

ಮಂಗಳೂರು: ಇನ್ಶೂರೆನ್ಸ್ ಮಾಡಿಸಿಕೊಡುವುದಾಗಿ ನಂಬಿಸಿ ಕ್ರೆಡಿಟ್ ಕಾರ್ಡ್ ಮಾಹಿತಿ ಹಾಗೂ ಒಟಿಪಿ ಪಡೆದು ಲಕ್ಷಾಂತರ ರೂ. ದೋಚಿದ್ದ ವಂಚಕನೊಬ್ಬನನ್ನು ದಕ್ಷಿಣ ಕನ್ನಡ ಜಿಲ್ಲ ಸೈಬರ್ ಅಪರಾಧ ಪೊಲೀಸ್ ಠಾಣೆಯ ಅಧಿಕಾರಿಗಳು ಬಂಧನ ಮಾಡಿದ್ದಾರೆ.
ಏನಿದು ಪ್ರಕರಣ:
ಪುತ್ತೂರು ನಿವಾಸಿ ಯಶೋಧರ ಎನ್ನುವವರಿಗೆ ಅಪರಿಚಿತ ವ್ಯಕ್ತಿಯೊಬ್ಬ ವಿವಿಧ ಮೊಬೈಲ್ ಸಂಖ್ಯೆಯಿಂದ ಕರೆ ಮಾಡಿ, ತಾನೊಬ್ಬ ಇನ್ಶೂರೆನ್ಸ್ ಕಂಪನಿಯೊಂದರ ಪ್ರತಿನಿಧಿ ಎಂದು ಪರಿಚಯಿಸಿಕೊಂಡು ಇನ್ಯೂರೆನ್ಸ್ ಪಾಲಿಸಿ ಮಾಡಿಸಿಕೊಡುವುದಾಗಿ ನಂಬಿಸಲು ಯತ್ನ ಮಾಡಿದ್ದ. ಆದರೆ ಫಿರ್ಯಾದಿದಾರರ ಯಶೋಧರ ಅವರು ಇನ್ಶೂರೆನ್ಸ್ ಮಾಡಿಸಲು ನಿರಾಕರಿಸಿದ್ದರು.
ಯಶೋಧರ ಅವರು ನಿರಾಕರಿಸುತ್ತಿದ್ದರೆ ವರಸೆ ಬದಲಿಸಿದ ಆರೋಪಿ, ಇನ್ಶೂರೆನ್ಸ್ ಪ್ರಕ್ರಿಯೆಯನ್ನು ಕ್ಯಾನ್ಸಲ್ ಮಾಡುವುದಾಗಿ ತಿಳಿಸಿದ್ದ. ಇದನ್ನು ನಂಬಿದ ಯಶೋಧರ ಅವರಿಂದ ಕ್ರೆಡಿಟ್ ಕಾರ್ಡ್ ನಂಬರ್ ಹಾಗೂ ಮೊಬೈಲ್ಗೆ ಬಂದ ಒಟಿಪಿಯನ್ನು ಪಡೆದುಕೊಂಡಿದ್ದ. ಕೂಡಲೇ ಯಶೋಧರ ಅವರ ಕ್ರೆಡಿಟ್ ಕಾರ್ಡ್ನಿಂದ 2,37,036 ರೂ. ಹಣವನ್ನು ಆರೋಪಿಯು ಬೇರೆ ಖಾತೆ ವರ್ಗಾಯಿಸಿ ವಂಚನೆ ಮಾಡಿದ್ದ.
ವಂಚನೆಗೊಳಗಾದ ಯಶೋಧರ ಅವರು ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ವೈಜ್ಞಾನಿಕ ತನಿಖೆ ಮಾಡಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.
ಆರೋಪಿ ಮಹಾರಾಷ್ಟ್ರ ಮೂಲದವನಾಗಿದ್ದು, ಪ್ರಸ್ತುತ ಮಂಡ್ಯ ಜಿಲ್ಲೆಯ ಕೃಷ್ಣ ರಾಜ ಪೇಟೆಯಲ್ಲಿ ವಾಸಿಸುತ್ತಿದ್ದ ಅವಿನಾಶ್ ರಮೇಶ್ ಗೌಡ (24) ಎಂಬಾತನೇ ಬಂಧಿತ ಆರೋಪಿ. ಈತನನ್ನು ಫೆ11, 2026 ರಂದು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿ ವಿರುದ್ಧ ಸೈಬರ್ ಪೊಲೀಸ್ ಠಾಣೆಯಲ್ಲಿ ಹಲವು ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.













