Bengaluru : ಕೊಲ್ಲಿ ರಾಷ್ಟ್ರಗಳಲ್ಲಿ ಉಂಟಾಗಿರುವ ಯುದ್ಧದ ಆತಂಕದ ಕಾರಣದಿಂದಾಗಿ ಭಾರತದಲ್ಲಿ ಅಡುಗೆ ಅನಿಲದ ಅಭಾವ ಎದುರಾಗಿದೆ. ಹಲವಡೆ ಎಲ್ಪಿಜಿ ಸಿಲಿಂಡರ್ ಸಪ್ಲೈ ಇಲ್ಲದಂತಾಗಿ ಗ್ರಾಹಕರು ಪರದಾಡುವಂತಹ ಸ್ಥಿತಿ ತಲುಪಿದೆ. ಅದರಲ್ಲೂ ಹೋಟೆಲ್ ಗಳ ಸ್ಥಿತಿಯಂತೂ ಹೇಳತೀರದಾಗಿದೆ. ಕೆಲವು ಹೋಟೆಲ್ಗಳಲ್ಲಿ ಸೌದೆ ಒಲೆಗಳ ಮುಖಾಂತರ ಅಡುಗೆ ಮಾಡಿ ಮಾರಾಟ ಮಾಡಲಾಗುತ್ತಿದೆ. ಇನ್ನು ಕೆಲವು ಹೋಟೆಲ್ಗಳು ಸಂಪೂರ್ಣವಾಗಿ ಬಾಗಿಲು ಹಾಕಿಕೊಂಡಿವೆ. ಈ ನಡುವೆ ಗ್ಯಾಸ್ ಕೊರತೆ ನಿವಾರಣೆಗೆ ಹೊಸೂರು ಹೋಟೆಲೊಂದು ಮಾಸ್ಟರ್ ಪ್ಲಾನ್ ಕಂಡುಕೊಂಡಿದೆ.

ಬೆಂಗಳೂರಿನಲ್ಲಿ ಹೋಟೆಲ್ ಒಂದು ಸಿಲಿಂಡರ್ ತಂದು ಕೊಡಿ ಒಂದು ತಿಂಗಳು ಉಚಿತ ಬಿರಿಯಾನಿ ಊಟ ಮಾಡಿ ಎಂದು ತನ್ನ ಗ್ರಾಹಕರಿಗೆ ಆಫರನ್ನು ನೀಡಿದೆ. ಯಸ್, ‘ಸಿಲಿಂಡರ್ ತನ್ನಿ, ಉಚಿತ ಬಿರಿಯಾನಿ ಉಣ್ಣಿ’ ಎಂಬ ವಿಭಿನ್ನ ಅಭಿಯಾನದ ಮೂಲಕ ಈರೋಡ್ ಅಮ್ಮಾಯಿ ಮೆಸ್ ಸಖತ್ ಸುದ್ದಿಯಲ್ಲಿದೆ.
ಹೊಸೂರು ರಸ್ತೆಯ ಗ್ರ್ಯಾಂಡ್ ಸಿನೆಮಾಸ್ ಸಮೀಪದಲ್ಲಿರುವ ಈರೋಡ್ ಅಮ್ಮಾಯಿ ಮೆಸ್ ಹೋಟೆಲ್ನಲ್ಲಿ ಈ ವಿಶೇಷ ಆಫರ್ ಜಾರಿಗೆ ಬಂದಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲೂ ಈ ಆಫರ್ ವೈರಲ್ ಆಗುತ್ತಿದೆ. ಅದರಲ್ಲಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ತಂದರೆ – ಒಂದು ತಿಂಗಳು ಪ್ರತಿದಿನ 1 ಬಿರಿಯಾನಿ ಉಚಿತ 2 ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ತಂದರೆ – ಒಂದು ತಿಂಗಳು ಪ್ರತಿದಿನ 2 ಬಿರಿಯಾನಿ ಉಚಿತ ಎಂದು ಬೋರ್ಡ್ ಹಾಕಿದೆ.
