

Uttar Pradesh: ಮಗುವಿನ ನಾಲಗೆಗೆ ಶಸ್ತ್ರಚಿಕಿತ್ಸೆ ಮಾಡುವ ಬದಲು ವೈದ್ಯರು ಸುನ್ನತಿ ಮಾಡಿದ್ದಾರೆ ಎಂಬ ಆರೋಪ ಉತ್ತರಪ್ರದೇಶದಲ್ಲಿ ಕೇಳಿಬಂದಿದ್ದು, ಈ ಹಿನ್ನೆಲೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಘಟನೆಯ ಸತ್ಯಾಸತ್ಯತೆ ತಿಳಿದುಕೊಳ್ಳಲು
ಉತ್ತರಪ್ರದೇಶ (Uttar Pradesh) ಸರ್ಕಾರವು ಆರೋಗ್ಯ ಇಲಾಖೆಯ ತನಿಖಾ ತಂಡವನ್ನು ಸುನ್ನತಿ ಮಾಡಿದ ಆಸ್ಪತ್ರೆಗೆ ಕಳುಹಿಸಿದೆ ಎನ್ನಲಾಗಿದೆ.
ಶುಕ್ರವಾರ ಎರಡೂವರೆ ವರ್ಷದ ಮಗುವಿನ ಚಿಕಿತ್ಸೆಗಾಗಿ ಕುಟುಂಬಸ್ಥರು ಎಂ ಖಾನ್ ಆಸ್ಪತ್ರೆಗೆ ಹೋಗಿದ್ದರು. ಆಸ್ಪತ್ರೆಯಲ್ಲಿ ಮಗುವಿಗೆ ನಾಲಿಗೆಗೆ ಶಸ್ತ್ರಚಿಕಿತ್ಸೆಯನ್ನು ಮಾಡಿಸುವಂತೆ ಹೇಳಲಾಯಿತು. ಆದರೆ, ಶಸ್ತ್ರಚಿಕಿತ್ಸೆಗೆಂದು ಮಗುವನ್ನು ಒಳಕರೆದೊಯ್ದ ವೈದ್ಯರು ಚಿಕಿತ್ಸೆಯ ನಂತರ ಮಗುವಿನ ನಾಲಿಗೆಗೆ ಶಸ್ತ್ರಚಿಕಿತ್ಸೆ ಮಾಡುವ ಬದಲು ಸುನ್ನತಿ ಮಾಡಿದ್ದಾರೆ ಎಂದು ಮಗುವಿನ ಕುಟುಂಬ ಆರೋಪಿಸಿದೆ.
ಈ ವಿಚಾರ ಹಿಂದೂ ಸಂಘಟನೆಗಳಿಗೆ ತಿಳಿದು ಅದರ ಸದಸ್ಯರು
ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿಭಟನೆ ನಡೆಸಿ ಆಸ್ಪತ್ರೆಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆ ಹಿನ್ನೆಲೆ ಆಸ್ಪತ್ರೆಯ ಹೊರಗೆ ಪೊಲೀಸರನ್ನು ನಿಯೋಜಿಸಲಾಯಿತು.
ಈ ಬಗ್ಗೆ ಆರೋಗ್ಯ ಸಚಿವ ಉತ್ತರಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರು ಪ್ರತಿಕ್ರಿಯೆ ನೀಡಿ, ಟ್ವೀಟ್ ಮಾಡಿದ್ದು, ಈ ಪ್ರಕರಣದ ಬಗ್ಗೆ ತನಿಖೆ ನಡೆಸಲು ಆರೋಗ್ಯ ಇಲಾಖೆಯ ತನಿಖಾ ತಂಡವನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ. ಆರೋಪಗಳು ಸತ್ಯವೆಂದು ಸಾಬೀತಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ತಪ್ಪಿತಸ್ಥ ವೈದ್ಯರು ಮತ್ತು ಆಸ್ಪತ್ರೆ ನಿರ್ವಹಣೆಯ ವಿರುದ್ಧ ಎಫ್ಐಆರ್ ದಾಖಲಿಸಲಾಗುವುದು. ತನಿಖಾ ವರದಿಯ ಆಧಾರದ ಮೇಲೆ ಸದರಿ ಆಸ್ಪತ್ರೆಯನ್ನು ಅಗತ್ಯವಿದ್ದಲ್ಲಿ ಮುಚ್ಚಲಾಗುವುದು ಎಂದು ಹೇಳಿದ್ದಾರೆ.













