ಮೊಬೈಲ್ ಶಾಪ್ ಮಾಲಕನ ಅಪಹರಿಸಿ ಲಕ್ಷಾಂತರ ಲೂಟಿ |ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಉಡುಪಿ : ಮೊಬೈಲ್ ಅಂಗಡಿ ಮಾಲಕರೊಬ್ಬರನ್ನು ತಂಡವೊಂದು ಅಪಹರಿಸಿ ಲಕ್ಷಾಂತರ ರೂ. ಹಣ ಹಾಗೂ ಸೊತ್ತುಗಳನ್ನು ಲೂಟಿ ಮಾಡಿರುವ ಕುರಿತು ಉಡುಪಿ ಜಿಲ್ಲೆಯ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಂದೂರು ಕಿರಿಮಂಜೇಶ್ವರ ಅರೆಹೊಳೆ ಕ್ರಾಸ್‌ನ ಮುಸ್ತಾಫ(34) ಎಂಬವರು ಕುಂದಾಪುರದ ಚಿಕನ್ ಸ್ಟಾಲ್ ರಸ್ತೆಯಲ್ಲಿ ಮೊಬೈಲ್ ಶಾಪ್ ವ್ಯವಹಾರ ಮಾಡಿಕೊಂಡಿದ್ದು, ಕುಂದಾಪುರದ ದತ್ತಾತ್ರೇಯ ಪ್ಲಾಟ್‌ನಲ್ಲಿ ವಾಸವಾಗಿದ್ದರು. ಸೆ.17ರಂದು ರಾತ್ರಿ ಅಂಗಡಿ ವ್ಯವಹಾರ ಮುಗಿಸಿ ವ್ಯವಹಾರದ ಹಣ ಹಾಗೂ ಇತರ ಅಮೂಲ್ಯ ದಾಖಲಾತಿಗಳನ್ನು ಬ್ಯಾಗಿನಲ್ಲಿ ಹಾಕಿಕೊಂಡು ದ್ವಿಚಕ್ರ ವಾಹನ ದಲ್ಲಿ ಹೋಗುತ್ತಿದ್ದಾಗ ಫ್ಲ್ಯಾಟ್ ಸಮೀಪ ಕಾರಿನಲ್ಲಿ ಬಂದ ನೇರಂಬಳ್ಳಿಯ ಮುಖಾರ್ ಸೇರಿದಂತೆ ಮೂವರು ಆರೋಪಿಗಳು, ದೈಹಿಕ ಹಲ್ಲೆ ಮಾಡಿ ರಿವಾಲ್ವರ್ ತೋರಿಸಿ ಬೆದರಿಸಿ, ಬೆಂಗಳೂರಿಗೆ ಅಪಹರಿಸಿಕೊಂಡು ಹೋಗಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.

ಸೆ.18ರಂದು ನಸುಕಿನ ವೇಳೆ ಬೆಂಗಳೂರಿನ ಸರ್ಜಾಪುರದ ವಸತಿಗೃಹ ವೊಂದಕ್ಕೆ ಕರೆದುಕೊಂಡು ಹೋಗಿದ್ದು, 25ವರ್ಷ ಪ್ರಾಯದ ಓರ್ವ ಮಹಿಳೆ ಮನೆಯವರಿಗೆ ಫೋನ್ ಮಾಡಿ 50,00.000ರೂ. ಹಣವನ್ನು ಹಾಕಬೇಕೆಂದು ಬೆದರಿಕೆ ಹಾಕಿದರು. ನಂತರ ಮುಸ್ತಫರ ಮೊಬೈಲ್ ಮೂಲಕ ಖಾತೆಯಿಂದ ತಮ್ಮ ಖಾತೆಗೆ 50000ರೂ. ಹಣ ಜಮಾ ಮಾಡಿಕೊಂಡರು. ಅಲ್ಲದೇ ಬೆಂಗಳೂರಿಗೆ ಕರೆದುಕೊಂಡು ಹೋಗುವಾಗ ದಾರಿಮಧ್ಯೆ ಎಟಿಎಂನಿಂದ 3,14,175ರೂ.ವನ್ನು ಡ್ರಾ ಮಾಡಿದ್ದಾರೆ ಎಂದು ದೂರಲಾಗಿದೆ.

ಬಳಿಕ ಚೆಕ್ ಪುಸ್ತಕಕ್ಕೆ ಸಹಿ ಮಾಡಿಸಿ, ಊರಿಗೆ ಹೋದ ಮೇಲೆ ಖಾತೆಗೆ ಹಣ ಜಮಾ ಮಾಡಬೇಕು, ಮಾಡಿದರೆ ಮಾತ್ರ ದಾಖಲಾತಿಯನ್ನು ಮೊಬೈಲ್ ಹಾಗೂ ಇನ್ನಿತರ ವಸ್ತುಗಳ ನೀಡುವುದಾಗಿ ಹೇಳಿದ್ದಾರೆ. ಸೆ.18ರಂದು ರಾತ್ರಿ ಆರೋಪಿಗಳು ಮುಸ್ತಫ ಅವರನ್ನು ಬಿಟ್ಟರೆನ್ನಲಾಗಿದೆ. ಸೆ.19ರಂದು ಊರಿಗೆ ಬಂದಿದ ಮುಸ್ತಫ ಆರೋಪಿಗಳ ವಿರುದ್ಧ ಒಟ್ಟು 4,64,175 ರೂ. ಹಣ ಹಾಗೂ 1,00,000ರೂ. ಮೌಲ್ಯದ ಸೊತ್ತುಗಳು ಸುಲಿಗೆ ಮಾಡಿರುವುದಾಗಿ ದೂರಿನಲ್ಲಿ ಮುಸ್ತಫಾ ತಿಳಿಸಿದ್ದಾರೆ.

Leave A Reply

Your email address will not be published.