Betal Leaf : ವೀಳ್ಯದೆಲೆಯಿಂದ ಈ ಎಲ್ಲಾ ಆರೋಗ್ಯ ಪ್ರಯೋಜನ ಲಭ್ಯ!

ವೀಳ್ಯದೆಲೆ ಎಂದರೆ ಅದಕ್ಕೆ ಅದರದ್ದೇ ಆದ ಪ್ರಾಮುಖ್ಯತೆ ಇದೆ. ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ವೀಳ್ಯದೆಲೆ ಕೃಷಿ ಮಾಡುತ್ತಾರೆ. ಇನ್ನು ನಗರದಲ್ಲಿ ಕೂಡ ಪಾನ್ ಶಾಪ್ ಗಳಲ್ಲಿ ಇದನ್ನು ನೋಡಿರಬಹುದು. ಪಾನ್ ಶಾಪ್ ಗಳಲ್ಲಿ ಸಿಗುವಂತಹ ವೀಳ್ಯದೆಲೆಯು ಒಂದು ರೀತಿಯ ಹೈಬ್ರೀಡ್ ಎಲೆ ಎನ್ನಬಹುದು. ದೇಶೀಯ ವೀಳ್ಯದೆಲೆಯಲ್ಲಿ ಹೆಚ್ಚಿನ ಔಷಧೀಯ ಗುಣಗಳು ಇವೆ ಎಂದು ಹೇಳಲಾಗುತ್ತದೆ. ಭಾರತೀಯರು ಆಯುರ್ವೇದದಲ್ಲಿ ವಿವಿಧ ರೀತಿಯ ಚಿಕಿತ್ಸೆಗೆ ಇದನ್ನು ಬಳಸಿಕೊಂಡು ಬಂದಿದ್ದಾರೆ. ಆಯುರ್ವೇದದ ಪ್ರಕಾರ ತಲೆನೋವು, ತುರಿಕೆ, ಗಾಯ, ಮಲಬದ್ಧತೆ ಮತ್ತು ಸವೆತ ಇತ್ಯಾದಿಗಳನ್ನು ತುಂಬಾ ಪರಿಣಾಮಕಾರಿ ಆಗಿ ನಿವಾರಣೆ ಮಾಡುವುದು. ಹೀಗೆ ವೀಳ್ಯದೆಲೆ ಬಗೆಗಿನ ಹಲವಾರು ವಿಧದ ಪ್ರಯೋಜನಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.

  • ವೀಳ್ಯದೆಲೆಗಳನ್ನು ಕತ್ತರಿಸಿ ನೀರಿನಲ್ಲಿ ಹಾಕಿ ಕುದಿಸಿ ಬಳಿಕ ಸೋಸಿ ಈ ಕಷಾಯಕ್ಕೆ ಉಪ್ಪು ಬೆರೆ‌ಸಿ ಬಾಯಿ ಮುಕ್ಕಳಿಸಿದರೆ ವಸಡಿನ ನೋವು ಊತ ಗುಣವಾಗುತ್ತದೆ.
  • ಉಸಿರಾಟದ ತೊಂದರೆ ಇರುವವರು ವೀಳ್ಯದೆಲೆ ರಸ, ಈರುಳ್ಳಿ ರಸ, ಶುಂಠಿ ರಸ ಹಾಗೂ ಜೇನು ತುಪ್ಪ ಬೆರೆಸಿ ಬೆಳಿಗ್ಗೆ ಖಾಲಿ ಹೊಟ್ಟೆಗೆ ಸೇವಿಸಿ ಇದನ್ನು ಸುಮಾರು 4-5 ತಿಂಗಳು ತೆಗೆದುಕೊಳ್ಳುತ್ತಾ ಬಂದರೆ ಉಸಿರಾಟದ ತೊಂದರೆ ಅತೀ ಬೇಗನೆ ವಾಸಿಯಾಗುವುದು.
  • ಒಂದೆರೆಡು ಚಮಚ ವೀಳ್ಯದೆಲೆ ರಸಕ್ಕೆ ಸ್ವಲ್ಪ ಜೇನು ತುಪ್ಪ ಬೆರೆಸಿ ದಿನಕ್ಕೆ 3 ಬಾರಿ ಸೇವಿಸುತ್ತಾ ಬಂದರೆ ಶ್ವಾಸಕೋಶಕ್ಕೆ ಸಂಬಂಧಿಸಿ ರೋಗಗಳು ನಿವಾರಣೆಯಾಗುವುದು.
  • ವೀಳ್ಯದೆಲೆಗೆ ಉಪ್ಪು ಹಾಕಿಕೊಂಡು ಅಗಿದು ರಸವನ್ನು ನುಂಗುತ್ತಿದ್ದರೆ ಹೊಟ್ಟೆನೋವು ಕಡಿಮೆಯಾಗುವುದು.
