

ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ಹಾಗಲಕಾಯಿ ಅಡುಗೆ ಮಾಡಿದ ವಿಚಾರಕ್ಕೆ ಉಂಟಾದ ಜಗಳದಲ್ಲಿ 37 ವರ್ಷದ ವ್ಯಕ್ತಿಯೊಬ್ಬ ತನ್ನ 65 ವರ್ಷದ ತಾಯಿಯನ್ನು ಕೊಂದಿರುವ ಘಟನೆ ನಡೆದಿದೆ. ಮುಲ್ ತೆಹಸಿಲ್ ವ್ಯಾಪ್ತಿಯ ಡೊಂಗರ್ಗಾಂವ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸುಮಿತ್ರಾ ಪೆಟ್ಕುಲೆ (65) ಮೃತ ಮಹಿಳೆ ಎಂದು ಗುರುತಿಸಲಾಗಿದ್ದು, ಆರೋಪಿ ಜಗದೀಶ್ ಪೆಟ್ಕುಲೆ (37) ಬಂಧಿಸಲಾಗಿದೆ.
ಪೊಲೀಸರ ಪ್ರಕಾರ, ಜಗದೀಶ್ ಮದ್ಯದ ಚಟ ಹೊಂದಿದ್ದ. ಆತನ ಪತ್ನಿ ಎರಡು ತಿಂಗಳ ಹಿಂದೆ ಮನೆ ಬಿಟ್ಟು ಹೋಗಿದ್ದು ನಂತರ ಆತ ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದ. ಘಟನೆಯ ರಾತ್ರಿ, ಕುಡಿದ ಮತ್ತಿನಲ್ಲಿ ಮನೆಗೆ ಬಂದ ಆರೋಪಿ ಜಗದೀಶ್ ಆತನಿಗೆ ಇಷ್ಟವಿಲ್ಲದ ಪದಾರ್ಥ ಹಾಗಲಕಾಯಿ ಅಡುಗೆ ಮಾಡಿದ್ದಕ್ಕೆ ತನ್ನ ತಾಯಿಯೊಂದಿಗೆ ಜಗಳವಾಡಲು ಪ್ರಾರಂಭ ಮಾಡಿದ್ದಾನೆ.
ಜಗಳ ಶೀಘ್ರದಲ್ಲೇ ಉಲ್ಬಣಗೊಂಡಿದ್ದು, ಜಗದೀಶ್ ತನ್ನ ತಾಯಿಯ ಮೇಲೆ ಒದ್ದು ಕ್ರೂರವಾಗಿ ಹಲ್ಲೆ ಮಾಡಿದನೆಂದು ಆರೋಪಿಸಲಾಗಿದೆ. ಈ ದಾಳಿಯು ಮಾರಕವಾಗಿದ್ದು, ಸುಮಿತ್ರಾ ಪೆಟ್ಕುಲೆ ಸ್ಥಳದಲ್ಲೇ ಸಾವನ್ನಪ್ಪಿದರು.
ಮುಲ್ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ತಲುಪಿ ಆರೋಪಿಯನ್ನು ಬಂಧಿಸಿದ್ದಾರೆ. ಹಾಗಲಕಾಯಿ ಖಾದ್ಯದ ವಿವಾದದ ನಂತರ ಈ ಕೊಲೆ ನಡೆದಿದೆ ಎಂದು ಇನ್ಸ್ಪೆಕ್ಟರ್ ವಿಜಯ್ ರಾಥೋಡ್ ಹೇಳಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
