ಪಶ್ಚಿಮ ಬಂಗಾಳದಲ್ಲಿ(West Bengal) ಇಂದು ನಡೆದ ಸುವೇಂದು ಅಧಿಕಾರಿ ಅವರ ಪ್ರಮಾಣವಚನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 97 ವರ್ಷದ ಹಿರಿಯರೊಬ್ಬರ ಕಾಲಿಗೆ ಎರಗಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲಾಗುತ್ತಿದ್ದು, ಯಾರಿವರು ಎಂಬ ಚರ್ಚೆ ಶುರುವಾಗಿದೆ.


ಹೌದು, ಪಶ್ಚಿಮ ಬಂಗಾಳದಲ್ಲಿ ನೂತನ ಸಿಎಂ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ವೇದಿಕೆ ಏರುತ್ತಿದ್ದಂತೆ
97 ವರ್ಷದ ನಾಯಕ ಮಖನ್ಲಾಲ್ ಸರ್ಕಾರ್ ಅವರಿಗೆ ವಿಶೇಷ ಗೌರವ ಸಲ್ಲಿಸಿದ್ದಾರೆ. ಮೊದಲಿಗೆ ಎಲ್ಲರಿಗೂ ಇವರಾರು ಎಂಬ ಕುತೂಹಲ, ಆಶ್ಚರ್ಯ ಮನೆಮಾಡಿತ್ತು. ನಂತರ ತಿಳಿದುಬಂದದ್ದು, ಇವರೇ 98 ವರ್ಷದ ಮಖನ್ಲಾಲ್ ಸರ್ಕಾರ್. ಮಖನ್ಲಾಲ್ ಸರ್ಕಾರ್ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದರು. ಸಿಲಿಗುರಿಯ ನಿವಾಸಿಯಾದ ಇವರು ಜನಸಂಘದ ಸ್ಥಾಪಕ ಶ್ಯಾಮಪ್ರಸಾದ್ ಮುಖರ್ಜಿ ಅವರ ಆಪ್ತ ಸಹಾಯಕರಾಗಿದ್ದರು. ಮುಖರ್ಜಿ ಅವರ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಕೆಲವೇ ಜೀವಂತ ವ್ಯಕ್ತಿಗಳಲ್ಲಿ ಇವರು ಒಬ್ಬರು.
ಮಖನ್ಲಾಲ್ ಸರ್ಕಾರ್ ಸಾಮಾನ್ಯ ವ್ಯಕ್ತಿಯಲ್ಲ. ಸ್ವಾತಂತ್ರ್ಯಾನಂತರ ಭಾರತದ ರಾಜಕೀಯದಲ್ಲಿ, ವಿಶೇಷವಾಗಿ ರಾಷ್ಟ್ರಪ್ರೇಮ ಮತ್ತು ರಾಷ್ಟ್ರೀಯತೆಯ ಚಳುವಳಿಗಳಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಜಮ್ಮು ಮತ್ತು ಕಾಶ್ಮೀರದ ಪ್ರಸಿದ್ಧ ಲಾಲ್ ಚೌಕ್ನಲ್ಲಿ ಶ್ಯಾಮ ಪ್ರಸಾದ್ ಮುಖರ್ಜಿ ಅವರೊಂದಿಗೆ ಸೇರಿ ತ್ರಿವರ್ಣ ಧ್ವಜವನ್ನು ಹಾರಿಸಿದ ಐತಿಹಾಸಿಕ ವ್ಯಕ್ತಿಗಳಲ್ಲಿ ಮಖನ್ಲಾಲ್ ಸರ್ಕಾರ್ ಒಬ್ಬರು. ರಾಷ್ಟ್ರಧ್ವಜವನ್ನು ಅಲ್ಲಿ ಹಾರಿಸುವುದು ಆ ಕಾಲದಲ್ಲಿ ದೊಡ್ಡ ಧೈರ್ಯದ ಕೆಲಸವಾಗಿತ್ತು.
