ರಾಜ್ಯದ ರೈತರಿಗೆ ಒಂದು ಅಘಾತಕಾರಿ ಸುದ್ದಿ ಎದುರಾಗಿದೆ. ಅದೇನೆಂದರೆ ರಾಜ್ಯದಲ್ಲಿ ನೈಋತ್ಯ ಮುಂಗಾರು ಮಾರುತಗಳು ತೀವ್ರ ದುರ್ಬಲಗೊಂಡಿದ್ದು, ಜೂನ್ ಮೊದಲ ಎರಡು ವಾರಗಳಲ್ಲಿ ವಾಡಿಕೆಗಿಂತ ಭಾರಿ ಕಡಿಮೆ ಮಳೆಯಾಗಿದೆ. ಇದರಿಂದಾಗಿ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿದ್ದು, ತೀವ್ರ ಆತಂಕ ಎದುರಾಗಿದೆ.


ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ರಾಜ್ಯದಲ್ಲಿ ನೈಋತ್ಯ ಮುಂಗಾರು ದುರ್ಬಲಗೊಂಡಿದ್ದು, ಜೂನ್ ಮೊದಲ ಎರಡು ವಾರಗಳಲ್ಲಿ ವಾಡಿಕೆಗಿಂತ ಶೇ.21ರಷ್ಟು ಕಡಿಮೆ ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ಪೂರ್ವ ಮುಂಗಾರು ಮಳೆ ಕೂಡ ಕಡಿಮೆ ಬಿದ್ದಿರುವುದರಿಂದ ಜಲಾಶಯಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ನೀರಿನ ಮಟ್ಟ ಕಡಿಮೆಯಿರುವುದು ಆತಂಕ ಮೂಡಿಸಿದೆ.
ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿಗೆ ಕುಡಿಯುವ ನೀರು ಒದಗಿಸುವ ಕಾವೇರಿ ಕಣಿವೆಯ ಜಿಲ್ಲೆಗಳಲ್ಲಿ ವಾಡಿಕೆಗಿಂತ ಶೇ.36ರಷ್ಟು ಕಡಿಮೆ ಮಳೆಯಾಗಿದೆ. ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಸುರಿಯುವ ಕರಾವಳಿಯಲ್ಲೂ ಶೇ.41ರಷ್ಟು ಕಡಿಮೆ ಮಳೆಯಾಗಿದೆ. ಇನ್ನು ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನಲ್ಲಿ ಕ್ರಮವಾಗಿ ಶೇ.2 ಮತ್ತು ಶೇ.1ರಷ್ಟು ಕಡಿಮೆ ಮಳೆಯಾಗಿದೆ.
ರಾಜ್ಯದ ವಿವಿಧ ಭಾಗಗಳಲ್ಲಿ ಮುಂಗಾರು ಕೈಕೊಟ್ಟಿದ್ದು, ಕರಾವಳಿ ಮತ್ತು ಕಾವೇರಿ ಕಣಿವೆಯಲ್ಲಿ ಭಾರಿ ಆತಂಕ ಸೃಷ್ಟಿಯಾಗಿದೆ. ಕರಾವಳಿ ಭಾಗದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಡಿಕೆ ಮಳೆ 376.9 ಮಿ.ಮೀ ಬದಲು 257.1 ಮಿ.ಮೀ ಮಳೆಯಾಗಿದ್ದು, ಕೊರತೆ ಪ್ರಮಾಣ ಶೇ 32. ಉಡುಪಿ ಜಿಲ್ಲೆಯಲ್ಲಿ 455.8 ಮಿ.ಮೀ ವಾಡಿಕೆಗಿಂತ 313.1 ಮಿ.ಮೀ ಮಳೆಯಾಗಿದ್ದು ಶೇ 31ರಷ್ಟು ಕೊರತೆ ಎದುರಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ವಾಡಿಕೆ 280.4 ಮಿ.ಮೀ ಬದಲು 197. 7 ಮಿ.ಮೀ ಮಳೆಯಾಗಿದ್ದು, ಕೊರತೆ ಪ್ರಮಾಣ ಶೇ 30, ಈ ಮೂರು ಜಿಲ್ಲೆ ಕೊರತೆ ಪ್ರಮಾಣವು ಶೇ 31ರಷ್ಟಿದೆ. ಉತ್ತರ ಒಳನಾಡಿನ ಬಾಗಲಕೋಟೆ ಜಿಲ್ಲೆಯಲ್ಲಿ ವಾಡಿಕೆ 51.2 ಮಿ.ಮೀಗಿಂತ 73.2 ಮಿ.ಮೀನಷ್ಟು ಮಳೆಯಾಗಿದ್ದು, ಶೇ 43 ರಷ್ಟು, ಬೆಳಗಾವಿ ಜಿಲ್ಲೆಯಲ್ಲಿ ವಾಡಿಕೆ 65.7 ಮಿ.ಮೀ ಬದಲು 89.5 ರಷ್ಟು ಮಿ.ಮೀ ಅಂದರೆ ಶೇ 36ರಷ್ಟು ಹೆಚ್ಚು ಮಳೆಯಾಗಿದೆ.

