ಯಾವುದೇ ಸ್ಥಳಗಳಲ್ಲಿ ರಾಜಕೀಯ ಸಮಾವೇಶಗಳು ನಡೆದಾಗ ಅಲ್ಲಿಗೆ ಜನರನ್ನು ಸೆಳೆಯಲು ಸೀರೆ, ಹಣ ಹಂಚುವಂತಹ ಆಮಿಷಗಳನ್ನು ಒಡ್ಡುತ್ತಾರೆ. ಇವುಗಳ ಆಸೆಗೆ ಬಿದ್ದ ಜನರು ರಾಜಕೀಯ ಕಾರ್ಯಕ್ರಮಗಳಿಗೆ ಆಗಮಿಸುತ್ತಾರೆ. ಅಂತೆಯೇ ಈಗ ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಸೀರೆ ಕೊಡುತ್ತಾರೆ ಎಂಬ ಆಸೆಯಿಂದ ಸಮಾವೇಶಕ್ಕೆ ಬಂದ ಮಹಿಳೆಯೊಬ್ಬರು ಚಿನ್ನದ ಓಲೆಯನ್ನು ಕಳೆದುಕೊಂಡ ಘಟನೆ ನಡೆದಿದೆ.


ಸಚಿವ ರಾಮಲಿಂಗ ರೆಡ್ಡಿ ಅವರ ಸಮ್ಮುಖದಲ್ಲಿ ಬೆಂಗಳೂರಲ್ಲಿ ಬಿಜೆಪಿ ತೊರೆದು ಹಲವರು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದರು. ಕಾರ್ಯಕ್ರಮಕ್ಕೆ ಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆತಂದು ಸಚಿವರಿಗೆ ‘ಬಿಲ್ಡಪ್’ ನೀಡಲು ಆಯೋಜಕರು ಸೀರೆ ಮತ್ತು ಬಿರಿಯಾನಿಯ ಆಮಿಷವೊಡ್ಡಿದ್ದರು. ಈ ಆಸೆ ಹೊತ್ತು ಬಂದ ನೂರಾರು ಮಹಿಳೆಯರು ಸೀರೆಗಾಗಿ ಮುಗಿಬಿದ್ದಿದ್ದಾರೆ. ಈ ಅವ್ಯವಸ್ಥೆಯ ನಡುವೆ ಮಹಿಳೆಯೊಬ್ಬರ ಕಿವಿಯಲ್ಲಿದ್ದ ಚಿನ್ನದ ಓಲೆ ಕಳ್ಳತನವಾಗಿದೆ.
ಓಲೆ ಕಳೆದುಕೊಂಡ ಮಹಿಳೆ, “ಸೀರೆ ಆಸೆಗೆ ಬಂದು ಚಿನ್ನದ ಓಲೆ ಕಳೆದುಕೊಂಡೆ, ಅಯ್ಯೋ ದೇವರೇ” ಎಂದು ಸ್ಥಳದಲ್ಲೇ ಗೋಳಾಡಿದ್ದಾರೆ. ಇತ್ತ ಸೀರೆಯೂ ಸಿಗಲಿಲ್ಲ, ಇದ್ದ ಚಿನ್ನದ ಒಡವೆಯೂ ಕೈತಪ್ಪಿತು ಎಂದು ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ.
