ಹೈದರಬಾದಿನ ಬಾತಿನಿ ಕುಟುಂಬದವರು ಅತ್ಯಂತ ರಹಸ್ಯವಾಗಿ ಸಿದ್ಧಪಡಿಸುವ ಗಿಡಮೂಲಿಕೆ ಪೇಸ್ಟ್ ಅನ್ನು ಜೀವಂತ ಸಣ್ಣ ಮುರ್ರೆಲ್ ಮೀನಿನ ಬಾಯಿಯಲ್ಲಿಟ್ಟು ರೋಗಿಗಳಿಗೆ ನುಂಗಿಸಲಾಗುತ್ತದೆ. ಹೀಗಾಗಿ ಲಕ್ಷಾಂತರ ಭಕ್ತರು ಇಲ್ಲಿಗೆ ಆಗಮಿಸಿ ಮೀನಿನ ಪ್ರಸಾದವನ್ನು ಪಡೆದಿದ್ದಾರೆ. ಹಾಗಿದ್ರೆ ಏನು ಈ ಮೀನಿನ ಪ್ರಸಾದ? ಇದನ್ನು ಪಡೆದರೆ ಏನು ಲಾಭ?


ಏನಿದು ಮೀನಿನ ಪ್ರಸಾದ?:
ಮುರ್ರೆಲ್ ಮೀನನ್ನು ಮನೆಯಲ್ಲೇ ತಯಾರಿಸಿದ ನಾಟಿ ಔಷಧಿಯಲ್ಲಿ ಮುಳುಗಿಸಿ ಜೀವಂತವಾಗಿ ರೋಗಿಗೆ ನುಂಗಲು ನೀಡಲಾಗುತ್ತದೆ. ಇದನ್ನು ಮೀನು ಪ್ರಸಾದವೆಂದು ಕರೆಯುತ್ತಾರೆ. ರೋಗಿಯ ಗಂಟಲಿನ ಮೂಲಕ ಹೊಟ್ಟೆ ಸೇರುವ ಈ ಚಿಕ್ಕ ಮೀನು, ಸುಲಭವಾಗಿ ಉಸಿರಾಡಲು ಸಹಾಯ ಮಾಡುತ್ತದೆ ಎಂಬುದು ಬಥಿನಿ ಕುಟುಂಬದವರ ಅಭಿಪ್ರಾಯ. ಬಾತಿನಿ ಕುಟುಂಬದವರು ಅತ್ಯಂತ ರಹಸ್ಯವಾಗಿ ಇದನ್ನು ಸಿದ್ದಪಡಿಸುತ್ತಾರೆ.
ಕಳೆದ 80 ವರ್ಷಗಳಿಂದ ಬಥಿನಿ ಕುಟುಂಬದವರು ಇಲ್ಲಿ ಮೀನಿನ ಪ್ರಸಾದ ವಿತರಣೆ ಮಾಡುತ್ತಿದ್ದಾರೆ. ಅಮರನಾಥ್ ಗೌಡ್ ಎನ್ನುವವರು, ‘ನಮ್ಮ ಕುಟುಂಬವು ಮೀನು ಪ್ರಸಾದವನ್ನು ನೀಡುತ್ತಿದೆ. ಈ ಮೀನು ಪ್ರಸಾದವನ್ನು ಸೇವಿಸಿದ ನಂತರ, ಶ್ವಾಸನಾಳದ ಕಾಯಿಲೆಗಳಿಂದ ಬಳಲುತ್ತಿರುವವರು ನಿರ್ದಿಷ್ಟ ಆಹಾರವನ್ನು ಅನುಸರಿಸಬೇಕಾಗುತ್ತದೆ. ಮೀನು ಪ್ರಸಾದವನ್ನು ತಯಾರಿಸಲು, ಯುಗಾದಿಗೆ ಮುಂಚಿತವಾಗಿ ನಾವು ದೇಶಾದ್ಯಂತ ಗಿಡಮೂಲಿಕೆಗಳನ್ನು ಪಡೆದುಕೊಳ್ಳುತ್ತೇವೆ’ ಎಂದರು.
