾಗಿದ್ದು, ವಿದ್ಯಾರ್ಥಿಗಳು ಸರದಿ ಸಾಲಿನಲ್ಲಿ ನಿಂತು ತಮ್ಮ ಅಮೂಲ್ಯ ಮತವನ್ನು ಚಲಾಯಿಸಿದರು.
ಶಾಲಾ ವಿದ್ಯಾರ್ಥಿ ನಾಯಕ ಹುದ್ದೆಗೆ ಇಬ್ಬರು ಹಾಗೂ ಸಹಾಯಕ ಶಾಲಾ ವಿದ್ಯಾರ್ಥಿ ನಾಯಕ ಹುದ್ದೆಗೆ ಐವರು ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಅಭ್ಯರ್ಥಿಗಳು ತಮ್ಮ ನಾಯಕತ್ವದ ಗುಣಗಳನ್ನು ವಿದ್ಯಾರ್ಥಿಗಳ ಮುಂದೆ ಪರಿಚಯಿಸಿದರು. ತಂತ್ರಜ್ಞಾನದ ಸಹಾಯದಿಂದ ಮೊಬೈಲ್ ಮೂಲಕ ಆನ್ಲೈನ್ ವಿದ್ಯುನ್ಮಾನ ಮತ ಯಂತ್ರ ವ್ಯವಸ್ಥೆಯಲ್ಲಿ ಮತದಾನ ನಡೆಸಲಾಯಿತು. ವಿದ್ಯಾರ್ಥಿಗಳು ಅತ್ಯಂತ ಜವಾಬ್ದಾರಿಯುತವಾಗಿ ಮತ ಚಲಾಯಿಸಿ ಪ್ರಜಾಪ್ರಭುತ್ವದ ಹಬ್ಬವನ್ನು ಅರ್ಥಪೂರ್ಣಗೊಳಿಸಿದರು.
ಸಂಸ್ಥೆಯ ಅಧ್ಯಕ್ಷರಾದ ಗೋಪಾಡ್ಕರ್ ಅವರು, ಶಿಕ್ಷಕ ವೃಂದ ಹಾಗೂ ಬೋಧಕೇತರ ಸಿಬ್ಬಂದಿಯವರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾದರಿಯಾದರು. ಚುನಾವಣೆಯ ಸಂಪೂರ್ಣ ಪ್ರಕ್ರಿಯೆ ಶಾಂತಿಯುತವಾಗಿ ಹಾಗೂ ಪಾರದರ್ಶಕವಾಗಿ ನಡೆಯಿತು.
ಈ ವಿನೂತನ ಚುನಾವಣಾ ಚಟುವಟಿಕೆ ವಿದ್ಯಾರ್ಥಿಗಳಿಗೆ ನಾಯಕತ್ವ, ಜವಾಬ್ದಾರಿ, ಮತದಾನದ ಮಹತ್ವ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಕುರಿತು ನೇರ ಅನುಭವ ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
“ನಿನ್ನೆ ನಡೆದ ಚುನಾವಣೆ, ಆ ಶಿಸ್ತು, ಆ ಕ್ರಮ ಅದೇ ಸರಕಾರದ ಕ್ರಮ. ಮಕ್ಕಳಿಗೆ ಶಿಕ್ಷಕರು ಕೊಟ್ಟ ದಾರಿ ಬೆಂಬಲ ಛೆ..! ಛೆ..! ಏನು ಚೆನ್ನಾಗಿತ್ತು ಗೊತ್ತಾ..!!.ಮಕ್ಕಳಿಗೆ ಮೊದಲ ಬೊಬ್ಬೆ ಹೊಡೆದು ಕುಣಿ ಕುಣಿವ ಸಂಭ್ರಮ ನೋಡೋದೇ ಮಜಾರೀ. ಓಟು ಹಾಕಿದವರು ಯಾರೆಲ್ಲಾ..? ಅಲ್ಲಿದ್ದ ಎಲ್ಲಾ ಕೆಲಸಗಾರರು, ಅಯ್ಯೋ..ಅವರಿಗೆ ಮಕ್ಕಳೆಲ್ಲರೂ ಕೊಡುವ ಗೌರವಕ್ಕೆ ಅವರು ಎಲ್ಲರೂ ಮಕ್ಕಳಿಗೆ ಶರಣು. ಇನ್ನು ಅಲ್ಲಿದ್ದ ನಾಯಿ ಮರಿಗಳಿಗೂ ಓಟು ಕೊಡು.. ಓಟು ಹಾಕಲು ಬಾ.. ನಾನು ನಿಂಗೆ ಅದು ಕೊಡ್ತೇನೆ ಈ ಭರವಸೆ ಕೊಡ್ತೇನೆ ಅಂತ ಹೇಳೋದು ನೋಡೋದು ಚಂದ ಇತ್ತು. ಗೆದ್ದಾಗ ವಿರೋಧ ಪಕ್ಷದವರ ಜೊತೆ ಎಷ್ಟು ಗೆಳೆತನ. ಅದೇ ಸ್ವರೂಪದ ಚಂದ.” ಇದು ಪೋಷಕರೊಬ್ಬರ ಉದ್ಗಾರ.

