Home » 4 ರಾಜ್ಯಗಳಿಗೆ ನೂತನ ರಾಜ್ಯಾಧ್ಯಕ್ಷರನ್ನು ನೇಮಿಸಿದ ಬಿಜೆಪಿ!!

4 ರಾಜ್ಯಗಳಿಗೆ ನೂತನ ರಾಜ್ಯಾಧ್ಯಕ್ಷರನ್ನು ನೇಮಿಸಿದ ಬಿಜೆಪಿ!!

0 comments

ಬಿಜೆಪಿಯು ದೆಹಲಿ, ಪಂಜಾಬ್, ತ್ರಿಪುರ ಮತ್ತು ಹರಿಯಾಣ ರಾಜ್ಯಗಳಿಗೆ ಹೊಸ ರಾಜ್ಯಾಧ್ಯಕ್ಷರನ್ನು (State President) ನೇಮಿಸಿದೆ.

ಹೌದು, ರಾಷ್ಟ್ರೀಯ ಪಕ್ಷ ಬಿಜೆಪಿ ನಾಲ್ಕು ರಾಜ್ಯಗಳ ರಾಜ್ಯಾಧ್ಯಕ್ಷರ ಹೆಸರನ್ನು ಘೋಷಣೆ ಮಾಡಿದ್ದು, ದೆಹಲಿ, ಪಂಜಾಬ್, ತ್ರಿಪುರ, ಹರಿಯಾಣಕ್ಕೆ ನೂತನ ಬಿಜೆಪಿ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.

ದೆಹಲಿ :

ದೆಹಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಹರ್ಷ್ ಮಲ್ಹೋತ್ರಾ ಅವರನ್ನು ನೇಮಿಸಲಾಗಿದೆ. ಅವರು ಈಗಾಗಲೇ ಕೇಂದ್ರ ಸರ್ಕಾರದಲ್ಲಿ ರಾಜ್ಯ ಖಾತೆ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೇಂದ್ರ ರಾಜ್ಯ ಸಚಿವರಾಗಿರುವ ಹರ್ಷ್ ಮಲ್ಹೋತ್ರಾ ಅವರಿಗೆ ರಾಜಕೀಯ ಹಾಗೂ ಆಡಳಿತದ ಅನುಭವವಿದೆ

banner

ಪಂಜಾಬ್​ :

ಪಂಜಾಬ್ ರಾಜ್ಯದಲ್ಲಿ ಸರ್ದಾರ್ ಕೇವಲ್ ಸಿಂಹ ಡಿಲ್ಲೋ ಅವರನ್ನು ರಾಜ್ಯಾಧ್ಯಕ್ಷರಾಗಿ ನೇಮಿಸಲಾಗಿದೆ. ಪಂಜಾಬ್‌ನಲ್ಲಿ ಬಿಜೆಪಿ ತನ್ನ ಸಂಘಟನೆಗೆ ಹೊಸ ಬಲವನ್ನು ನೀಡಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಈ ನೇಮಕಾತಿ ನಡೆದಿದೆ. ಪಂಜಾಬ್‌ನ ರಾಜಕೀಯ ವಾತಾವರಣ, ಅಲ್ಲಿ ಇರುವ ಪ್ರಾದೇಶಿಕ ಹಾಗೂ ಧಾರ್ಮಿಕ ಸಮೀಕರಣಗಳನ್ನು ಗಮನದಲ್ಲಿಟ್ಟುಕೊಂಡು, ಸರ್ದಾರ್ ಕೇವಲ್ ಸಿಂಹ ಡಿಲ್ಲೋ ಅವರ ನೇಮಕಾತಿ ಮಹತ್ವ ಪಡೆದಿದೆ

ತ್ರಿಪುರ

ತ್ರಿಪುರ ರಾಜ್ಯದಲ್ಲಿ ಶಾಸಕ ಅಭಿಷೇಕ್ ದೇಬ್ ರಾಯ್ ಅವರನ್ನು ಹೊಸ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಿಸಲಾಗಿದೆ. ಅವರು ಈಗಾಗಲೇ ಶಾಸಕರಾಗಿ ಜನಪ್ರತಿನಿಧಿಗಳಾಗಿ ಕೆಲಸ ಮಾಡುತ್ತಿರುವ ಕಾರಣ, ತ್ರಿಪುರದಲ್ಲಿ ನೆಲಮಟ್ಟದ ರಾಜಕೀಯ ಪರಿಸ್ಥಿತಿಯನ್ನು ಚೆನ್ನಾಗಿ ಅರಿತುಕೊಂಡಿದ್ದಾರೆ. ಉತ್ತರ-ಪೂರ್ವ ಭಾರತದ ಈ ಚಿಕ್ಕ ರಾಜ್ಯದಲ್ಲಿ ಬಿಜೆಪಿ ಕಳೆದ ಕೆಲವು ವರ್ಷಗಳಿಂದ ತನ್ನ ಹಿಡಿತವನ್ನು ಬಲಪಡಿಸಿದೆ. ಈಗ ಅಭಿಷೇಕ್ ದೇಬ್ ರಾಯ್ ಅವರ ನೇಮಕಾತಿಯಿಂದ, ಪಕ್ಷವು ಯುವ ನಾಯಕತ್ವಕ್ಕೆ ಅವಕಾಶ ನೀಡಿರುವುದಾಗಿ ಕಾಣಿಸುತ್ತದೆ.

ಹರಿಯಾಣ

ಹರಿಯಾಣ ರಾಜ್ಯದಲ್ಲಿ ಡಾ. ಅರ್ಚನಾ ಗುಪ್ತಾ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಿಸಲಾಗಿದೆ. ಹರಿಯಾಣ ರಾಜಕೀಯವಾಗಿ ಸದಾ ಚುರುಕಿನ ರಾಜ್ಯ. ಇಲ್ಲಿ ಕೃಷಿ, ಕೈಗಾರಿಕೆ, ಉದ್ಯೋಗ ಮುಂತಾದ ಹಲವು ಕ್ಷೇತ್ರಗಳಲ್ಲಿ ಜನರ ಪ್ರಶ್ನೆಗಳು ಮಹತ್ವದ್ದಾಗಿವೆ. ಇಂತಹ ರಾಜ್ಯದಲ್ಲಿ ಡಾ. ಅರ್ಚನಾ ಗುಪ್ತಾ ಅವರ ನೇಮಕಾತಿ ವಿಶೇಷವಾಗಿದ್ದು, ಮಹಿಳಾ ನಾಯಕತ್ವಕ್ಕೆ ಪಕ್ಷ ನೀಡುತ್ತಿರುವ ಪ್ರೋತ್ಸಾಹದ ಉದಾಹರಣೆಯಾಗಿದೆ. 

 ಇನ್ನು ನಮ್ಮ ಕರ್ನಾಟಕದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆ ಮೇಲೆ ಅನೇಕರು ಕಣ್ಣಿಟ್ಟಿದ್ದಾರೆ. ಆದರೆ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಅವರೇ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುತ್ತಾರೆ ಎನ್ನಲಾಗಿದೆ. ಬಿಜೆಪಿ ರಾಜ್ಯ ಉಸ್ತುವಾರಿಯವರು ಕೂಡ ಈ ಬಗ್ಗೆ ಈಗಾಗಲೇ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

You may also like