Ayodhya: ಭಾರಿ ನೂಕುನುಗ್ಗಲು, ಮೂರ್ಛೆ ಹೋದ ಭಕ್ತ, ಸದ್ಯಕ್ಕೆ ಅಯೋಧ್ಯೆಗೆ ಬರಬೇಡಿ-ಪೊಲೀಸರಿಂದ ಮನವಿ

Ayodhya: ಅಯೋಧ್ಯೆ ಶ್ರೀ ರಾಮನ ವಿಗ್ರಹವನ್ನು ಮಂಗಳವಾರ ಸಾರ್ವಜನಿಕ ದರ್ಶನಕ್ಕೆ ನೀಡಲಾಗಿದೆ. ಆದರೆ ಮೊದಲ ದಿನವೇ ಅಯೋಧ್ಯೆಗೆ ಹರಿದು ಬಂದ ಜನಸಾಗರದಿಂದ ಭಾರೀ ನೂಕು ನುಗ್ಗಲು ಉಂಟಾಗಿದೆ. ಜನಸಂದಣಿಯನ್ನು ನಿಯಂತ್ರಿಸಲು ಸಾಧ್ಯವಾಗದೇ ಪೊಲೀಸರು ಸುಸ್ತಾಗಿ ಹೋಗಿದ್ದು, ಸದ್ಯಕ್ಕೆ ಅಯೋಧ್ಯೆಯತ್ತ ಬರಬೇಡಿ ಎಂದು ಜನತೆಗೆ ಮನವಿಯನ್ನು ಮಾಡಿದ್ದಾರೆ.

ಲಕ್ಷಾಂತರ ಮಂದಿ ಭಕ್ತಾಧಿಗಳು, ಪಾದಯಾತ್ರೆಯ ಮೂಲಕ, ವಾಹನಗಳಲ್ಲಿ ಬಂದಿದ್ದು, ನೋಡ ನೋಡುತ್ತಿದ್ದಂತೆ ಸರದಿ ಸಾಲು ಹೆಚ್ಚಾಗಿದೆ. ನಾ ಮುಂದು ತಾ ಮುಂದು ಎಂದು ಸರದಿ ಸಾಲು ಬಿಟ್ಟು ಓಡೋಡಿ ಬಂದಿದ್ದಾರೆ. ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ ಮುರಿದು ಮಂದಿರದೊಳಗೆ ನುಗ್ಗಿದ್ದಾರೆ. ಒಬ್ಬ ಭಕ್ತ ಮೂರ್ಛೆ ಹೋಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪೊಲೀಸರು ಈ ಹಂತದಲ್ಲಿ ಏನೂ ಮಾಡಲಾಗದೇ ಅಸಹಾಯಕರಾಗಿ ಕೈ ಚೆಲ್ಲಿ ನಿಂತಿದ್ದರು. ನಂತರ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿದರೂ, ಪರಿಸ್ಥಿತಿಯನ್ನು ನಿಭಾಯಿಸಲು ಹರಸಾಹಸ ಪಡಬೇಕಾಯಿತು.

ಪರಿಸ್ಥಿತಿ ಕೈ ಮೀರಿದ್ದರಿಂದ ಬಾರಾಬಂಕಿಯಲ್ಲೇ ವಾಹನ ಹಾಗೂ ಪಾದಯಾತ್ರಿಕರನ್ನು ಪೊಲೀಸರು ತಡೆ ಹಿಡಿದಿದ್ದು, ಅಯೋಧ್ಯೆಯಲ್ಲಿ ಸ್ಥಿತಿ ಸರಿಯಾಗುವವರೆಗೂ ಅತ್ತ ಪ್ರಯಾಣಿಸಬೇಡಿ ಎಂದು ಜನರಲ್ಲಿ ಉತ್ತರಪ್ರದೇಶ ಪೊಲೀಸರು ಕೇಳಿಕೊಂಡಿದ್ದಾರೆ.

Leave A Reply

Your email address will not be published.