

ಬೆಂಗಳೂರು: ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಿದ ಅಥವಾ ಆಸ್ತಿ ನೋಂದಣಿಯಾದ ಏಳು ದಿನಗಳ ನೋಟಿಸ್ ಅವಧಿಯಲ್ಲಿ ಯಾವುದೇ ಆಕ್ಷೇಪಣೆ ಸಲ್ಲಿಕೆಯಾಗದಿದ್ದರೆ ಸ್ವಯಂಚಾಲಿತವಾಗಿ ಖಾತೆ ಬದಲಾವಣೆ ಆಗುವ ಸ್ವಯಂಚಾಲಿತ ಮ್ಯುಟೇಷನ್ ವ್ಯವಸ್ಥೆಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ವಿಕಾಸಸೌಧದಲ್ಲಿ ಮಂಗಳವಾರ ಚಾಲನೆ ನೀಡಿದರು.
ಇದರ ಅನ್ವಯ ಆನ್ಲೈನ್ ಮೂಲಕ ಖಾತೆ ಬದಲಾವಣೆಗೆ ಮನವಿ ಸಲ್ಲಿಸಿದರೆ 7 ದಿನ ನೋಟಿಸ್ ಅವಧಿ ಇರುತ್ತದೆ. ಈ ಅವಧಿಯಲ್ಲಿ ಭೂಮಿ ತಂತ್ರಾಂಶದ ಮೂಲಕ ಯಾರೂ ತಕರಾರು ಸಲ್ಲಿಸದಿದ್ದರೆ ಎಂಟನೇ ದಿನ ಸ್ವಯಂ ಚಾಲಿತವಾಗಿ ಖಾತೆ ಬದಲಾವಣೆಯಾಗುತ್ತದೆ.
ಇನ್ನು ಉಪನೋಂದಣಿ ಕಚೇರಿಯಲ್ಲಿ ಹೊಸದಾಗಿ ಆಸ್ತಿ ನೋಂದಣಿ ಆದರೆ ಉಪನೋಂದಣಿ ಕಚೇರಿಯಿಂದ ಜೆ-ಸ್ಲಿಪ್ (ಜಮಾಬಂಧಿ) ಬಂದ ನಂತರ ನಿಗದಿತ ಸಮಯದಲ್ಲಿ ಯಾವುದೇ ಆಕ್ಷೇಪಣೆ ಬರದಿದ್ದರೆ ಕಂದಾಯ ನಿರೀಕ್ಷಕರ ಬೆರಳಚ್ಚು ಅಥವಾ ಭೌತಿಕ ಒಪ್ಪಿಗೆಯ ಅಗತ್ಯವಿಲ್ಲದೆಯೇ ಖಾತಾ ಬದಲಾವಣೆಯಾಗಲಿದೆ.
ಆಸ್ತಿ ಖರೀದಿದಾರರಿಗೆ ಹಾಗೂ ರೈತರಿಗೆ ಅತ್ಯಂತ ವೇಗವಾಗಿ ಹಕ್ಕು ವರ್ಗಾವಣೆ ದಾಖಲೆಗಳು ಸಿಗಲಿವೆ.
ವಾರಸತ್ವ ಹಕ್ಕು, ನ್ಯಾಯಾಲಯ ಆದೇಶ ಮತ್ತಿತರ ಪ್ರಕರಣಗಳಲ್ಲಿ ಖಾತೆ ಬದಲಾವಣೆಗೆ ಮನವಿ ಬಂದರೆ 15 ದಿನ ನೋಟಿಸ್ ಅವಧಿ ಇದ್ದು, ತಕರಾರು ಸಲ್ಲಿಸಬಹುದಾಗಿದೆ. ತಕರಾರು ಇಲ್ಲದಿದ್ದರೆ 16ನೇ ದಿನ ಸ್ವಯಂ ಚಾಲಿತವಾಗಿ ಖಾತೆ ಬದಲಾವಣೆಯಾಗಲಿದೆ.
ನೋಟಿಸ್ ಅಗತ್ಯವಿಲ್ಲದ ಅಂದರೆ ಸಾಲ ಪಡೆಯುವುದು, ಭೂ ಪರಿವರ್ತನೆ, ಪೋಡಿ, ಭೂಸ್ವಾಧೀನ, ನ್ಯಾಯಾಲಯ ಆದೇಶ, ನ್ಯಾಯಾಲಯ ತಡೆಯಾಜ್ಞೆ, ಸರ್ಕಾರದ ಆದೇಶ, ಸಾಗುವಳಿ ಚೀಟಿ ನಮೂದು, ಪಹಣಿ ವರ್ಗಾವಣೆ ಸೇವೆಗಳನ್ನು 2024ರಿಂದಲೇ ಸ್ವಯಂ ಚಾಲಿತಗೊಳಿಸಲಾಗಿತ್ತು. ಇಂತಹ ಪ್ರಕರಣಗಳು ತಿಂಗಳಿಗೆ ಸರಾಸರಿ 2.47 ಲಕ್ಷ ಖಾತೆ ಬದಲಾವಣೆಗಾಗಿ ಬರುತ್ತಿದ್ದು, ಈ ಪೈಕಿ ಶೇ.70 ರಷ್ಟು ಖಾತೆ ಬದಲಾವಣೆಯನ್ನು ಈಗಾಗಲೇ ಸ್ಚಯಂ ಚಾಲಿತವಾಗಿ ಮಾಡಲಾಗುತ್ತಿದೆ ಎಂದು ಹೇಳಿದರು.
ಪಹಣಿ ಜೊತೆಗೆ ಆಧಾರ್ ಜೋಡಿಸಲು ಕರೆ:
ನಕಲಿ ವಹಿವಾಟು ತಪ್ಪಿಸಿ ಆಸ್ತಿ ಮಾಲೀಕತ್ವವನ್ನು ಮತ್ತಷ್ಟು ಸುಭದ್ರಗೊಳಿಸಲು ಸಾರ್ವಜನಿಕರು ತಮ್ಮ ಪಹಣಿಯ ಜೊತೆಗೆ ಆಧಾರ್ ಜೋಡಣೆಗೊಳಿಸಬೇಕು. ಇದರಿಂದ ತಮ್ಮ ಆಸ್ತಿಯ ಬಗ್ಗೆ ಯಾವುದೇ ಅನಧಿಕೃತ ವಹಿವಾಟು ನಡೆದರೂ ಮೊಬೈಲ್ಗೆ ಸಂದೇಶ ಬರಲಿದೆ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿರುವುದಾಗಿ ಏಷ್ಯನೆಟ್ ಕನ್ನಡ ನ್ಯೂಸ್ ವರದಿ ಮಾಡಿದೆ.