ಬಾತಿನಿ ಕುಟುಂಬದ ಸದಸ್ಯ ಬಾತಿನಿ ಅನಿರುದ್ಧ್ ಗೌಡ್ ಅವರ ಪ್ರಕಾರ, 1845ರಲ್ಲಿ ಸಾಧುವೊಬ್ಬರು ಇವರ ಪೂರ್ವಜರಾದ ಬಾತಿನಿ ವೀರಣ್ಣ ಗೌಡ್ ಅವರಿಗೆ ಈ ರಹಸ್ಯ ಗಿಡಮೂಲಿಕೆ ಸೂತ್ರವನ್ನು ನೀಡಿದ್ದರು. ಸಾರ್ವಜನಿಕರಿಗೆ ಇದನ್ನು ಉಚಿತವಾಗಿ ನೀಡಬೇಕು ಎಂಬ ಷರತ್ತಿನ ಮೇರೆಗೆ ತಲೆಮಾರುಗಳಿಂದ ಈ ಸೇವೆಯನ್ನು ಉಚಿತವಾಗಿಯೇ ನಡೆಸಿಕೊಂಡು ಬರಲಾಗುತ್ತಿದೆ.
ಬರೋಬ್ಬರಿ 180 ವರ್ಷಗಳ ಇತಿಹಾಸ ಹೊಂದಿರುವ ಸಾಂಪ್ರದಾಯಿಕ ‘ಮೀನು ಪ್ರಸಾದ’ (ಚೇಪ ಪ್ರಸಾದಂ) ವಿತರಣಾ ಕಾರ್ಯಕ್ರಮಕ್ಕೆಂದು ಹೈದರಾಬಾದ್ಗೆ ಭಕ್ತರ ಹಾಗೂ ರೋಗಿಗಳ ಸಾಗರವೇ ಹರಿದುಬಂದಿದ್ದು, ಮೃಗಶಿರಾ ಕಾರ್ತಿ ಹಬ್ಬದ ಶುಭ ಸಂದರ್ಭದಲ್ಲಿ ಹೈದರಾಬಾದ್ನ ನಾಂಪಲ್ಲಿ ಪ್ರದರ್ಶನ ಮೈದಾನದಲ್ಲಿ ಆಯೋಜಿಸಲಾಗಿದ್ದ ಈ ಪ್ರಸಾದ ವಿತರಣೆಗೆ ದೇಶದ ಮೂಲೆ ಮೂಲೆಗಳಿಂದ ಲಕ್ಷಾಂತರ ಜನರು ಆಗಮಿಸಿದ್ದರು.
ಈ ಪ್ರಸಾದ ಪಡೆಯಲು ಕೇವಲ ತೆಲಂಗಾಣ ಮಾತ್ರವಲ್ಲದೆ ಒಡಿಶಾ, ಬಿಹಾರ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ಸಾವಿರಾರು ಕಿಲೋಮೀಟರ್ ಪ್ರಯಾಣ ಬೆಳೆಸಿ ಜನರು ಬಂದಿದ್ದರು. ಒಡಿಶಾದಿಂದ ಕುಟುಂಬದೊಂದಿಗೆ ಬಂದಿದ್ದ ಕಪಿಲ್ ಹಾಗೂ ಬಿಹಾರದ ಮತ್ತೊಬ್ಬರು ಮಾತನಾಡಿ, ತಮ್ಮ ಪರಿಚಿತರು ಈ ಪ್ರಸಾದದಿಂದ ಗುಣಮುಖರಾಗಿದ್ದಾರೆ ಮತ್ತು ತಮಗೂ ವರ್ಷಗಳ ಕಾಲ ಇದ್ದ ಅಸ್ತಮಾ ಸಮಸ್ಯೆಗೆ ಇದರಿಂದ ಶಾಶ್ವತ ಪರಿಹಾರ ಸಿಕ್ಕಿದೆ ಎಂದಿದ್ದಾರೆ.
ಇನ್ನೂ ಬಾತಿನಿ ಕುಟುಂಬದ ಈ ಮೀನು ಪ್ರಸಾದವು ಪ್ರತಿವರ್ಷ ವಿಜ್ಞಾನ ಮತ್ತು ನಂಬಿಕೆಯ ನಡುವಿನ ದೊಡ್ಡ ಚರ್ಚೆಗೆ ಗ್ರಾಸವಾಗುತ್ತದೆ. ಈ ಗಿಡಮೂಲಿಕೆ ಮಿಶ್ರಣವು ಅಸ್ತಮಾ ಅಥವಾ ಯಾವುದೇ ಉಸಿರಾಟದ ಕಾಯಿಲೆಗಳನ್ನು ಸಂಪೂರ್ಣವಾಗಿ ಗುಣಪಡಿಸುತ್ತದೆ ಎಂಬುದಕ್ಕೆ ಯಾವುದೇ ನಿರ್ಣಾಯಕ ವೈಜ್ಞಾನಿಕ ಅಥವಾ ವೈದ್ಯಕೀಯ ಪುರಾವೆಗಳಿಲ್ಲ ಎಂದು ತಜ್ಞರು ವಾದಿಸುತ್ತಾರೆ.

