ಇತ್ತೀಚೆಗೆ ಕಲಬುರಗಿಯಲ್ಲಿ (Kalaburagi) ನೀಟ್ (NEET) ಪರೀಕ್ಷೆ ಬರೆದ ಬೆನ್ನಲ್ಲೇ ವಿದ್ಯಾರ್ಥಿನಿ ಭಾಗ್ಯಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.


ಆತ್ಮಹತ್ಯೆ ಮಾಡಿಕೊಂಡ ಈ ಯುವತಿ, ದ್ವಿತೀಯ ಪಿಯುಸಿ (2nd PUC) ಪರೀಕ್ಷೆಯಲ್ಲೇ ಫೇಲಾಗಿದ್ದ ಕಹಿ ಸತ್ಯ ತಡವಾಗಿ ಬೆಳಕಿಗೆ ಬಂದಿದೆ.ಯಸ್, ದ್ವಿತೀಯ ಪಿಯುಸಿ ಮುಖ್ಯ ಪರೀಕ್ಷೆಯ ಫಲಿತಾಂಶ ಪ್ರಕಟವಾದಾಗ, ತಾನು ಶೇಕಡಾ 92 ರಷ್ಟು ಅಂಕಗಳನ್ನು ಗಳಿಸಿ ಉತ್ತೀರ್ಣಳಾಗಿದ್ದೇನೆ ಎಂದು ಭಾಗ್ಯಶ್ರೀ ತನ್ನ ಪೋಷಕರಿಗೆ ಸುಳ್ಳು ಹೇಳಿದ್ದಳು. ಮಗಳ ಮಾತನ್ನು ಸಂಪೂರ್ಣವಾಗಿ ನಂಬಿದ ಹೆತ್ತವರು, ಆಕೆಯ ವೈದ್ಯಕೀಯ ಶಿಕ್ಷಣದ ಕನಸಿಗೆ ಹೆಗಲು ಕೊಟ್ಟು ನೀಟ್ ಪರೀಕ್ಷೆ ಬರೆಯಲು ಪ್ರೋತ್ಸಾಹಿಸಿದ್ದರು. ಅದರಂತೆ ಆಕೆ ಇತ್ತೀಚೆಗಷ್ಟೇ ನೀಟ್ ಪರೀಕ್ಷೆಯನ್ನೂ ಬರೆದಿದ್ದಳು.
ಇತ್ತೀಚೆಗೆ ಭಾಗ್ಯಶ್ರೀ ಅಂಕಪಟ್ಟಿ ದೊರೆತಿದ್ದು, ಮುಖ್ಯ ಪರೀಕ್ಷೆಯಲ್ಲೇ ಗಣಿತ ಮತ್ತು ಭೌತಶಾಸ್ತ್ರ ವಿಷಯಗಳಲ್ಲಿ ಅನುತ್ತೀರ್ಣಳಾಗಿದ್ದಳು. ಆ ಬಳಿಕ ಆಕೆ ನಡೆದ ಪಿಯುಸಿ ಪರೀಕ್ಷೆ-2 ರಲ್ಲೂ ಭಾಗವಹಿಸಿದ್ದಳು. ಈ ಮರುಪರೀಕ್ಷೆಯಲ್ಲಿ ಭೌತಶಾಸ್ತ್ರದಲ್ಲಿ 51 ಅಂಕಗಳನ್ನು ಪಡೆದು ಹೇಗೋ ಪಾಸಾಗಿದ್ದರೂ, ಗಣಿತದಲ್ಲಿ ಕಾಲೇಜಿನ 20 ಆಂತರಿಕ (ಇಂಟರ್ನಲ್) ಅಂಕಗಳನ್ನು ಸೇರಿಸಿಯೂ ಕೇವಲ 24 ಅಂಕಗಳನ್ನು ಪಡೆಯಲಷ್ಟೇ ಶಕ್ತಳಾಗಿ ಮತ್ತೆ ಫೇಲಾಗಿದ್ದಳು.
ಇನ್ನೂ ಮೇ 21 ರಂದು ಪಿಯುಸಿ ಪರೀಕ್ಷೆ-2 ರ ಫಲಿತಾಂಶ ಹೊರಬಿದ್ದಿತ್ತು. ತಾವು ಇಟ್ಟಿದ್ದ ಭರವಸೆ ಸುಳ್ಳಾಯಿತು ಎಂದು ಪೋಷಕರು ಎಲ್ಲಿ ಬೈಯುತ್ತಾರೋ ಎನ್ನುವ ತೀವ್ರ ಭಯ ಮತ್ತು ಮುಖಭಂಗದಿಂದಲೇ ಮನನೊಂದ ಆಕೆ ಆತ್ಮಹತ್ಯೆಯ ಹಾದಿ ಹಿಡಿದಿರಬಹುದು ಎಂದು ಬಲವಾಗಿ ಶಂಕಿಸಲಾಗಿದೆ.
ಭಾಗ್ಯಶ್ರೀ ಆತ್ಮಹತ್ಯೆ ಮಾಡಿಕೊಂಡ ಬಳಿಕ ಅನುಮಾನಗಳು ಸುಳಿದಾಡುತ್ತಿದ್ದವು. ಸದ್ಯ ವಿದ್ಯಾರ್ಥಿನಿಯ ಅಂಕಪಟ್ಟಿ ಕೈಸೇರುತ್ತಿದ್ದಂತೆ ತನಿಖೆಯ ದಿಕ್ಕು ಬದಲಾಗಿದೆ. ಈ ನಿಟ್ಟಿನಲ್ಲಿ ನಗರದ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರಕರಣವನ್ನು ದಾಖಲಿಸಿಕೊಂಡು, ಪಿಯುಸಿ ಫೇಲ್ ಆದ ಮುಖಭಂಗ ಹಾಗೂ ಭಯದಿಂದಲೇ ಈ ಆತ್ಮಹತ್ಯೆ ನಡೆದಿದೆಯೇ ಎಂಬ ಕೋನದಲ್ಲಿ ತನಿಖೆ ಕೈಗೊಂಡಿದ್ದಾರೆ.

