ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯದಲ್ಲಿ ನಡೆಯುತ್ತಿರುವ ಚುನಾವಣೋತ್ತರ ಹಿಂಸಾಚಾರದ ಕುರಿತಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ಪರವಾಗಿ ವಾದ ಮಂಡಿಸಲು ವಕೀಲರ ಕಪ್ಪು ಕೋಟ್ ಧರಿಸಿ ಕಲ್ಕತ್ತಾ ಹೈಕೋರ್ಟ್ಗೆ ಆಗಮಿಸಿದ್ದರು. “ಬುಲ್ಡೋಜರ್ ಸಂಸ್ಕೃತಿ” ವಿರೋಧಿಸಿ, ಪೊಲೀಸರ ನಿಷ್ಕ್ರಿಯತೆ ಖಂಡಿಸಿ ಮತ್ತು ಸಂತ್ರಸ್ತರಿಗೆ ನ್ಯಾಯ ಕೋರಿ ಮಮತಾ ಬ್ಯಾನರ್ಜಿ ಧ್ವನಿ ಎತ್ತಿದ್ದಾರೆ.


ಹೌದು, ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಳಿಕ ದೊಡ್ಡ ರಾಜಕೀಯ ಬಿರುಗಾಳಿಯೇ ಎದ್ದಿದ್ದು, ಚುನಾವಣೋತ್ತರ ಹಿಂಸಾಚಾರದ ಆರೋಪಗಳಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಗಾಗಿ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ( Mamata Banerjee) ಗುರುವಾರ ಕೊಲ್ಕತ್ತಾ ಹೈಕೋರ್ಟ್ಗೆ ಕಪ್ಪು ಕೋರ್ಟ್ ಧರಿಸಿ ಖುದ್ದಾಗಿ ಹಾಜರಾಗುವ ಮೂಲಕ ಎಲ್ಲರ ಗಮನ ಸೆಳೆದರು.
ನ್ಯಾಯಾಲಯದಲ್ಲಿ ತಮ್ಮ ವಾದ ಮಂಡಿಸಿದ ಮಮತಾ ಬ್ಯಾನರ್ಜಿ, “ನಾನು ಇಲ್ಲಿ ವಕೀಲೆಯಾಗಿ ಈ ಪ್ರಕರಣದಲ್ಲಿ ಹೋರಾಡುತ್ತಿದ್ದೇನೆ. ಹೈಕೋರ್ಟ್ನಲ್ಲಿ ಇದು ನನ್ನ ಮೊದಲ ಹಾಜರಾತಿಯಾಗಿದ್ದು, ಗೌರವಾನ್ವಿತ ನ್ಯಾಯಾಧೀಶರಿಗೆ ನನ್ನ ನಮನಗಳು” ಎಂದು ಮಾತು ಆರಂಭಿಸಿದರು. ರಾಜ್ಯದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ಟಿಎಂಸಿ ಕಾರ್ಯಕರ್ತರ ಮೇಲೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಯುತ್ತಿದೆ ಎಂದು ಅವರು ಆರೋಪಿಸಿ, ತಮ್ಮ ವಾದ ಮಂಡಿಸಿದರು.
ಅಲ್ಲದೆ 92 ವರ್ಷದ ವಿಧವೆ ಸೇರಿದಂತೆ ಪರಿಶಿಷ್ಟ ಜಾತಿಯ ಕುಟುಂಬಗಳನ್ನು ಮನೆಯಿಂದ ಹೊರಹಾಕಲಾಗಿದೆ ಎಂದು ದೂರಿದ ಮಮತಾ, ಬಂಗಾಳದ ಜನರಿಗೆ ತಕ್ಷಣದ ರಕ್ಷಣೆ ನೀಡುವಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸುಜಯ್ ಪಾಲ್ ಮತ್ತು ನ್ಯಾಯಮೂರ್ತಿ ಪಾರ್ಥಸಾರಥಿ ಸೇನ್ ಅವರಿದ್ದ ಪೀಠಕ್ಕೆ ಮನವಿ ಮಾಡಿದರು.
ಇನ್ನೂ ಮಮತಾ ಬ್ಯಾನರ್ಜಿ ನ್ಯಾಯಾಲಯಕ್ಕೆ ಹಾಜರಾದ ಬೆನ್ನಲ್ಲೇ ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ತೃಣಮೂಲ ಕಾಂಗ್ರೆಸ್, ಇಂದು ನ್ಯಾಯಾಲಯದಲ್ಲಿ ಅವರ ಖುದ್ದು ಹಾಜರಾತಿಯು ಜನರ ಪರವಾಗಿ ಅವರಿಗಿರುವ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದೆ. ಬಂಗಾಳದ ಜನರಿಗೆ ಅಗತ್ಯವಿರುವ ಸಮಯದಲ್ಲಿ ಅವರು ಎಂದಿಗೂ ಕೈಬಿಡುವುದಿಲ್ಲ. ಸತ್ಯ, ನ್ಯಾಯ ಮತ್ತು ಸಾಂವಿಧಾನಿಕ ಮೌಲ್ಯಗಳಿಗಾಗಿ ಅವರ ಹೋರಾಟ ನಿರಂತರವಾದುದು ಎಂದು ಬರೆದುಕೊಂಡಿದೆ.

