Home » ನಿವೃತ್ತಿಗೆ ಎರಡೇ ವಾರ ಬಾಕಿ ಇರುವಾಗಲೇ ಕಣಜದ ಹುಳು ದಾಳಿಗೆ ಶಿಕ್ಷಕ ಬಲಿ

ನಿವೃತ್ತಿಗೆ ಎರಡೇ ವಾರ ಬಾಕಿ ಇರುವಾಗಲೇ ಕಣಜದ ಹುಳು ದಾಳಿಗೆ ಶಿಕ್ಷಕ ಬಲಿ

0 comments

ಸರ್ಕಾರಿ ಶಾಲೆಯ ಇಂಗ್ಲಿಷ್ ಶಿಕ್ಷಕರೊಬ್ಬರು ಸೇವೆಯ ನಿವೃತ್ತಿಗೆ ಇನ್ನು ಎರಡೇ ವಾರ ಬಾಕಿ ಇರುವಾಗಲೇ ತಮ್ಮ ಜಮೀನಿನಲ್ಲಿ ಕಣಜಗಳ (Hornets) ದಾಳಿಗೆ ಸಿಲುಕಿ ದಾರುಣವಾಗಿ ಮೃತಪಟ್ಟ ಘಟನೆ ಕಾಸರಗೂಡಲ್ಲಿ ನಡೆದಿದೆ.

ಕಾಸರಗೋಡಿನ ಪಣತ್ತಡಿ ಪಂಚಾಯತ್‌ನ ಚಾಮುಂಡಿಕ್ಕುನ್ನು ನಿವಾಸಿ ಪಿ. ವಿಜಯಕುಮಾರ್ (56) ಮೃತಪಟ್ಟವರು. ಇವರು ಪಣತ್ತಡಿಯ ಬಾಲಂತೋಡ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಹಿರಿಯ ಪ್ರೌಢಶಾಲಾ ಇಂಗ್ಲಿಷ್ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. 

ವಿಜಯಕುಮಾರ್ ಅವರು ನಾಲ್ವರು ಕಾರ್ಮಿಕರೊಂದಿಗೆ ತುಂಬೋಡಿಯಲ್ಲಿರುವ ತಮ್ಮ ಕೃಷಿ ಭೂಮಿಯಲ್ಲಿ ಗಿಡಗಂಟಿಗಳನ್ನು ತೆರವುಗೊಳಿಸುವಾಗ ಮಣ್ಣಿನ ದಿಬ್ಬದೊಳಗೆ ಗೂಡುಕಟ್ಟಿದ್ದ ಕಣಜಗಳು ತೊಂದರೆಗೊಳಗಾಗಿ ಗುಂಪುಗುಂಪಾಗಿ ದಾಳಿ ನಡೆಸಿವೆ. ವಿಜಯಕುಮಾರ್ ಅವರಿಗೆ ಹಲವಾರು ಬಾರಿ ಕುಟುಕಿದ ಪರಿಣಾಮ ಅವರು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.

ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಅವರೊಂದಿಗಿದ್ದ ನಾಲ್ವರು ಕಾರ್ಮಿಕರು ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

banner

ವಿಜಯಕುಮಾರ್ ಅವರು ಮೇ 31ರಂದು ನಿವೃತ್ತರಾಗಲಿದ್ದರು. ಶಾಲೆಯಲ್ಲಿ ಈಗಾಗಲೇ ಅವರಿಗೆ ಬೀಳ್ಕೊಡುಗೆ ಸಮಾರಂಭವನ್ನೂ ಆಯೋಜಿಸಲಾಗಿತ್ತು. ಆದರೆ ಇಲ್ಲಿ ವಿಧಿ ಆಟವೇ ಬೇರೆಯಾಗಿತ್ತು.

You may also like