ಮಂಗಳೂರು, ಮೇ 31: ನಗರದ ಸ್ಟೇಟ್ಬ್ಯಾಂಕ್ ಬಳಿ ಬೀದಿ ಬದಿ ವ್ಯಾಪಾರಿಗಳನ್ನು ಹೊರಗಿನವರು ಎನ್ನುವ ತಾರತಮ್ಯದಿಂದ ಅವಹೇಳನಕಾರಿ ರೀತಿಯಲ್ಲಿ ಪ್ರಶ್ನೆ ಮಾಡಿದ ವಿಡಿಯೋ ಮಾಡಿದ್ದ ಘಟನೆಯ ವಿಡಿಯೋ ಕುರಿತು ಇದೀಗ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಧರ್ಮ, ಭಾಷೆ, ಪ್ರಾದೇಶಿಕ ಗುರುತುಗಳ ಆಧಾರದಲ್ಲಿ ದ್ವೇಷ ಉಂಟು ಮಾಡುವ ರೀತಿಯಲ್ಲಿ ವರ್ತನೆ ಮಾಡಿದ ಆರೋಪದಲ್ಲಿ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.


ನಗರದ ಸ್ಟೇಟ್ಬ್ಯಾಂಕ್ ಪ್ರದೇಶದಲ್ಲಿ ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ಮತ್ತು ರವಿ ಅಂಚನ್ ತಮ್ಮ ಕುಡ್ಲ ರಾಂಪೇಜ್ ಯೂಟ್ಯೂಬ್ ವಾಹಿನಿಯಲ್ಲಿ ಬೀದಿ ಬದಿಯ ವ್ಯಾಪಾರಿಗಳನ್ನು ನೀವು ಹೊರಗಿನವರು, ತುಳುವರಲ್ಲ, ಹೊರಗಿನವರು ಇಲ್ಲಿ ಬಂದು ವ್ಯಾಪಾರ ಮಾಡಲು ಅವಕಾಶವಿಲ್ಲ ಎಂದು ಹೇಳಿದ್ದು, ಈ ವಿಡಿಯೋ ಸಾರ್ವಜನಿಕವಾಗಿ ವೈರಲ್ ಆಗಿತ್ತು.
ಘಟನೆ ನಡೆದ ದಿನ ಸ್ಥಳದಿಂದ ತೆರಳಿದ್ದ ಬೀದಿ ಬದಿ ವ್ಯಾಪಾರಿ ಸಯ್ಯಿದ್ ಜಬೀ ಉಲ್ಲಾ ಎಂಬುವವರು ಬಂದರು ಪೊಲೀಸ್ ಠಾಣೆಗೆ ಆಗಮಿಸಿ ದೂರನ್ನು ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ದೂರಿನ ಆಧಾರದಲ್ಲಿ ಪ್ರಸನ್ನ ರವಿ ಹಾಗೂ ವಿಡಿಯೋ ಚಿತ್ರೀಕರಣ ಮಾಡಿದ ಅಜಯ್ ಅಂಚನ್ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.
ಇದೇ ವೇಳೆ ಘಟನೆ ನಡೆದಿ ದಿನ ಪ್ರಸನ್ನ ರವಿ ಅವರೂ ಬೀದಿ ಬದಿ ವ್ಯಾಪಾರಿಯ ವಿರುದ್ಧ ಪೊಲೀಸರಿಗೆ ದೂರನ್ನು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಪೊಲೀಸರು ವಿಡಿಯೋ ಸೇರಿ ಲಭ್ಯವಿದ್ದ ಮಾಹಿತಿಗಳ ಪರಿಶೀಲನೆ ಮಾಡಿದ್ದರು. ಅಪರಾಧ ಪ್ರಕರಣ ದಾಖಲಿಸಲು ಅಗತ್ಯವಾದ ಅಂಶಗಳು ಕಂಡು ಬರದ ಹಿನ್ನೆಲೆಯಲ್ಲಿ ಯಾವುದೇ ಎಫ್ಐಆರ್ ದಾಖಲು ಮಾಡಲಾಗಿರಲಿಲ್ಲ. ಬದಲಾಗಿ ಮಹಿಳೆಯ ದೂರನ್ನು ಕಾಗ್ನಿಜಿಬಲ್ ಪ್ರಕರಣವಾಗಿ ದಾಖಲು ಮಾಡಿ ಸ್ವೀಕೃತಿ ಪತ್ರವನ್ನು ನೀಡಲಾಗಿತ್ತು. ನಂತರ ಅವರು ಕಾನೂನು ಪ್ರಕ್ರಿಯೆಯಂತೆ ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯದ ನಿರ್ದೇಶನದ ಮೇರೆಗೆ ಆ ದೂರಿನ ಕುರಿತೂ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿರುವ ಕುರಿತು ವರದಿಯಾಗಿದೆ.