  • ಕ್ಯಾಲ್ಸಿಯಂ ಅಂಶ ಹೆಚ್ಚಿರುವ ವೀಳ್ಯದೆಲೆ ತಿನ್ನುವುದರಿಂದ ಜೀರ್ಣ ಶಕ್ತಿ ಹೆಚ್ಚಿಸಿ,ಧ್ವನಿ ಸರಿಪಡಿಸಿ,ಗ್ಯಾಸ್ಟ್ರಿಕ್‌ ಟ್ರಬಲ್‌ವನ್ನು ಬಹುಮಟ್ಟಿಗೆ ಗುಣಪಡಿಸುತ್ತದೆ.
  • ಸಂದಿಗಳಲ್ಲಿ ಗಂಟು ನೋವು ಕಾಣಿಸಿಕೊಂಡಾಗ 2 ವೀಳ್ಯದೆಲೆಯನ್ನು ಸ್ವಲ್ಪ ಮಂದ ಜ್ವಾಲೆಯಲ್ಲಿ ಬಿಸಿ ಮಾಡಿ ಅದಕ್ಕೆ ಸ್ವಲ್ಪ ಸಾಸಿವೆ ಎಣ್ಣೆ ಹಚ್ಚಿ ಅದರೊಳಗೆ ಎಣ್ಣೆ ಮಿಶ್ರಿತ ಬಿಸಿ ಮಾಡಿದ ಅರಸಿನ ಹುಡಿಯನ್ನು ದಪ್ಪಗೆ ಸವರಿ ಒಂದರ ಮೇಲೆ ಒಂದು ಎಲೆಯನ್ನು ಮುಚ್ಚಿ ಗಂಟುಗಳ ಮೇಲಿಟ್ಟು ಶಾಖ ಕೊಡಿ. ಹೀಗೆ ಒಂದೆರಡು ಬಾರಿ ಬಿಸಿ ಮಾಡಿ ಪುನರಾವರ್ತಿಸಿ ಬಟ್ಟೆಯಿಂದ ಸುತ್ತಿ ಕಟ್ಟಿ. ಹೀಗೆ ಇದನ್ನು 4-5 ತಿಂಗಳು ಮಾಡುತ್ತಾ ಬಂದರೆ ಗಂಟುನೋವು ಕಡಿಮೆಯಾಗುವುದು.
  • ಆಂಟಿ ಆಕ್ಸಿಡೆಂಟ್ ಮತ್ತು ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿರುವಂತಹ ವೀಳ್ಯದೆಲೆಯು ಹಲವಾರು ಆರೋಗ್ಯ ಲಾಭಗಳನ್ನು ನೀಡುವುದು. ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿ ಇಡುವುದು, ಹಲ್ಲಿನ ಆರೋಗ್ಯ ಕಾಪಾಡುವುದು, ಗಾಯ ಗುಣಪಡಿಸುವುದು ಮತ್ತು ಮಧುಮೇಹ ನಿಯಂತ್ರಣದಲ್ಲಿ ಇಡುವುದು.
  • ವೀಳ್ಯದೆಲೆಯಲ್ಲಿ ಮಧುಮೇಹಿ ವಿರೋಧಿಯಾಗಿರುವಂತಹ ಟ್ಯಾನಿನ್ ಎನ್ನುವ ಅಂಶವಿದೆ. ಇದು ರಕ್ತದಲ್ಲಿನ ಅಧಿಕ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಎಂದು ಅಧ್ಯಯನಗಳು ಕೂಡ ಕಂಡುಕೊಂಡಿವೆ. ಮಧುಮೇಹ ಇರುವವರಲ್ಲಿ ಇದು ತೂಕ ಇಳಿಯುವುದನ್ನು ತಡೆಯುವುದು. ಈ ಕಾರಣದಿಂದಾಗಿ ವೀಳ್ಯದೆಲೆಯು ಚಯಾಪಚಯ ಮತ್ತು ಮಧುಮೇಹದ ಮೇಲೆ ಧನಾತ್ಮಕ ಪರಿಣಾಮ ಬೀರುವುದು.