1952 ರಲ್ಲಿ ಶ್ಯಾಮ ಪ್ರಸಾದ್ ಮುಖರ್ಜಿ ಅವರೊಂದಿಗೆ ಮಖನ್ಲಾಲ್ ಸರ್ಕಾರ್ ಬಂಧಿತರಾದರು. ದೇಶದ ಏಕತೆ, ಸಂವಿಧಾನ ಮತ್ತು ರಾಷ್ಟ್ರೀಯ ಹಿತಾಸಕ್ತಿಗಾಗಿ ಅವರು ಹಲವಾರು ಬಾರಿ ಹೋರಾಟಕ್ಕೆ ಇಳಿದಿದ್ದರು. ಸ್ವತಂತ್ರ ಭಾರತದ ರಾಜಕೀಯದಲ್ಲಿ, ವಿಶೇಷವಾಗಿ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳ ಬಲ ಹೆಚ್ಚಾಗಿದ್ದ ಸಮಯದಲ್ಲೂ ಮಖನ್ಲಾಲ್ ಸರ್ಕಾರ್ ಭಾರತೀಯ ಜನಸಂಘ ಮತ್ತು ನಂತರದ ಬಿಜೆಪಿ ಪಕ್ಷದ ಪರವಾಗಿ ನೆಲಮಟ್ಟದಲ್ಲಿ ಕೆಲಸ ಮಾಡುತ್ತಲೇ ಇದ್ದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಷ್ಟ್ರಭಕ್ತಿ ಗೀತೆ ಹಾಡಿದ್ದಕ್ಕಾಗಿ ಮಖನ್ಲಾಲ್ ಸರ್ಕಾರ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಈ ಪ್ರಕರಣ ನ್ಯಾಯಾಲಯಕ್ಕೆ ಬಂದಾಗ, ಅವರು ಕ್ಷಮೆಯಾಚಿಸಲು ಸಾರಾಸಗಟಾಗಿ ನಿರಾಕರಿಸಿದರು. ಅಷ್ಟೇ ಅಲ್ಲದೆ, ನ್ಯಾಯಾಧೀಶರ ಸಮ್ಮುಖದಲ್ಲೇ ಅದೇ ರಾಷ್ಟ್ರಭಕ್ತಿ ಗೀತೆಯನ್ನು ಗಂಭೀರವಾಗಿ ಹಾಡಿದರು. ಅವರ ಧೈರ್ಯ ಮತ್ತು ದೇಶಪ್ರೇಮಕ್ಕೆ ಮಾರುಹೋದ ನ್ಯಾಯಾಧೀಶರು, ಅವರನ್ನು ಗೌರವಯುತವಾಗಿ ಬಿಡುಗಡೆ ಮಾಡಿದ್ದಲ್ಲದೆ, ಅವರು ಮನೆಗೆ ಮರಳಲು ರೈಲ್ವೆಯ ಪ್ರಥಮ ದರ್ಜೆ ಟಿಕೆಟ್ ಹಾಗೂ ಪ್ರಯಾಣದ ಖರ್ಚಿಗಾಗಿ 100 ರೂಪಾಯಿ ನೀಡುವಂತೆ ಆದೇಶಿಸಿದ್ದರು ಎಂದು ಭಟ್ಟಾಚಾರ್ಯ ನೆನಪಿಸಿಕೊಂಡಿದ್ದಾರೆ.
1981 ರಿಂದ ಮಖನ್ಲಾಲ್ ಸರ್ಕಾರ್ ಬಿಜೆಪಿ ಪಕ್ಷದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದರು. ಜಿಲ್ಲಾ ಅಧ್ಯಕ್ಷ ಸೇರಿದಂತೆ ಅನೇಕ ಸಂಘಟನಾತ್ಮಕ ಜವಾಬ್ದಾರಿಗಳನ್ನು ಹೊತ್ತು ಪಕ್ಷದ ನೆಲಮಟ್ಟದ ಸಂಘಟನೆ ಬಲಪಡಿಸಿದರು. ಹಿರಿಯ ಕಾರ್ಯಕರ್ತ, ಸಂಘಟಕ, ಹೋರಾಟಗಾರ ಎಂಬ ಹೆಸರನ್ನು ಅವರು ತಮ್ಮ ಪರಿಶ್ರಮದಿಂದ ಗಳಿಸಿದರು. ಇಂತಹ ಹಿನ್ನಲೆ ಹೊಂದಿದ ಮಖನ್ಲಾಲ್ ಸರ್ಕಾರ್ರನ್ನು ಪ್ರಧಾನ ಮಂತ್ರಿ ಮೋದಿ ವೇದಿಕೆಯ ಮೇಲೆ ಗೌರವಿಸುವುದು, ಅವರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆಯುವುದು, ಅಲ್ಲಿದ್ದ ಎಲ್ಲರಿಗೂ ಭಾವನಾತ್ಮಕ ಕ್ಷಣವಾಯಿತು.

