ಗಾಂಜಾ ದಂಧೆಕೋರರಿಗೆ ಪೊಲೀಸರೇ ಸಾಥ್ | ಹಣ ಪಡೆದು ಆರೋಪಿಗಳನ್ನು ಬಿಟ್ಟು ಬಿಟ್ಟ ಪೊಲೀಸರು
ಪೊಲೀಸರೇ ಗಾಂಜಾ ದಂಧೆಕೋರರೊಂದಿಗೆ ಶಾಮೀಲಾಗಿ ಅವರಿಂದ ಹಣ ಪಡೆದು ವಶಪಡಿಸಿಕೊಂಡ ಗಾಂಜಾವನ್ನು ಮಾರಾಟ ಮಾಡಿ ಸಿಕ್ಕಿಬಿದ್ದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ಸ್ ಪೆಕ್ಟರ್ ಸೇರಿದಂತೆ 7 ಪೊಲೀಸ್ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ.
ಖಚಿತ ಮಾಹಿತಿ ಮೇರೆಗೆ ಕಳೆದವಾರ ಹುಬ್ಬಳ್ಳಿಯ ನವನಗರ ಠಾಣೆ ಪೊಲೀಸರು ಗಾಂಜಾ ದಂಧೆಕೋರರ ಮೇಲೆ ದಾಳಿನಡೆಸಿ, ಆರೋಪಿಗಳನ್ನು ವಶಕ್ಕೆ ಪಡೆದಿದ್ದರು.
ಆರೋಪಿಗಳಿಂದ 1 ಕೆಜಿ ಗಾಂಜಾ ವಶಪಡಿಸಿಕೊಡಿದ್ದರು. ಪ್ರಕರಣ ದಾಖಲಿಸದೇ ಅವರಿಂದ ಹಣ ಪಡೆದು ಆರೋಪಿಗಳನ್ನು ಬಿಟ್ಟು ಕಳುಹಿಸಿದ್ದರು. ನಂತರ ವಶಕ್ಕೆ ಪಡೆದಿದ್ದ ಗಾಂಜಾವನ್ನು ಪೊಲೀಸರು ಮಾರಾಟ ಮಾಡಿದ್ದರು.
ಪೊಲಿಸರ ವಿರುದ್ಧ ಕೇಳಿಬಂದ ಆರೋಪಕ್ಕೆ ಸಂಬಂಧಿಸಿದಂತೆ ಡಿವೈಎಸ್ ಪಿ ನೇತೃತ್ವದಲ್ಲಿ ತನಿಖೆ ಕೈಗೊಳ್ಳಲಾಗಿತ್ತು. ತನಿಖೆಯಲ್ಲಿ ಆರೋಪ ಸಾಬೀತಾಗಿದೆ.
ಈ ಹಿನ್ನೆಲೆಯಲ್ಲಿ ನವನಗರ ಠಾಣೆ ಇನ್ಸ್ ಪೆಕ್ಟರ್ ವಿಶ್ವನಾಥ ಚೌಗಲೆ, ಎಎಸ್ ಐ ವಿಕ್ರಮ್ ಪಾಟೀಲ್ ಸೇರಿದಂತೆ 7 ಸಿಬ್ಬಂದಿಗಳನ್ನು ಅಮಾನತು ಮಾಡಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಭೂರಾಮ್ ಆದೇಶ ಹೊರಡಿಸಿದ್ದಾರೆ.