Home » ಮತ್ತೆ NEET ಪರೀಕ್ಷೆ ಬರೆಯಲು ಭಯ, ಅಪ್ಪ ಈಗಾಗಲೇ ತುಂಬಾ ಖರ್ಚು ಮಾಡಿದ್ದಾರೆ- ಮೆಸೇಜ್ ಕಳುಹಿಸಿ ವಿದ್ಯಾರ್ಥಿನಿ ಆತ್ಮಹತ್ಯೆ

ಮತ್ತೆ NEET ಪರೀಕ್ಷೆ ಬರೆಯಲು ಭಯ, ಅಪ್ಪ ಈಗಾಗಲೇ ತುಂಬಾ ಖರ್ಚು ಮಾಡಿದ್ದಾರೆ- ಮೆಸೇಜ್ ಕಳುಹಿಸಿ ವಿದ್ಯಾರ್ಥಿನಿ ಆತ್ಮಹತ್ಯೆ

0 comments

ಮೇ ತಿಂಗಳಿನಲ್ಲಿ ನಡೆದ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಯಾಗಿತ್ತು ಎಂದು ಪರೀಕ್ಷೆಯನ್ನು ರದ್ದು ಪಡಿಸಿ ಇದೀಗ ಜೂನ್‌ 21 ಕ್ಕೆ ಮರುಪರೀಕ್ಷೆ ನಿಗದಿಪಡಿಸಿದೆ. ಆದರೆ ಇದೀಗ ‘ಮತ್ತೆ ನೀಟ್ ಪರೀಕ್ಷೆ ಬರೆಯಲು ಭಯವಾಗುತ್ತದೆ ಅಪ್ಪ ಈಗಾಗಲೇ ಸಾಕಷ್ಟು ಹಣ ಖರ್ಚು ಮಾಡಿದ್ದಾರೆ’ ಎಂದು ವಾಟ್ಸಾಪ್ ಸಂದೇಶ ಕಳುಹಿಸಿ 19 ವರ್ಷದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

 ಕೊಯಂಬತ್ತೂರಿನಲ್ಲಿ ಈ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಕೋವೈಪುದೂರಿನ ಪಾರ್ಕ್‌ ಟೌನ್‌ ನ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸೆಂಥಿಲ್ ಪ್ರಭು ಅವರ ಮಗಳು ಅನುಕೀರ್ತನ ಗುರುತಿಸಲಾಗಿದೆ. ಅನುಕೀರ್ತನ ಅವರ ಹಿರಿಯ ಮಗಳಾಗಿದ್ದು, ಖಾಸಗಿ ಶಾಲೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣ ಆಗಿದ್ದರು.

 ಸಾಮಾಜಿಕ ಕಳಕಳಿ ಇದ್ದ ಅನುಕೀರ್ತನ ಅವರು ಬಡವರ ಸೇವೆ ಮಾಡಬೇಕು ಎಂದು ಆಸೆ ಹೊತ್ತು ನೀಟ್ ಕೋಚಿಂಗ್ ಪಡೆದು ಪರೀಕ್ಷೆಯನ್ನು ಎದುರಿಸಿದ್ದರು. ಆದರೆ ದುರಾದೃಷ್ಟವಶಾತ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಆ ಪರೀಕ್ಷೆ ರದ್ದಾಗಿತ್ತು. ಇದರಿಂದ ಅನುಕೀರ್ತನ ತುಂಬಾನೇ ಮನನೊಂದಿದ್ದರು. ಅಲ್ಲದೆ ಮರು ಪರೀಕ್ಷೆಗೂ ತಯಾರಿ ಮಾಡುವುದಾಗಿ ಹೇಳಿದ್ದರು

ಆದ್ರೆ ಬುಧವಾರ ಬೆಳಗ್ಗೆ ಅನುಕೀರ್ತನಾ ಸೋದರಮಾವ ಹಾಗೂ ಹತ್ತಿರದ ಸಂಬಂಧಿಗಳಿಗೆ ಸುಧೀರ್ಘ ವಾಟ್ಸಾಪ್ ಸಂದೇಶ ಕಳಿಸಿದ್ದಾರೆ. ಇದರಲ್ಲಿ ಅವರ ಆತಂಕಗಳನ್ನು ವಿವರಿಸಿ “ನೀಟ್ಪರೀಕ್ಷೆ ಬರೆದು ಮೆಡಿಕಲ್ ಕಾಲೇಜು ಸೇರಲು ಕಾಯುತ್ತಿದ್ದಾಗ, ಎಕ್ಸಾಂ ಅನ್ನೇ ರದ್ದುಪಡಿಸಲಾಗಿದೆ. ಈಗ ಮತ್ತೆ ಪರೀಕ್ಷೆ ಬರೆಯಲು ಹೆದರಿಕೆಯಾಗುತ್ತದೆ. ನನ್ನ ತಂದೆ ಈಗಾಗಲೇ ನನ್ನ ಮೇಲೆ ಸಾಕಷ್ಟು ಹಣ ಖರ್ಚು ಮಾಡಿದ್ದಾರೆ. ಅವರ ಮುಖ ಮತ್ತೆ ಹೇಗೆ ನೋಡೋದು ಎಂದು ನನಗೆ ಗೊತ್ತಿಲ್ಲ” ಎಂದು ಸಂದೇಶ ಕಳಿಸಿದ್ದಾರೆ.

banner

ಇದನ್ನು ಓದಿದ ಸಂಬಂಧಿಕರು, ಓಡೋಡಿ ಮನೆ ಬಳಿ ಬರುವಷ್ಟರಲ್ಲಿ ಆಕೆ ವಿಷ ಸೇವಿಸಿ, ಪ್ರಜ್ಞೆತಪ್ಪಿ ಬಿದ್ದಿದ್ದಳು. ಬಾಗಿಲು ತೆಗೆಯಲು ಹೇಳಿದಾಗ ಆಕೆ ವಿಷ ಸೇವಿಸಿಯಾಗಿತ್ತು. ತಕ್ಷಣವೇ ಬಾಗಿಲು ಮುರಿದು ಆಕೆಯನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಐಸಿಯುಗೆ ಸೇರಿಸಲಾಯಿತು. ವೈದ್ಯರು ತುರ್ತುಚಿಕಿತ್ಸೆ ಕೊಟ್ಟರೂ ಸಹ ಉಳಿಸಿಕೊಳ್ಳಲಾಗಿಲ್ಲ. ಮಧ್ಯಾಹ್ನ ಆಕೆ ಕೊನೆಯುಸಿರೆಳೆದಿದ್ದಾಳೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿದ್ಯಾರ್ಥಿನಿಯ ಫೋನ್ ಪಡೆದು ತನಿಖೆ ಆರಂಭಿಸಲಾಗಿದೆ.

You may also like