ಮಳೆಗಾಲದಲ್ಲಿ ಶೀತ, ಕೆಮ್ಮು, ನೆಗಡಿ, ಜ್ವರ ಬರುವುದು ಸಾಮಾನ್ಯ. ಹೀಗಾಗಿ ಪ್ರತಿಯೊಬ್ಬರು ಮನೆಯಲ್ಲಿ ಕೆಮ್ಮು, ಶೀತ, ಜ್ವರಕ್ಕೆ ಸಂಬಂಧಪಟ್ಟ ಮದ್ದನ್ನು ಇಟ್ಟುಕೊಂಡಿರುತ್ತಾರೆ. ಮಾರುಕಟ್ಟೆಯಲ್ಲಿ ಹಲವು ಕೆಮ್ಮಿನ ಸಿರಪ್ಗಳಿವೆ. ಆದರೆ ದೇಹದ ಆರೋಗ್ಯ ಕಾಪಾಡುವ ಕೆಲವು ಸಿರಪ್ಗಳೇ ಇಂದು ಜೀವ ತೆಗೆಯುತ್ತದೆ. ಆದ್ದರಿಂದ ಜನರ ಜೀವ ಉಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಎಚ್ಚರಿಕೆಯ ಕ್ರಮವನ್ನು ಕೈಗೊಂಡಿದೆ.


ಇನ್ಮುಂದೆ ದೇಶದ ಮೆಡಿಕಲ್ ಸ್ಟೋರ್ಗಳಲ್ಲಿ ಕೆಮ್ಮು ಸಹಿತ ಯಾವುದೇ ಸಿರಪ್ನ ಮಾರಾಟಕ್ಕೆ ವೈದ್ಯರ ಚೀಟಿಯನ್ನು ಕಡ್ಡಾಯಮಾಡಿ ಆರೋಗ್ಯ ಸಚಿವಾಲಯವು ಆದೇಶ ಹೊರಡಿಸಿದೆ. ಈ ಕುರಿತು ಹಾಲಿ ನಿಯಮಾವಳಿಗೆ ತಿದ್ದುಪಡಿಯನ್ನು ಮಾಡಿರುವ ಆರೋಗ್ಯ ಇಲಾಖೆ ಇಲ್ಲಿಯವರೆಗಿನ ಸಿರಪ್ ಮಾರಾಟಕ್ಕೆ ಕುರಿತಂತೆ ಇದ್ದ ವಿನಾಯಿತಿಯನ್ನು ತೆಗೆದು ಹಾಕಿದೆ. ವೈದ್ಯರ ಚೀಟಿಯ ನಂತರವೇ ಸಿರಪ್ಗಳನ್ನು ಗ್ರಾಹಕರಿಗೆ ನೀಡಲು ಎಲ್ಲಾ ಔಷಧಾಲಯಗಳಿಗೆ ಸೂಚನೆಯನ್ನು ನೀಡಿದೆ.
ಕಳೆದ ವರ್ಷದ ಸೆಪ್ಟೆಂಬರ್-ಅಕ್ಟೋಬರ್ ಅವಧಿಯಲ್ಲಿ ರಾಜಸ್ಥಾನ, ಮಧ್ಯಪ್ರದೇಶ ಸಹಿತ ಹಲವು ಕಡೆಗಳಲ್ಲಿ ಕಫ, ಕೆಮ್ಮಿನ ಸಿರಪ್ ಸೇವಿಸಿ ಸಾವಿಗೀಡಾಗಿದ್ದರು. ಈ ಸರಣಿ ಸಾವುಗಳಿಂದ ದೇಶಾದ್ಯಂತ ಆತಂಕ ವ್ಯಕ್ತವಾಗಿತ್ತು. ಸಿರಪ್ ತಯಾರಕರು ಹಣ ಉಳಿಸುವ ಉದ್ದೇಶದಿಂದ ಅಗ್ಗದ ವಿಷಕಾರಿ ರಾಸಾಯನಿಕಗಳನ್ನು ಅಧಿಕ ಪ್ರಮಾಣದಲ್ಲಿ ಬಳಸಿದ್ದು ಇದಕ್ಕೆ ಕಾರಣವಾಗಿತ್ತು. ಈ ಸಿರಪ್ ಸೇವನೆ ಮಾಡಿದವರು ಯಕೃತ್ ಮತ್ತು ಮೂತ್ರಪಿಂಡದ ಮೇಲೆ ತೀವ್ರವಾದ ಪರಿಣಾಮ ಬೀರಿತ್ತು. ಅಂಗಾಂಗ ವೈಫಲ್ಯಕ್ಕೀಡಾಗಿ ಸಾವಿಗೀಡಾಗಿದ್ದು ವೈದ್ಯಕೀಯ ಪರಿಶೀಲನೆ ಸಮಯದಲ್ಲಿ ಬಯಲಾಗಿತ್ತು.
ಕೇಂದ್ರದ ಸೂಚನೆ ಏನು?
ಔಷಧಗಳ ಗುಣಮಟ್ಟ ಮತ್ತು ರೋಗಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವೈದ್ಯರ ಶಿಫಾರಸು (ರಶೀದಿ) ಇಲ್ಲದೇ ಯಾವುದೇ ಸಿರಪ್ಗಳ ಮಾರಾಟವನ್ನ ನಿಷೇಧಿಸಲಾಗಿದೆ. ಈ ಮೊದಲಿದ್ದ ನಿಯಮಗಳ ಪ್ರಕಾರ, ʻ1 ಸಾವಿರಕ್ಕೂ ಕಡಿಮೆ ಜನಸಂಖ್ಯೆ ಇರುವ ಗ್ರಾಮಗಳಲ್ಲಿನ ಚಿಲ್ಲರೆ ವರ್ತಕರು, ಕೆಮ್ಮಿನ ಸಿರಪ್ಗಳನ್ನ ಮಾರಾಟ ಮಾಡಬಹುದಿತ್ತು. ಹೊಸ ಸೂಚನೆಯ ಅನ್ವಯ ಈಗ ಸಣ್ಣ ವರ್ತಕರು ಕೆಮ್ಮಿನ ಸಿರಪ್ಗಳನ್ನ ಮಾರಾಟ ಮಾಡುವಂತಿಲ್ಲ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಡ್ರಗ್ಸ್ (ಐದನೇ ತಿದ್ದುಪಡಿ) ನಿಯಮಗಳು, 2026 ಕ್ಕೆ ತಿದ್ದುಪಡಿ ತಂದಿದೆ. ಇದರ ಅನ್ವಯ 1945ರ ಔಷಧ ನಿಯಮಗಳ ‘ಶೆಡ್ಯೂಲ್ ಕೆ’ (ಐಟಂ ಸಂಖ್ಯೆ 7) ಪಟ್ಟಿಯಿಂದ ‘ಸಿರಪ್ಗಳು’ ಎಂಬ ಪದವನ್ನು ತೆಗೆದುಹಾಕಲಾಗಿದೆ. ಉತ್ಪಾದಕರು, ವಿತರಕರು ಹಾಗೂ ಚಿಲ್ಲರೆ ವ್ಯಾಪಾರಿಗಳು ಕೆಮ್ಮಿನ ಸಿರಪ್ ಕುರಿತಂತೆ ಡ್ರಗ್ಸ್ ಮತ್ತು ಸೌಂದರ್ಯ ವರ್ಧಕಗಳ ಕಾಯ್ದೆ, 1940 ರ ಅಡಿ ರೂಪಿಸಲಾಗಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಸಚಿವಾಲಯ ಹೇಳಿದೆ.

