Home » ಸಿಎಂ ಡಿಕೆಶಿ ಬೆನ್ನಿಗೆ ಸದಾ ನಿಲ್ಲುವ ‘ನೊಣವಿನಕೆರೆ ಅಜ್ಜಯ್ಯ’ ಯಾರು?

ಸಿಎಂ ಡಿಕೆಶಿ ಬೆನ್ನಿಗೆ ಸದಾ ನಿಲ್ಲುವ ‘ನೊಣವಿನಕೆರೆ ಅಜ್ಜಯ್ಯ’ ಯಾರು?

0 comments

ರಾಜ್ಯ ರಾಜಕೀಯದಲ್ಲಿ ಹೊಸ ಪರ್ವ ಆರಂಭವಾಗಿದೆ. ಡಿಕೆ ಶಿವಕುಮಾರ್ ಅವರ ಹೊಸ ಶಕೆ ಅದ್ದೂರಿಯಾಗಿ ಪ್ರಾರಂಭಗೊಂಡಿದೆ. ಡಿಕೆಶಿ ಅವರಿಗೆ ಸುಮ್ಮಸುಮ್ಮನೆ ಈ ಪಟ್ಟ ಸಿಗುತ್ತಿಲ್ಲ. ಅವರ ಪಕ್ಷಕ್ಕಾಗಿ ಮಾಡಿರುವ ತ್ಯಾಗ, ಪಕ್ಷ ಕಟ್ಟಲು ಶ್ರಮಿಸಿರುವ ಶ್ರಮ, ಅವರ ಕೆಚ್ಚೆದೆಯ ನಾಯಕತ್ವ, ನೇರ ನಡೆನುಡಿಯ ವ್ಯಕ್ತಿತ್ವ ಎಲ್ಲವೂ ಅವರನ್ನು ಈ ಪಟ್ಟಕ್ಕೆ ತಂದು ಕೋರಿಸುತ್ತಿವೆ. ಇದರ ಜೊತೆಗೆ ದೇವರ ಆಶೀರ್ವಾದವೂ ಕೂಡ ಇದೆ ಎಂಬುದು ಅಷ್ಟೇ ಸತ್ಯ. 

ಡಿಕೆ ಶಿವಕುಮಾರ್ ಅವರಿಗೆ ಎಷ್ಟು ದೇವರ ಮೇಲೆ ಭಕ್ತಿ ಇದೆ ಎಂಬುದನ್ನು ನಾವೆಲ್ಲರೂ ಈಗಾಗಲೇ ನೋಡಿದ್ದೇವೆ. ಅಲ್ಲದೆ ಹಿಂದೂ ಸಂಪ್ರದಾಯದ ಕುರಿತು ಎಷ್ಟೆಲ್ಲಾ ಶ್ರದ್ಧಾ, ಭಕ್ತಿ ಇದೆ ಎಂಬುದು ಎಲ್ಲರಿಗೂ ತಿಳಿದಿದೆ. ಅವರು ಪ್ರಮಾಣವಚನ ಸ್ವೀಕರಿಸಿ, ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸುವಾಗಲು ಕೂಡ ಎಲ್ಲವೂ ಧಾರ್ಮಿಕ ವಿಧಿ- ವಿಧಾನಗಳ ಮುಖಾಂತರವೇ ನೆರವೇರಿತು. ಇನ್ನೂ ಡಿಕೆ ಶಿವಕುಮಾರ್ ಅವರು ನೊಣವಿನಕೆರೆ ಗಂಗಾಧರ ಅಜ್ಜಯ್ಯನನ್ನು ಅವರು ಎಷ್ಟು ನೆನೆಯುತ್ತಾರೆ, ಆ ದೇವರಿಗೆ ಎಷ್ಟು ನಡೆದುಕೊಳ್ಳುತ್ತಾರೆ ಎಂಬುದು ಇಡೀ ರಾಜ್ಯದ ಜನತೆಗೆ ಗೊತ್ತಿದೆ. ತಾವು ಪ್ರಮಾಣವಚನ ಸ್ವೀಕರಿಸುವಾಗ ವೇದಿಕೆಯಲ್ಲಿ ಗಂಗಾಧರ ಅಜ್ಜಯ್ಯನ ಫೋಟೋವನ್ನು ಇಟ್ಟು ಅದಕ್ಕೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿದರು. ಅಲ್ಲದೇ ಗಂಗಾಧರ ಅಜ್ಜಯ್ಯನ ಹೆಸರಿನಲ್ಲಿಯೇ ಪ್ರಮಾಣವಚನ ಸ್ವೀಕರಿಸಿದರು. ಹಾಗಿದ್ರೆ ಯಾರು ಈ ಗಂಗಾಧರ ಅಜ್ಜಯ್ಯ? ಡಿಕೆಶಿ ಆ ದೇವರಿಗೆ ನಡೆದುಕೊಳ್ಳುವುದೇಕೆ?

