ಉಪ್ಪಿನಂಗಡಿ : ಹುಳವಿದ್ದ ಊಟ ನೀಡಿಕೆ, ಹೋಟೆಲ್‌ ಬಂದ್‌

ಶುಚಿ ರುಚಿಯಾದ ಆಹಾರವನ್ನರಸಿ ಹೋಟೆಲಿಗೆ ಭೇಟಿ ಕೊಡುವಾಗ ಆಹಾರದಲ್ಲಿ ಹುಳ ಕಂಡರೆ ಕೋಪ ನೆತ್ತಿಗೇರೋದು ಗ್ಯಾರಂಟಿ. ಇದೇ ರೀತಿ ಪ್ರಕರಣವೊಂದು ಮುನ್ನಲೆಗೆ ಬಂದಿದ್ದು, ಸದ್ಯ ಹೊಟೇಲ್ ಅನ್ನು ಬಂದ್ ಮಾಡಲಾಗಿದೆ.

ದಕ್ಷಿಣ ಕನ್ನಡದ ಉಪ್ಪಿನಂಗಡಿಯ ಹಳೇ ಬಸ್ ನಿಲ್ದಾಣದ ಆಸುಪಾಸಿನ ಮಾಂಸಾಹಾರಿ ಹೊಟೇಲೊಂದರಲ್ಲಿ ಹುಳುವಿದ್ದ ಚಿಕನ್ ಖಾದ್ಯವನ್ನು ಗ್ರಾಹಕರಿಗೆ ನೀಡಲಾಗಿದೆ ಎಂದು ಆರೋಪಿಸಿ ವಿಡಿಯೋವೊಂದು ವೈರಲ್ ಆದ ಬೆನ್ನಲ್ಲೇ ಜಾಗೃತ ಗೊಂಡ ಜಿಲ್ಲಾಡಳಿತದ ನಿರ್ದೇಶನದ ಅನುಸಾರ ಅಧಿಕಾರಿಗಳ ತಂಡ ಭೇಟಿ ನೀಡಿ ಹೋಟೆಲ್ ಒಳಗಿನ ಸ್ಥಿತಿಗತಿಯನ್ನು ತಪಾಸಣೆ ನಡಸಿದೆ ಎನ್ನಲಾಗಿದೆ.

ಮಾಂಸ ಸಂಗ್ರಹಣಾ ಫ್ರಿಡ್ಜ್‌ಗಳನ್ನು ಪರಿಶೀಲನೆ ನಡೆಸಲಾಗಿದ್ದು, ಕೆಲವೊಂದು ಖಾದ್ಯಗಳ ಸ್ಯಾಂಪಲ್ ಗಳನ್ನು ಪರೀಕ್ಷಾಕೇಂದ್ರಕ್ಕೆ ಕಳುಹಿಸಲು ಸಂಗ್ರಹಿಸಲಾಗಿದೆ. ಈ ಸಂದರ್ಭ ಹೋಟೇಲ್ ಉದ್ಯಮಕ್ಕೆ ಸಂಬಂಧಿಸಿದ ಪಂಚಾಯತ್ ಪರವಾನಿಗೆ ಆಹಾರ ವಿಭಾಗದ ಪರವಾನಿಗೆ, ಆರೋಗ್ಯ ಇಲಾಖಾ ಪರವಾನಿಗೆಯನ್ನು ಇಲ್ಲದೇ ಇರುವ ವಿಚಾರ ಬಹಿರಂಗವಾಗಿದೆ. ಹೀಗಾಗಿ, ತಹಶೀಲ್ದಾರ್ ಹೊಟೇಲನ್ನು ಮುಚ್ಚಿಸಲು ನಿರ್ದೇಶನ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಈ ಅನ್ವಯ, ಅಧಿಕಾರಿಗಳು ಹೊಟೇಲನ್ನು ಬಂದ್ ಮಾಡಿಸಿದ್ದು, ದಾಳಿ ವೇಳೆ ಸ್ಥಳೀಯ ಪೊಲೀಸರು ಸೂಕ್ತ ಬಂದೋ ಬಸ್ತು ಕೈಗೊಂಡಿದ್ದರು ಎಂದು ತಿಳಿದು ಬಂದಿದೆ.

ಪುತ್ತೂರು ತಹಶೀಲ್ದಾರ್ ನಿಸರ್ಗ ಪ್ರಿಯ, ಉಪ್ಪಿನಂಗಡಿ ಉಪ ತಹಶೀಲ್ದಾರ್ ಚೆನ್ನಪ್ಪಗೌಡ, ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್, ಪೊಲೀಸ್ ಸಬ್‌ಇನ್‌ಸ್ಪೆೆಕ್ಟರ್ ರಾಜೇಶ್ ಕೆ.ವಿ., ವಿಎ ಮಹೇಶ್, ಕಂದಾಯ ಇಲಾಖಾ ಸಿಬ್ಬಂದಿ ಯತೀಶ್ ಮಡಿವಾಳ್,ಇವರನ್ನು ಒಳಗೊಂಡ ಅಧಿಕಾರಿಗಳ ತಂಡ ಗುರುವಾರ ರಾತ್ರಿ ಡಿಢೀರ್ ದಾಳಿ ನಡೆಸಿ ಆಹಾರ ಖಾದ್ಯಗಳ ತಪಾಸಣೆ ನಡೆಸಿದೆ ಎನ್ನಲಾಗಿದೆ.

Leave A Reply

Your email address will not be published.