Home » ಹರಕೆಗೆಂದು ಮುಡಿಕೊಟ್ಟ ನರೇಗಾ ಕಾರ್ಮಿಕನನ್ನು ಗುರುತಿಸದ ಫೇಸ್ ಸ್ಕ್ಯಾನ್ – ಅಟೆಂಡೆನ್ಸ್ ಹಾಕಲು ಜೊತೆಗಾರರಿಂದ ಸಕ್ಕತ್ ಪ್ಲಾನ್

ಹರಕೆಗೆಂದು ಮುಡಿಕೊಟ್ಟ ನರೇಗಾ ಕಾರ್ಮಿಕನನ್ನು ಗುರುತಿಸದ ಫೇಸ್ ಸ್ಕ್ಯಾನ್ – ಅಟೆಂಡೆನ್ಸ್ ಹಾಕಲು ಜೊತೆಗಾರರಿಂದ ಸಕ್ಕತ್ ಪ್ಲಾನ್

0 comments

ನರೇಗಾ ಕೂಲಿ ಕಾರ್ಮಿಕರ ಅಟೆಂಡೆನ್ಸ್ ಹಾಕುವ ಸಂದರ್ಭದಲ್ಲಿ ತಮಾಷೆಯ ಪ್ರಸಂಗವೊಂದು ತೆಲಂಗಾಣದಲ್ಲಿ ನಡೆದಿದೆ. ದೇವಸ್ಥಾನಕ್ಕೆ ಹೋಗಿ ಹರಕೆಗಾಗಿ ತಲೆ ಬೋಳಿಸಿಕೊಂಡು ಬಂದ ಕೂಲಿ ಕಾರ್ಮಿಕನೊಬ್ಬನನ್ನು ಸರ್ಕಾರದ ಡಿಜಿಟಲ್ ಹಾಜರಾತಿ ಆಯಪ್ ಗುರುತಿಸಲು ನಿರಾಕರಿಸಿದೆ. ಈ ವೇಳೆ ಆ ಕೂಲಿ ಕಾರ್ಮಿಕ ಮಾಡಿದ ಪ್ಲಾನ್ ಒಂದು ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ.

ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯ ಇನುಗುರ್ತಿ ಮಂಡಲದ ಕೋಮಟಿಪಲ್ಲಿ ಗ್ರಾಮದ ದಿನಗೂಲಿ ಕಾರ್ಮಿಕ ಮಳ್ಯಾಲ ಶ್ರೀನಿವಾಸ್ ಇತ್ತೀಚೆಗೆ ಕೊಂಡಗಟ್ಟು ವೀರ ಹನುಮಾನ್ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಹರಕೆಗೆಂದು ಬಿಟ್ಟಿದ್ದ ಮುಡಿ ಕೊಟ್ಟಿದ್ದರು. ಅವರು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (MGNREGA) ಯೋಜನೆಯಡಿ ಕೆಲಸಕ್ಕೆ ಮರಳಿದಾಗ ವಿಚಿತ್ರ ಸಮಸ್ಯೆಯೊಂದು ಎದುರಾಯಿತು. ನರೇಗಾ ಕಾಮಗಾರಿ ಸ್ಥಳದಲ್ಲಿ ಪಾರದರ್ಶಕತೆಗಾಗಿ ಸರ್ಕಾರ ಜಾರಿಗೆ ತಂದಿರುವ ಫೇಸ್ ಅಥೆಂಟಿಕೇಶನ್ (ಮುಖ ಗುರುತಿಸುವಿಕೆ) ತಂತ್ರಜ್ಞಾನದ ರಾಷ್ಟ್ರೀಯ ಮೊಬೈಲ್ ಮಾನಿಟರಿಂಗ್ ಸಿಸ್ಟಮ್ (NMMS) ಆಯಪ್ ಶ್ರೀನಿವಾಸ್ ಅವರ ಮುಖವನ್ನು ಗುರುತಿಸಲು ಪದೇ ಪದೇ ನಿರಾಕರಿಸಿತು!  ತಲೆಯಲ್ಲಿದ್ದ ಕೂದಲು ಸಂಪೂರ್ಣ ಮಾಯವಾಗಿದ್ದರಿಂದ ಆಯಪ್ ಅವರ ಹಳೆಯ ಪ್ರೊಫೈಲ್‌ಗೆ ಮ್ಯಾಚ್ ಮಾಡಿಕೊಳ್ಳದೆ ಲಾಗ್ ಇನ್ ಪ್ರಕ್ರಿಯೆಯನ್ನು ತಿರಸ್ಕರಿಸುತ್ತಲೇ ಇತ್ತು. ಶ್ರೀನಿವಾಸ್ ಎಷ್ಟೇ ಪ್ರಯತ್ನ ಪಟ್ಟರು ಕೂಡ ಮುಖದ ಸ್ಕ್ಯಾನ್ ಆಗಲೇ ಇಲ್ಲ. 

ಆಗ ಸರ್ಕಾರದ ಡಿಜಿಟಲ್ ಹಾಜರಾತಿ ಆಯಪ್ ತನನ್ನು ಗುರುತಿಸುತ್ತಿಲ್ಲ ಎಂದು ಗೊತ್ತಾದಾಗ ಆತ ತನ್ನ ಜೊತೆ ಕೆಲಸ ಮಾಡುತ್ತಿದ್ದ ಮಹಿಳೆಯ ಉದ್ದ ಕೂದಲನ್ನು ತಲೆಯ ಮೇಲೆ ಇಟ್ಟುಕೊಂಡ ಬಳಿಕ ಆಯಪ್ ಆತನನ್ನು ಗುರುತಿಸಿದೆ. ಅಷ್ಟೇ ಅಲ್ಲದೇ ಇದ್ದ ಮೀಸೆಯನ್ನು ಮಸಿಯಿಂದ ಮುಖದ ಮೇಲೆ ಬರೆಯಲಾಗಿತ್ತು. ಅಚ್ಚರಿ ಎನ್ನುವಂತೆ ಈ ಬಾರಿ ಸೂಪರ್‌ವೈಸರ್ ಆಯಪ್ ಕ್ಯಾಮೆರಾ ಆನ್ ಮಾಡಿ ಫೇಸ್ ಸ್ಕ್ಯಾನ್ ಮಾಡುತ್ತಿದ್ದಂತೆ, ಸಿಸ್ಟಮ್ ತಕ್ಷಣವೇ ಅವರ ಮುಖವನ್ನು ಗುರುತಿಸಿ ಹಾಜರಾತಿಯನ್ನು ಯಶಸ್ವಿಯಾಗಿ ದಾಖಲಿಸಿತು! ಇದನ್ನು ಕಂಡು ಅಲ್ಲಿದ್ದ ಇತರೆ ಕಾರ್ಮಿಕರು ಹಾಗೂ ಸ್ಥಳೀಯರು ಬೆರಗಾಗಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

You may also like