ಎಲ್ಲಿದೆ ಈ ಮಠ?

ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠ (ಸೋಮೇಕಟ್ಟೆ ಶ್ರೀ ಕಾಡಸಿದ್ದೇಶ್ವರ ಮಠ) ಅತ್ಯಂತ ಪ್ರಸಿದ್ಧ ಹಾಗೂ ಐತಿಹಾಸಿಕ ಧಾರ್ಮಿಕ ಶಕ್ತಿ ಕೇಂದ್ರವಾಗಿದೆ. ಸುಮಾರು 500 ವರ್ಷಗಳ ಸುದೀರ್ಘ ಹಾಗೂ ಭವ್ಯ ಇತಿಹಾಸ ಹೊಂದಿರುವ ಈ ಕಾಡಸಿದ್ದೇಶ್ವರ ಮಠವು ಲಕ್ಷಾಂತರ ಭಕ್ತರ ಆರಾಧ್ಯ ಸ್ಥಳವಾಗಿದೆ. ಈ ಮಠವನ್ನು ಸ್ಥಳೀಯವಾಗಿ ‘ಅಜ್ಜಯ್ಯನ ಮಠ’ ಎಂದೂ ಕರೆಯಲಾಗುತ್ತದೆ. ಈ ಮಠವು ಕರ್ನಾಟಕದ ಪ್ರಮುಖ ರಾಜಕಾರಣಿಗಳ ನೆಚ್ಚಿನ ಧಾರ್ಮಿಕ ಶಕ್ತಿ ಕೇಂದ್ರವಾಗಿದ್ದು, ಕರ್ನಾಟಕದ ನೂತನ ಸಿಎಂ ಡಿಕೆ ಶಿವಕುಮಾರ್​​ ಸೇರಿ ಹಲವರು ಇಲ್ಲಿನ ಭಕ್ತರಾಗಿದ್ದಾರೆ.

banner

ಮಠ ಕಟ್ಟಿದ್ದು ಯಾರು?

ಸಿದ್ಧಲಿಂಗೇಶ್ವರ ಸ್ವಾಮಿ ಅಥವಾ ಕಾಡಸಿದ್ದೇಶ್ವರ ಸ್ವಾಮಿ ಜಗತ್ತು ಸುತ್ತುತ್ತಾ ತಪಸ್ಸು ಮಾಡುತ್ತಿದ್ದಾಗ, ಹಾಗಲವಾಡಿ ಪಾಲೆಗಾರ ಮುದಿಯಪ್ಪ ನಾಯಕ ಬೇಟೆಗೆ ಬಂದು ತಪಸ್ಸಿನಲ್ಲಿದ್ದ ಸ್ವಾಮಿಯನ್ನು ಪ್ರಾಣಿ ಎಂದು ತಿಳಿದು ಬಾಣ ಬಿಡುತ್ತಾನೆ.  ಆದರೆ ಅವರಿಗೆ ಬಾಣತಾಗಿದರೂ ಏನೂ ಆಗಲಿಲ್ಲವಂತೆ. ಬಳಿಕ ಕಾಡಸಿದ್ದೇಶ್ವರರನ್ನು ನೋಡಿ ತಪ್ಪಿನ ಅರಿವಾಗಿ, ಮುದಿಯಪ್ಪ ನಾಯಕ ಕಣ್ಣೀರಿಟ್ಟನಂತೆ. ಕೊನೆಗೆ ಆತನನ್ನು ಕ್ಷಮಿಸಿದ ಕಾಡಸಿದ್ದೇಶ್ವರರು, ಅನುಗ್ರಹಿಸಿದರಂತೆ. ಮುಂದೆ ಆತನೇ ಮಠ ಹಾಗೂ ಗದ್ದುಗೆ ನಿರ್ಮಿಸಿಕೊಟ್ಟನಂತೆ. ಒಂದು ಮಧ್ಯ ರಾತ್ರಿ ಕಾಡಸಿದ್ದೇಶ್ವರರು ಸುವರ್ಣ ಪಲ್ಲಕ್ಕಿಯಲ್ಲಿ ಶ್ರೀಗಳನ್ನು ಹೊತ್ತುಕೊಂಡು ಗದ್ದುಗೆಗೆ ತಂದಾಗ, ಅಲ್ಲಿ ಕರ್ಪೂರ ದಗ್ಗನೆ ಹತ್ತಿಕೊಂಡಿತು. ಆಗ ಶ್ರೀಗಳು ಅಲ್ಲಿಂದ ಅದೃಶ್ಯರಾದರಂತೆ. ಇದೇ ಮಠದ ಮೂಲ ಗದ್ದುಗೆ ಎನ್ನಲಾಗಿದೆ.

ಅಜ್ಜಯ್ಯನ ಅಪ್ಪಣೆ ಇಲ್ಲದೆ ಹೆಜ್ಜೆ ಇಡದ ಡಿಕೆಶಿ!

