ಕಾಡೆಮ್ಮೆಯನ್ನು ಗುಂಡಿಕ್ಕಿ ಹತ್ಯೆ | ಅರಣ್ಯ ಇಲಾಖೆಯಿಂದ ಪರಿಶೀಲನೆ

ಉಡುಪಿ : ಕಾಡೆಮ್ಮೆಯೊಂದನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೆಂಗವಳ್ಳಿ ಗ್ರಾಮದ ದೊಡ್ಡಬೆಳ್ಳಾರ್ ಎಂಬಲ್ಲಿ ನಡೆದಿದೆ.

ಸೋಮವಾರ ಈ ವಿಚಾರ ಸ್ಥಳೀಯರ ಗಮನಕ್ಕೆ ಬಂದಿದ್ದು, ಸ್ಥಳೀಯರು ಶಂಕರನಾರಾಯಣ ಅರಣ್ಯ ಇಲಾಖೆಗೆ ಹಾಗೂ ಹೆಂಗವಳ್ಳಿ ಗ್ರಾಮ ಪಂಚಾಯತ್‌ಗೆ ಮಾಹಿತಿಯನ್ನು ನೀಡಿದ್ದಾರೆ.

ಮಾಹಿತಿ ಪಡೆದು ಕೊಂಡು ಸ್ಥಳಕ್ಕೆ ಆಗಮಿಸಿದ ಅರಣ್ಯ ಅಧಿಕಾರಿಗಳು ಪರಿಶೀಲನೆ ನಡೆಸಿ, ಕಾಡೆಮ್ಮೆಯನ್ನು ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯ ಸಂಸ್ಕಾರ ನಡೆಸಿದರು.

ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್, ಶಂಕರನಾರಾಯಣ ವಲಯ ಅರಣ್ಯಧಿಕಾರಿ ಚಿದಾ ನಂದಪ್ಪ, ಹೆಂಗವಳ್ಳಿ ಗ್ರಾಪಂ ಅಧ್ಯಕ್ಷ ರಘುರಾಮ್ ಶೆಟ್ಟಿ ಹಾಗೂ ಅರಣ್ಯ ಅಧಿಕಾರಿಗಳು, ಸಿಬ್ಬಂದಿಗಳು, ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.

ಕಾಡೆಮ್ಮೆಯನ್ನು ಹತ್ಯೆ ಮಾಡಿರುವವರ ಪತ್ತೆಗೆ ಅರಣ್ಯ ಇಲಾಖೆಯವರು ಕ್ರಮಕೈಗೊಂಡಿದ್ದು,ಮಾಂಸದ ಉದ್ದೇಶಕ್ಕಾಗಿ ಕಾಡೆಮ್ಮೆಯನ್ನು ಹತ್ಯೆ ಮಾಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.

Leave A Reply

Your email address will not be published.