ಮಂಗಳೂರು, ಎ.14: ಕಳೆದ ಶನಿವಾರ ರಾತ್ರಿ ರಾ.ಹೆ.66 ರ ನಂತೂರು ತಾರಾಯಿತೋಟ ಎಂಬಲ್ಲಿ ಓವರ್ಟೇಕ್ ಮಾಡುವ ಸಂದರ್ಭದಲ್ಲಿ ಸ್ಕೂಟರ್ಗೆ ಡಿಕ್ಕಿ ಹೊಡೆದು ಬೈಕ್ ಸವಾರ ರಸ್ತೆಗೆಸೆಯಲ್ಪಟ್ಟು ಸಾವಿಗೀಡಾದ ಪ್ರಕರಣದಲ್ಲಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ, ಹಿರಿಯ ಛಾಯಾಗ್ರಾಹಕ ಕೆ.ಮೋಹನ್ ಚಂದರ್ (64) ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ.


ಧರ್ಮಸ್ಥಳದ ಕಾರ್ಯತಡ್ಕ ನಿವಾಸಿ ಗೋಪಾಲಕೃಷ್ಣ (27) ಎಂಬ ಯುವಕ ಶನಿವಾರ ರಾತ್ರಿ ಸುಮಾರು 8.30 ಗಂಟೆ ವೇಳೆ ಗುರುಪುರದಿಂದ ಜಪ್ಪಿನಮೊಗರಿನ ತನ್ನ ಬಾಡಿಗೆ ರೂಮಿನ ಕಡೆಗೆ ಎಫ್ ಜೀ ಬೈಕನ್ನು ಅಪರಿಮಿತ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ್ದು, ಓವರ್ಟೇಕ್ ಮಾಡುವ ಭರದಲ್ಲಿ ತನ್ನ ಪಾಡಿಗೆ ಸಾಗಿಸುತ್ತಿದ್ದ ಮೋಹನ್ ಅವರ ಸ್ಕೂಟರ್ಗೆ ಡಿಕ್ಕಿ ಹೊಡೆದು ನಂತರ ನಿಯಂತ್ರಣ ತಪ್ಪಿ ಮೈನ್ಸ್ ಸಾಗಾಟದ ಟಿಪ್ಪರ್ಗೆ ಬಡಿದು ಸ್ಥಳದಲ್ಲಿಯೇ ಸಾವಿಗೀಡಾಗಿದ್ದ.
ಈ ಭೀಕರ ಅಪಘಾತದ ದೃಶ್ಯವು ಗಂಗಾಧರ್ ಅಂಬ್ಲಮೊಗರು ಚಲಾಯಿಸುತ್ತಿದ್ದ ಗೂಡ್ಸ್ ಟೆಂಪೋವಿನ ಡ್ಯಾಷ್ ಬೋರ್ಡ್ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿತ್ತು.
ಮೃತ ಮೋಹನ್ ಚಂದರ್ ಅವರ ಹಿರಿಯ ಮಗಳಿಗೆ ಇದೇ ಮೇ 10 ರಂದು ವಿವಾಹ ನಿಶ್ಚಯವಾಗಿದ್ದು, ಮೋಹನ್ ಅವರ ಅಕಾಲಿಕ ಅಗಲಿಕೆಯಿಂದ ಸೂತನ ಮನೆ ಮಾಡಿದೆ. ಮೃತ ಮೋಹನ್ ಅವರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