ಡಿ.ಕೆ. ಶಿವಕುಮಾರ್ ಅವರು ಅಜ್ಜಯ್ಯನವರ ಪರಮ ಭಕ್ತರಾಗಿದ್ದಾರೆ. ತಮ್ಮ ರಾಜಕೀಯ ಜೀವನದ ಪ್ರತಿಯೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ, ಚುನಾವಣೆಗೆ ಸ್ಪರ್ಧಿಸುವಾಗ ಅಥವಾ ಯಾವುದೇ ದೊಡ್ಡ ಜವಾಬ್ದಾರಿ ವಹಿಸಿಕೊಳ್ಳುವ ಮೊದಲು ನೊಣವಿನಕೆರೆ ಮಠಕ್ಕೆ ಭೇಟಿ ನೀಡುವುದು ಅವರ ದಿನಚರಿಯಾಗಿದೆ. ಅಜ್ಜಯ್ಯನವರ ದರ್ಶನ ಪಡೆದು, ಅವರ ಆಶೀರ್ವಾದ ಹಾಗೂ ಅಪ್ಪಣೆ ದೊರೆತ ನಂತರವಷ್ಟೇ ಡಿಕೆಶಿ ತಮ್ಮ ಮುಂದಿನ ರಾಜಕೀಯ ಹೆಜ್ಜೆಯನ್ನು ಇಡುತ್ತಾರೆ ಎಂಬುದು ವಿಶೇಷ.

ವಿಶೇಷ ಎಂದರೆ ಪದಗ್ರಹಣ ಸಮಾರಂಭ ಕೂಡ ಅಜ್ಜಯ್ಯನ ಮಠ ನೀಡಿರುವ ದಿನಾಂಕ ಮತ್ತು ಸಮಯದಂದೇ ನೆರವೇರಿದೆ. ಸಿಎಂ ಸ್ಥಾನ ಪಡೆಯುವ ಮೊದಲಿಗಿಂತ ಹಿಡಿದು ಪ್ರಮಾಣವಚನದವರೆಗೂ ಪ್ರತಿ ನಿರ್ಧಾರವನ್ನು ಅಜ್ಜಯ್ಯನ ಮಠದ ಈಗಿನ ಡಾ. ಕರಿವೃಷಭ ಶಿವಯೋಗಿಶ್ವರ ಶ್ರೀಗಳ ಮಾರ್ಗದರ್ಶನದನುಸಾರ ಡಿಕೆಶಿ ತೆಗೆದುಕೊಂಡಿದ್ದಾರೆ. ನಿನ್ನೆ ರಾತ್ರಿಯೂ ಬೆಂಗಳೂರಿನ ನಾಗರಭಾವಿಯಲ್ಲಿರುವ ಅಜ್ಜಯ್ಯನ ಶಾಖಾ ಮಠಕ್ಕೆ ಕುಟುಂಬ ಸಮೇತ ಭೇಟಿ ನೀಡಿದ್ದ ಶಿವಕುಮಾರ್, ತಡರಾತ್ರಿಯವರೆಗೂ ಅಲ್ಲಿಯೇ ಸಮಯ ಕಳೆದಿದ್ದರು. 

ಘಟಾನುಘಟಿಗಳು ಮಠದ ಭಕ್ತರು

ಈ ಮಠಕ್ಕೆ ಜನಸಾಮಾನ್ಯರಷ್ಟೇ ಅಲ್ಲದೇ ಚಿತ್ರನಟರು, ಉದ್ಯಮಿಗಳು, ರಾಜಕಾರಣಿಗಳು ಸೇರಿದಂತೆ ಹಲವು ಗಣ್ಯರು ಭಕ್ತರಾಗಿದ್ದಾರೆ. ಮಾಜಿ ಸಿಎಂ ದಿ. ಎಸ್‌ಎಂ ಕೃಷ್ಣ ಈ ಮಠದ ಭಕ್ತರಾಗಿದ್ದರು. ಡಿಕೆ ಶಿವಕುಮಾರ್ ಸೇರಿದಂತೆ ಹಲವು ರಾಜಕಾರಣಿಗಳು ಮಠಕ್ಕೆ ಆಗಾಗ ಭೇಟಿ ನೀಡುತ್ತಾರೆ. ಈ ಹಿಂದೆ ಎಸ್.ಎಂ.ಕೃಷ್ಣ ಮಹಾರಾಷ್ಟ್ರ ಸಿಎಂ ರಾಜ್ಯಪಾಲರಾಗಿದ್ದಾಗ ಮಠಕ್ಕೆ ಭೇಟಿ ನೀಡಿದ್ದರು. ಸ್ವಾಮೀಜಿ ಅವರು ಹೇಳುವ ಭವಿಷ್ಯವನ್ನು ಎಲ್ಲರು ನಂಬುತ್ತಾರೆ.

You may also like