Kohinoor Diamond : ಬ್ರಿಟನ್ ರಾಣಿಯ ಪಟ್ಟಾಭಿಷೇಕಕ್ಕೆ ‘ಕೊಹಿನೂರು’ ವಜ್ರವಿಲ್ಲದ ಕಿರೀಟ!

ರಾಣಿ ಎಲಿಜಬೆತ್ ಸಾವಿನ ನಂತರ ತೆರವಾಗಿದ್ದ ಬ್ರಿಟನ್‌ ರಾಣಿಯ ಪಟ್ಟವೀಗ, ರಾಜ ಚಾರ್ಲ್ಸ್-3 ಅವರ ಪತ್ನಿ ಕ್ಯಾಮಿಲ್ಲಾ ಅವರ ಮುಡಿಗೇರಲಿದೆ. ನೂತನ ರಾಣಿಯ ಪಟ್ಟಾಭಿಷೇಕ ಮಹೋತ್ಸವವು ಮೇ ತಿಂಗಳಿನಲ್ಲಿ ವೆಸ್ಟ್‌ಮಿನಿಸ್ಟರ್‌ ಅಬೇಯಲ್ಲಿ ನೆರವೇರಲಿದ್ದು, ಭರದ ಸಿದ್ಧತೆಗಳು ನಡೆಯುತ್ತಿವೆ. ಆದರೆ ಕ್ಯಾಮಿಲ್ಲಾ ಅವರು ತಮ್ಮ ಪಟ್ಟಾಭಿಷೇಕದ ದಿನ ಕೊಹಿನೂರು ವಜ್ರವಿಲ್ಲದ ಕಿರೀಟವನ್ನು ಧರಿಸಲು ಮುಂದಾಗಿದ್ದಾರೆ!

ಕೊಹಿನೂರ್ ವಜ್ರವು ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ವಿವಾದಾತ್ಮಕ ವಜ್ರಗಳಲ್ಲಿ ಒಂದಾಗಿದೆ. ವಿವಾದದ ಸುಳಿಯಲ್ಲಿರುವ ವಜ್ರ ಸದ್ಯ, ರಾಣಿ ಕ್ಯಾಮಿಲ್ಲಾ ಪಾಲಿಗೆ ಒಲಿದಿದೆ. ಇನ್ನು ಮುಂದೆ ಈಕೆಯ ಮುಡಿಯಲ್ಲಿ ಈ ವಜ್ರಖಚಿತ ಕಿರೀಟ ರಾರಾಜಿಸಲಿದೆ ಎನ್ನಲಾಗುತಿತ್ತು. ಆದರೆ ಕಿಂಗ್ ಚಾರ್ಲ್ಸ್ III ಅವರ ಪಟ್ಟಾಭಿಷೇಕದ ಸಂದರ್ಭದಲ್ಲಿಯೇ ರಾಣಿ ಕಾನ್ಸಾರ್ಟ್ ಕ್ಯಾಮಿಲ್ಲಾ ಕೊಹಿನೂರು ವಜ್ರವಿರುವ ಕಿರೀಟವನ್ನು ಧರಿಸುವುದಿಲ್ಲ ಎಂಬ ಮಾತುಗಳು ಕೇಳಿ ಬಂದಿತ್ತು. ಇದೀಗ ಈ ಬಗ್ಗೆ ಸ್ಪಷ್ಟೀಕರಣ ದೊರೆತಿದ್ದು, ಬ್ರಿಟನ್ ಮುಂದಿನ ರಾಣಿ ಕ್ಯಾಮಿಲ್ಲಾ ಅವರು ವಸಹಾತುಶಾಹಿ ಕಾಲದ, ವಿವಾದಿತ ಕೊಹಿನೂರ್‌ ವಜ್ರ ಇಲ್ಲದ ಕಿರೀಟವನ್ನು ಧರಿಸಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಕೊಹಿನೂರ್‌ ವಜ್ರ ಭಾರತದಿಂದ ಲಂಡನ್‌ ತಲುಪಿದ್ದು, ಇದು ಕೆಲವು ರಾಜತಾಂತ್ರಿಕ ಸಮಸ್ಯೆಗಳನ್ನು ಹೊಂದಿರುವುದರಿಂದ ಈ ಕಿರೀಟವನ್ನು ಧರಿಸದಿರಲು ಕ್ಯಾಮಿಲ್ಲಾ ನಿರ್ಧರಿಸಿದ್ದಾರೆ. ಕ್ಯಾಮಿಲಾ ಧರಿಸಲು ಆಯ್ಕೆ ಮಾಡಿಕೊಂಡಿರುವ ಕ್ವೀನ್‌ ಮೇರಿ ಕಿರೀಟದಲ್ಲಿ ಕೊಹಿನೂರ್‌ ವಜ್ರದ ನಕಲನ್ನು ಅಳವಡಿಸಲಾಗಿದ್ದು, ಬೇಡವೆಂದರೆ ಅದನ್ನು ತೆಗೆದಿಡುವಂತೆ ವಿನ್ಯಾಸ ಮಾಡಲಾಗಿದೆ. ಮೂಲ ಕೊಹಿನೂರ್‌ ವಜ್ರವನ್ನು ರಾಣಿ ಎಲೆಜಬೆತ್‌-2 ಅವರ ತಾಯಿಯ ಕಿರೀಟದಲ್ಲಿ ಅಳವಡಿಸಲಾಗಿದೆ.

