ಕೇರಳ ಸರ್ಕಾರ ತಾನು ಘೋಷಿಸಿದಂತೆ ರಾಜ್ಯದ ಮಹಿಳೆಯರಿಗೆ ‘ಪ್ರಿಯದರ್ಶಿನಿ’ ಹೆಸರಿನಲ್ಲಿ ಉಚಿತ ಬಸ್ ಪ್ರಯಾಣ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಈ ಹಿನ್ನಲೆಯಲ್ಲಿ ಕೊಲ್ಲಂನಲ್ಲಿ ಇದರ ಉದ್ಘಾಟನೆಯನ್ನು ಆಯೋಜಿಸಲಾಗಿತ್ತು. ಉದ್ಘಾಟನೆ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಬಿಂದು ಕೃಷ್ಣ (Bindu Krishna) ಅವರ ತಲೆಯ ಮೇಲೆ ಬಿಸಿ ಪಾಯಸ ಬಿದ್ದ ಆಘಾತಕಾರಿ ಘಟನೆ ನಡೆದಿದೆ.


ಕೊಲ್ಲಂ ಕೆಎಸ್ಆರ್ಟಿಸಿ ಡಿಪೋದಲ್ಲಿ ‘ಪ್ರಿಯದರ್ಶಿನಿ’ ಉಚಿತ ಬಸ್ ಪ್ರಯಾಣ ಯೋಜನೆಯ ಜಿಲ್ಲಾ ಮಟ್ಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವೆ ಬಿಂದು ಕೃಷ್ಣ ಭಾಗಿಯಾಗಿದ್ದರು. ಈ ವೇಳೆ, ಸಾರ್ವಜನಿಕರು ಮತ್ತು ಗಣ್ಯರಿಗೆ ಪಾಯಸ ವಿತರಿಸಲು ಯೂತ್ ಕಾಂಗ್ರಸ್ನಿಂದ ವ್ಯವಸ್ಥೆ ಮಾಡಲಾಗಿತ್ತು. ಭಾರೀ ಜನದಟ್ಟಣೆಯಿಂದ ತುಂಬಿದ್ದ ಉದ್ಘಾಟನಾ ಬಸ್ಸಿನೊಳಗೆ ಪಾಯಸ ವಿತರಿಸುತ್ತಿದ್ದಾಗ ಬಿಸಿ ಪಾಯಸ ಆಕಸ್ಮಿಕವಾಗಿ ಚೆಲ್ಲಿ, ಸಚಿವೆಯ ತಲೆಯ ಮೇಲೆ ಬಿದ್ದಿದೆ.
ತಕ್ಷಣ ಅಲ್ಲಿದ್ದ ಜನ ಟವೆಲ್ ಹಾಗೂ ಶಾಲು ಬಳಸಿ ಸಚಿವೆಯ ತಲೆ ಹಾಗೂ ಮುಖವನ್ನು ಒರೆಸಿದ್ದಾರೆ. ಬಿಸಿಯ ನೋವಿನ ನಡುವೆಯೂ ಸಚಿವೆ ಶಾಂತಿಯಿಂದ ಇದ್ದರು. ಅಲ್ಲದೇ ಕಾರ್ಯಕ್ರಮ ಸ್ಥಗಿತಗೊಳಿಸಲು ನಿರಾಕರಿಸಿದರು. ಬಸ್ನಲ್ಲೇ ಇದ್ದು, ಚಿನ್ನಕ್ಕಡ ತಲುಪುವವರೆಗೆ ಪ್ರಯಾಣಿಸಿ, ನಂತರ ಹಿಂತಿರುಗಿದರು. ಈ ಘಟನೆಯಿಂದ ಬಸ್ನಲ್ಲಿದ್ದವರು ಕ್ಷಣಕಾಲ ಆಘಾತಕ್ಕೊಳಗಾಗಿದ್ದರು. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
