Home » ಆನ್‌ಲೈನ್‌ ಗೇಮ್‌ ಆಡದಂತೆ ಬುದ್ಧಿಮಾತು ಹೇಳಿದ ಅಪ್ಪ, ಅಕ್ಕನನ್ನೇ ಹ*ತ್ಯೆ ಮಾಡಿದ ದ್ವಿತೀಯ ಪಿಯುಸಿ ವಿದ್ಯಾರ್ಥಿ

ಆನ್‌ಲೈನ್‌ ಗೇಮ್‌ ಆಡದಂತೆ ಬುದ್ಧಿಮಾತು ಹೇಳಿದ ಅಪ್ಪ, ಅಕ್ಕನನ್ನೇ ಹ*ತ್ಯೆ ಮಾಡಿದ ದ್ವಿತೀಯ ಪಿಯುಸಿ ವಿದ್ಯಾರ್ಥಿ

0 comments

ಗಂಗಾವತಿ: ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬನಿಗೆ ಮೊಬೈಲ್‌ನಲ್ಲಿ ಆನ್‌ಲೈನ್‌ ಗೇಮ್‌ ಆಡದಂತೆ ಬುದ್ಧಿವಾದ ಹೇಳಿದ ಪ್ರಕರಣ ಇಬ್ಬರ ಸಾವಿನಲ್ಲಿ ಅಂತ್ಯಗೊಂಡಿರುವ ಘಟನೆ ಅಯೋಧ್ಯೆ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.

ಗಂಗಾವತಿ ವಡ್ಡರಹಟ್ಟಿಯ ವಿದ್ಯಾನಿಕೇತನ ಕಾಲೇಜಿನ ದ್ವಿತೀಯ ಪಿಯುಸಿ ಓದುತ್ತಿರುವ ಸಾಯಿ ನಾಯ್ಡು (18) ಯಾವಾಗಲೂ ಮೊಬೈಲ್‌ನಲ್ಲಿ ಆನ್‌ಲೈನ್‌ ಗೇಮ್‌ ಆಡುತ್ತಿದ್ದ. ಈ ಕುರಿತು ಅಕ್ಕ ಪ್ರಗತಿ (20) ಬುದ್ಧಿಮಾತು ಹೇಳಿದ್ದಾಳೆ. ಆಗ ಇವರಿಬ್ಬರ ಮಧ್ಯೆ ತೀವ್ರ ಜಗಳವಾಗಿದೆ. ಸಾಯಿ ನಾಯ್ಡು ಚಾಕುವಿನಿಂದ ಅಕ್ಕ ಪ್ರಗತಿಗೆ ಎಲ್ಲಂದರಲ್ಲಿ ಇರಿದಿದ್ದಾನೆ. ಪರಿಣಾಮ ಆಕೆ ಸ್ಥಳದಲ್ಲಿಯೇ ಮೃತ ಹೊಂದಿದ್ದಾಳೆ. ಈ ಸಂದರ್ಭದಲ್ಲಿ ಜಗಳ ಬಿಡಿಸಲು ಬಂದ ಯಂಕಣ್ಣ ನಾಯ್ಡು (48) ತಾಯಿ ಸೌಜನ್ಯ (40) ಇವರ ಮೇಲೆ ಕೂಡಾ ಸಾಯಿ ನಾಯ್ಡು ಚಾಕುವಿನಿಂದ ಗಾಯಗೊಳಿಸಿದ್ದಾನೆ.

ಗಾಯಾಳುಗಳನ್ನು ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್‌ಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಯಂಕಣ್ಣ (48) ಮೃತಪಟ್ಟಿದ್ದು, ತಾಯಿ ಸೌಜನ್ಯ ಹಾಗೂ ಆರೋಪಿ ಸಾಯಿ ನಾಯ್ಡುಗೆ ಬಳ್ಳಾರಿ ವಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸ್ಥಳಕ್ಕೆ ಜಿಲ್ಲಾ ಕೊಪ್ಪಳ ಪೊಲೀಸ್‌ ವರಿಷ್ಠಾಧಿಕಾರಿ ಡಾ.ರಾಮ್‌ ಎಲ್‌ ಅರಸಿದ್ದಿ ರವಿವಾರ ಬೆಳಗಿನ ಜಾವ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

banner

ಈಗಾಗಲೇ ಮೃತ ಪ್ರಗತಿ ನಾಯ್ಡು, ತಂದೆ ಯಂಕಣ್ಣ ನಾಯ್ಡು ಅವರ ಶವ ಪರೀಕ್ಷೆ ನಡೆಸಲಾಗುತ್ತಿದೆ. ತನಿಖೆ ನಡೆಸಲಾಗುತ್ತಿದೆ ಎಂದು ಡಾ.ರಾಮ್‌ ಎಲ್‌ ಅರಸಿದ್ದಿ ಹೇಳಿಕೆ ನೀಡಿದ್ದಾರೆ.

You may also like