8 ಸೆಪ್ಟೆಂಬರ್ 2022 ರಂದು ಬ್ರಿಟನ್‌ನ ದೀರ್ಘಾವಧಿಯ ದೊರೆ, ​​ರಾಣಿ ಎಲಿಜಬೆತ್ II ರ ನಿಧನದ ನಂತರ, ಭಾರತದ ಹೆಮ್ಮೆಯ ಕೊಹಿನೂರ್ ಅನ್ನು ಅದರ ಮೂಲ ದೇಶಕ್ಕೆ ಮರಳಿ ತರುವ ಬಗ್ಗೆ ಭಾರತೀಯರು ಆಗ್ರಹಿಸಿದ್ದರು. ಟ್ವಿಟ್ಟರ್‌ನಲ್ಲೂ ಕೂಡ ಈ ಬೇಡಿಕೆ ಜೋರಾಗಿ ಕೇಳಿ ಬಂದಿತ್ತು. ಹೀಗಾಗಿ ವಜ್ರದ ಮಾಲೀಕತ್ವದ ಸುತ್ತಲಿನ ವಿವಾದ ಮತ್ತು ಭಾರತೀಯರ ಬೇಡಿಕೆಗಳು ರಾಣಿ ಕ್ಯಾಮಿಲ್ಲಾ ಪಟ್ಟಾಭಿಷೇಕ ಸಮಾರಂಭದಲ್ಲಿ ಕೊಹಿನೂರ್ ಕಿರೀಟವನ್ನು ಧರಿಸುವುದು ಅನುಮಾನ ಎನ್ನುವ ಕೂಗು ಮೊದಲೇ ಕೇಳಿ ಬಂದಿತ್ತು.

ಕೊಹಿನೂರ್ ವಜ್ರ ನಮ್ಮದು, ಅದನ್ನು ನಮಗೆ ಹಿಂದಿರುಗಿಸಿ ಎಂದು 1947ರಿಂದಲೇ ಭಾರತ ಆಗ್ರಹಿಸುತ್ತಿದೆ. 1953ರಲ್ಲಿ ರಾಣಿ ಎಲಿಜಬೆತ್‌ ಅವರ ಪಟ್ಟಾಭಿಷೇಕದ ವೇಳೆಯಲ್ಲೂ ಭಾರತ 2ನೇ ಬಾರಿ ಕೊಹಿನೂರ್ ವಜ್ರ ವಾಪಸ್ ಮಾಡಿ ಎಂದು ಆಗ್ರಹಿಸಿತ್ತು. ಆದರೆ ಭಾರತದ ಮನವಿಗೆ ಸೊಪ್ಪು ಹಾಕದ ಬ್ರಿಟನ್ ಅರ್ಥಹೀನ ಬೇಡಿಕೆ ಎಂದಿತ್ತು. ಇತ್ತೀಚೆಗೆ, ಭಾರತ ಸರ್ಕಾರವು ವಜ್ರವನ್ನು ಭಾರತಕ್ಕೆ ಮರಳಿ ತರಲು ಪ್ರಯತ್ನಿಸುತ್ತಿದೆ ಎಂದು ಸ್ಪಷ್ಟಪಡಿಸಿದೆ. ಇತ್ತೀಚಿನ ಮಾಧ್ಯಮ ಸಂವಾದದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಕೊಹಿನೂರ್ ಅನ್ನು ಭಾರತಕ್ಕೆ ಮರಳಿ ತರುವ ಸಮಸ್ಯೆಯನ್ನು ಪರಿಹರಿಸುವ ಮಾರ್ಗಗಳನ್ನು ಸರ್ಕಾರ ಅನ್ವೇಷಿಸುತ್ತಿದೆ ಎಂದು ತಿಳಿಸಿದ್ದರು.

Leave A Reply

Your email address will not be published.