Dakshina Kannada:ಸುಳ್ಯದ ಕುರುಂಜಿಭಾಗ್‌ನಲ್ಲಿರುವ ಕೆವಿಜಿ ಪಾಲಿಟೆಕ್ನಿಕ್‌ಗೆ ತಂಡವೊಂದು ಅಕ್ರಮ ಪ್ರವೇಶ – ಡಾ.ಜ್ಯೋತಿ ರೇಣುಕಾಪ್ರಸಾದ್ ಅವರಿಂದ ಪೋಲೀಸ್ ದೂರು – ಕೇಸು ದಾಖಲು

Sulia: ಸುಳ್ಯ (Sulia)ಕುರುಂಜಿಭಾಗ್ ನಲ್ಲಿರುವ ಪಾಲಿಟೆಕ್ನಿಕ್ ಕಾಲೇಜಿಗೆ ತಂಡವೊಂದು ಅಕ್ರಮವಾಗಿ ಪ್ರವೇಶ ಮಾಡಿದ್ದಲ್ಲದೆ ಅಲ್ಲಿನ ಪ್ರಾಂಶುಪಾಲರು ಹಾಗೂ ಸಿಬ್ಬಂದಿಯವರನ್ನು ಬೆದರಿಸಿರುವ ಕುರಿತು ಡಾ.ಜ್ಯೋತಿ ರೇಣುಕಾಪ್ರಸಾದ್ ರವರು ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.

 

ಡಾ. ಜ್ಯೋತಿ ಆರ್. ಪ್ರಸಾದ್ ಅವರು ಸೆಪ್ಟಂಬರ್ 6ರಂದು ಮಂಗಳೂರಿಗೆ ಹೋಗಿದ್ದು, ಈ ವೇಳೆ ಆರೋಪಿತರು ಕುರುಂಜಿಭಾಗ್‌ನಲ್ಲಿರುವ ಪಾಲಿಟೆಕ್ನಿಕ್ ಕಾಲೇಜಿಗೆ ಅಕ್ರಮ ಪ್ರವೇಶ ಮಾಡಿರುವ ಜೊತೆಗೆ ಅಲ್ಲಿದ್ದ ಪ್ರಾಂಶುಪಾಲರು ಮತ್ತು ಸಿಬ್ಬಂದಿಯವರ ಮೊಬೈಲ್‌ಗಳನ್ನು ಕೇಳಿ ಪಡೆದುಕೊಂಡಿದ್ದಾರೆ. ಸಿ ಸಿ ಕ್ಯಾಮರಾಗಳ ಮತ್ತು ಇನ್ನಿತರ ಮಾಹಿತಿ ಪಡೆದಿದ್ದು ಮೊಬೈಲ್‌ಗಳನ್ನು ಹಿಂತಿರುಗಿಸಿ, ಬೆದರಿಸಿ ಹೋಗಿರುವ ಕುರಿತು ಡಾ. ಜ್ಯೋತಿಯವರು ದೂರಿನಲ್ಲಿ ಆರೋಪ ಮಾಡಿದ್ದಾರೆ.

ಸುಳ್ಯ ತಾಲೂಕು ಅಜ್ಜಾವರ ಗ್ರಾಮದ ಕಾಂತಮಂಗಲ ನಿವಾಸಿಯಾದ ಡಾ. ಜ್ಯೋತಿ ಆರ್. ಪ್ರಸಾದ್ ಎಂಬವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಡಾ. ಜ್ಯೋತಿ ಆರ್. ಪ್ರಸಾದ್ ಎಂಬವರು ಅವರ ಬಾವ ಡಾ. ಚಿದಾನಂದ, ಅವರ ಹೆಂಡತಿ ಶೋಭಾ ಚಿದಾನಂದ, ಮಗ ಅಕ್ಷಯ್ ಕೆ ಸಿ, ಮಗಳು ಡಾ. ಐಶ್ವರ್ಯ, ಸಂಬಂಧಿ ಹೇಮನಾಥ ಕೆ ವಿ, ಜಗದೀಶ್ ಅಡ್ತಲೆ ಮತ್ತು ಇತರ ಕೆಲವರು ಅಕ್ರಮ ಪ್ರವೇಶ ಮಾಡಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ. ಮಾಹಿತಿ ತಿಳಿದ ಕೂಡಲೇ ಗಾಬರಿಯಾಗಿ ಮಂಗಳೂರಿನಿಂದ ಸುಳ್ಯದ ಸಂಸ್ಥೆಗೆ ಬಂದಿರುವುದಾಗಿ ದೂರಿನಲ್ಲಿ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ: 115/2023 ಕಲಂ : 448, 506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Leave A Reply

Your email address will not be published.