ಮೂಡುಬಿದಿರೆ: ನೆಲ್ಲಿಕಾರಿನಲ್ಲಿ ಶುಕ್ರವಾರ ಬಾವಿಗೆ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ವೃದ್ಧೆಯ ಪ್ರಕರಣ ಹೊಸ ತಿರುವನ್ನು ಪಡೆದುಕೊಂಡಿದೆ. ಈ ಕುರಿತು ಮೂಡುಬಿದಿರೆ ಹಾಗೂ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ.


ನೆಲ್ಲಿಕಾರಿನ ಮನೆಯಲ್ಲಿ ಒಬ್ಬಂಟಿಯಾಗಿ ವಾಸ ಮಾಡುತ್ತಿದ್ದ 70 ವರ್ಷದ ಪದ್ಮಾವತಿ ಅವರ ಮನೆಗೆ ಅದೇ ಪರಿಸರದ ಆಟೋ ಚಾಲಕ ಸತೀಶ್ ಶೆಟ್ಟಿ ಭೇಟಿ ನೀಡುತ್ತಿದ್ದ, ಬ್ಯಾಂಕ್ ಅಂಗಡಿ ಸೇರಿ ಕೆಲವೊಂದು ಕಡೆಗಳಿಗೆ ಕರೆದುಕೊಂಡು ಹೋಗುವುದು, ಸಣ್ಣಪುಟ್ಟ ಕೆಲಸಗಳಿಗೆ ನೆರವಾಗುವ ಮೂಲಕ ಆತ ವೃದ್ಧೆಯ ವಿಶ್ವಾಸ ಗಳಿಸಿದ್ದ.
ಇವರಿಬ್ಬರ ನಡುವೆ ಆತ್ಮೀಯತೆ ಬೆಳೆದಿದ್ದು, ಸಂಜೆ ಸಮಯದಲ್ಲಿ ಇವರಿಬ್ಬರು ಒಟ್ಟಿಗೆ ಸಮಯ ಕಳೆಯುತ್ತಿದ್ದರು ಎನ್ನಲಾಗಿದೆ. ಈ ವೇಳೆ ಪದ್ಮಾವತಿ ಅವರ ಮನೆಯಲ್ಲಿ ಹಳೆ ಚಿನ್ನಾಭರಣ ಇರುವುದು ಸತೀಶ್ ಗಮನಕ್ಕೆ ಬಂದಿದೆ. ಇದನ್ನು ದೋಚಲು ಆತ ಸಂಚು ರೂಪಿಸಿದ್ದ ಎನ್ನಲಾಗಿದೆ.
ಶುಕ್ರವಾರ ರಾತ್ರಿ ಇಬ್ಬರೂ ಮದ್ಯ ಸೇವಿಸಿದ್ದು, ನಂತರ ಪದ್ಮಾವತಿ ಅವರನ್ನು ಬಾವಿಗೆ ತಳ್ಳಿ ಚಿನ್ನಾಭರಣ ದೋಚಿದ್ದಾನೆ. ವೃದ್ಧೆ ಸತ್ತಿದ್ದಾರೆ ಎಂದು ಭಾವಿಸಿದ ಈತ, ಮರುದಿನ ಆಕೆ ಬದುಕುಳಿದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಚಾರ ತಿಳಿದು, ಗಾಬರಿಗೊಂಡು, ಪಕ್ಕದ ರೆಂಜಾಳ ಹಾಡಿ ಭಾಗಕ್ಕೆ ಹೋಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತನಿಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ.
ಪೊಲೀಸರ ತನಿಖೆಯ ಪ್ರಕಾರ, ದೋಚಿದ ಚಿನ್ನಾಭರಣ ಆತನ ಆಟೋದಲ್ಲಿ ಪತ್ತೆಯಾಗಿದ್ದು, ಪ್ರಕರಣದ ನಿಜಾಂಶ ಬೆಳಕಿಗೆ ಬಂದಿದೆ. ಪೊಲೀಸರ ಮಹಜರು ವೇಳೆ ಆಟೋ ರಿಕ್ಷಾದಲ್ಲಿ ವೃದ್ಧೆಗೆ ಸೇರಿದ್ದ ಎರಡು ಬಳೆ ಹಾಗೂ ಒಂದು ಚೈನ್ ಪತ್ತೆಯಾಗಿತ್ತು. ಘಟನೆಗೆ ಸಂಬಂಧಿಸಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ.

