

ಮಂಗಳೂರು: ಭಾರತೀಯರನ್ನು ಟಾರ್ಗೆಟ್ ಮಾಡಿ ಕೋಟಿ ಕೋಟಿ ಹಣ ಲೂಟಿ ಮಾಡುತ್ತಿದ್ದ, ಒಟ್ಟು 11 ಜನ ಆರೋಪಿತರನ್ನು ಮಂಗಳೂರು ನಗರ ಸೆನ್ಕ್ರೈಂ ಪೊಲೀಸ್ ಠಾಣೆಯವರು ದಸ್ತಗಿರಿ ಮಾಡಿದ್ದಾರೆ. ವಂಚಕರಲ್ಲಿ 16 ಜನ ಭಾರತೀಯರ ಜೊತೆಗೆ ಚೈನಾದ ವಂಚಕರಿದ್ದು, ನೇಪಾಳ ಪೊಲೀಸರು ಚೈನಾದ ವಂಚಕರನ್ನು ದಸ್ತಗಿರಿ ಮಾಡಿರುತ್ತಾರೆ. ನೇಪಾಳದಲ್ಲಿ ಕುಳಿತುಕೊಂಡು ಈ ಕೃತ್ಯ ಎಸೆಯಲಾಗುತ್ತಿತ್ತು.
ಇನ್ನೂ ಕೂಡಾ ಐದು ಭಾರತೀಯರು ತಲೆಮರೆಸಿಕೊಂಡಿದ್ದಾರೆ. ಪತ್ತೆ ಕಾರ್ಯ ಮುಂದುವರಿದಿದೆ. ಬಂಧಿತರ ಮೊಬೈಲ್ ಲ್ಯಾಪ್ಟಾಪ್ ಪರಿಶೀಲನೆ ಮಾಡಿದಾಗ, ಒಟ್ಟು 624 ಬ್ಯಾಂಕ್ ಖಾತೆಗಳ ವಿವರಗಳು ಕಂಡು ಬಂದಿದೆ. ಬ್ಯಾಂಕ್ ಖಾತೆಗಳ ಮೇಲೆ ಒಟ್ಟು 4580 ಕ್ಕೂ ಹೆಚ್ಚು NCRP PORTAL ನಲ್ಲಿ ಪ್ರಕರಣಗಳು ದಾಖಲಾಗಿದೆ. ಇದರಲ್ಲಿ ಒಂದು ಬ್ಯಾಂಕ್ ಖಾತೆಯಲ್ಲಿ 167 ಕೋಟಿ ಹಣ ವರ್ಗಾವಣೆಯಾಗಿರುತ್ತದೆ.
ವಂಚನೆಗೆ ಬಳಸಿದ ಹತ್ತು ಬ್ಯಾಂಕ್ ಖಾತೆಗಳಲ್ಲಿ ಸುಮಾರು 30,70,26,725 ಹಣ ವರ್ಗಾವಣೆ ಆಗಿದ್ದು, ಉಳಿದ 623 ಬ್ಯಾಂಕ್ ಖಾತೆಗಳ ವಿವರಣೆ ಪಡೆಯಬೇಕಾಗಿದೆ.
ದೂರುದಾರರೊಬ್ಬರು 1 ಕೋಟಿ 38 ಲಕ್ಷ ಹಣವನ್ನು 10 ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿ ವಂಚನೆಗೊಳಗಾಗಿದ್ದು, ಈ ಕುರಿತು ಮಂಗಳೂರು ಸೆನ್ ಕ್ರೈಂ ಪೊಲೀಸ್ ಠಾಣಾ ಬಿಎನ್ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ತನಿಖೆ ಮಾಡಿದಾಗ, ತಾಂತ್ರಿಕ ವಿಶ್ಲೇಷಣೆಯಿಂದ ಪತ್ತೆ ಹಚ್ಚಿ ವಂಚಕರ ಗ್ಯಾಂಗನ್ನು ದಸ್ತಗಿರಿ ಮಾಡಲಾಗಿದೆ.
ಬಂಧಿತರನ್ನು ಗುಜರಾತ್ನ ಮಕವನ್ ವಿಕ್ರಂ (25), ಪಶ್ಚಿಮ ಬಂಗಾಳದ ಸೌಮ್ಯಾಧಿತ್ಯ ಚಟ್ಟೋಪಾಧ್ಯಾಯ (21), ಜಾರ್ಖಂಡ್ನ ಪುಪ್ಲ ಶಿವಕುಮಾರ್ ರಾವ್ (32) ಮತ್ತು ರಾಜೇಶ್ ಮಂಡನ್ (30), ಮಿಥುನ್ ಕುಮಾರ್ ಮಂಗರಾಜ್ (38), ಉತ್ತರ ಪ್ರದೇಶದ ಗೌರವ್ ಪಾಂಡೆ (24) ಮತ್ತು ಹರ್ಷ ಮಿಸ್ರಾ (22) ಹಾಗೂ ಮುಹಮ್ಮದ್ ಆಕೀಬ್ ಅಲಿ (27), ನೌಶಾದ್ ಅಲಿ (34), ಬಿಹಾರ್ನ ರಾಜೀವ್ ರಂಜನ್ ಕುಮಾರ್ (30), ರಾಜಸ್ತಾನದ ಓಂ ಪ್ರಕಾಶ್ ಯಾದವ್ (37) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ 1 ಲ್ಯಾಪ್ಟಾಪ್, 21 ಮೊಬೈಲ್ ಪೋನ್ಗಳು, ವಿವಿಧ ಕಂಪನಿಯ 20 ಸಿಮ್ಕಾರ್ಡ್ಗಳು, ಬೇರೆ ಬೇರೆ ಬ್ಯಾಂಕ್ಗಳ 20 ಡೆಬಿಟ್-ಕ್ರೆಡಿಟ್ ಕಾರ್ಡ್ಗಳನ್ನು ವಶಪಡಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.