  • ಟೈಪ್ 1 ಮಧುಮೇಹ ಇರುವ ಜನರಲ್ಲಿ ಕೂಡ ಗಾಯ ಬೇಗನೆ ಒಣಗುವುದಿಲ್ಲ. ಇಂತಹ ಸಮಯದಲ್ಲಿ ವೀಳ್ಯದೆಲೆಯು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು. ವೀಳ್ಯದೆಲೆಯಲ್ಲಿ ಇರುವಂತಹ ಪಾಲಿಫೆನಾಲ್ ಗಳು ಆಂಟಿಆಕ್ಸಿಡೆಂಟ್ ನಂತೆ ಕೆಲಸ ಮಾಡುವುದು ಮತ್ತು ಇದು ಗಾಯವು ಬೇಗನೆ ಒಣಗಲು ನೆರವಾಗುವುದು. ವೀಳ್ಯದೆಲೆಯ ರಸವನ್ನು ನೀವು ಗಾಯಕ್ಕೆ ಹಾಕಿದರೆ ಆಗ ಅದು ಬೇಗನೆ ಒಣಗುವುದು. ಇದು ಕಾಲಜನ್ ಬಿಡುಗಡೆ ಮಾಡಿ ಗಾಯವು ಬೇಗನೆ ಒಣಗಲು ಮತ್ತು ಪುನರುಜ್ಜೀವನಗೊಳ್ಳಲು ಸಹಾಯ ಮಾಡುತ್ತದೆ.
  • ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿ ಪ್ರಕಾರ ವೀಳ್ಯದೆಲೆಯು ಕೆಮ್ಮು ನಿವಾರಣೆ ಮಾಡುವುದು. ಈ ಎಲೆಯನ್ನು ಸಾಸಿವೆ ಎಣ್ಣೆಯಲ್ಲಿ ನೆನಸಬೇಕು. ಇದರ ಬಳಿಕ ಬಿಸಿ ಮಾಡಿ ಎದೆ ಮೇಲಿಟ್ಟರೆ ಆಗ ಕಫಗಟ್ಟುವುದು ನಿಲ್ಲುವುದು. ಮಕ್ಕಳಿಗೆ ಜೇನುತುಪ್ಪಕ್ಕೆ ವೀಳ್ಯದೆಲೆ ರಸ ಹಾಕಿ ನೀಡಿದರೆ ಒಣ ಕೆಮ್ಮು ಮತ್ತು ಕಫ ನಿವಾರಣೆ ಆಗುವುದು. ಬ್ರಾಂಕಟೈಸ್ ಸಮಸ್ಯೆಯನ್ನು ಇದು ನಿವಾರಣೆ ಮಾಡುವುದು ಎಂದು ಹೇಳಲಾಗುತ್ತದೆ.
  • ವೀಳ್ಯದೆಲೆಯಲ್ಲಿ ಉನ್ನತ ಮಟ್ಟದ ಸಫ್ರೋಲ್ ಎನ್ನುವ ಅಂಶವಿದೆ. ಅದಾಗ್ಯೂ ಇದು ಡೈಹೈಡ್ರಾಕ್ಸಿಚಾವಿಕೋಲ್ ಮತ್ತು ಯುಜೆನಾಲ್ ಆಗಿ ಚಯಾಪಚಯಗೊಂಡು ಮೂತ್ರದ ಮೂಲಕ ಹೊರ ಹೋಗುವುದು. ವೀಳ್ಯದೆಲೆಯಲ್ಲಿ ಆಂಟಿಆಕ್ಸಿಡೆಂಟ್, ಆಂಟಿಮುಟಜೆನಿಕ್ ಮತ್ತು ಕ್ಯಾನ್ಸರ್ ವಿರೋಧಿ ಅಂಶಗಳು ಇವೆ. ಡೈಹೈಡ್ರಾಕ್ಸಿಚಾವಿಕೋಲ್ ಮತ್ತು ಯುಜೆನಾಲ್ ಅಂಶವು ಕ್ಯಾನ್ಸರ್ ಕೋಶಗಳನ್ನು ಕೊಲ್ಲುವುದು ಮತ್ತು ಇದರಿಂದ ಆರೋಗ್ಯವಂತ ಕೋಶಗಳಿಗೆ ಯಾವುದೇ ಹಾನಿಯಾಗದಂತೆ ತಡೆಯುವುದು.
  • ಒಂದು ಚಮಚದಷ್ಟು ವೀಳ್ಯದೆಲೆಯ ರಸವನ್ನು ಮಕ್ಕಳಿಗೆ ಕೊಡುವುದರಿಂದ ಕ್ಯಾಲ್ಸಿಯಂ ಕೊರತೆಯನ್ನು ನೀಗಿಸಬಹುದು.
  • ತಲೆ ಹೊಟ್ಟು ಇದ್ದಲ್ಲಿ ಬೇಕಾಗುವಷ್ಟು ವೀಳ್ಯದೆಲೆಯನ್ನು ನುಣ್ಣಗೆ ಅರೆದು ಕೊಬ್ಬರಿ ಎಣ್ಣೆಯೊಂದಿಗೆ ಮಿಶ್ರ ಮಾಡಿ. ಇದಕ್ಕೆ ಅರ್ಧ ಲಿಂಬೆರಸ ಬೆರೆಸಿ ತಲೆಯ ಪ್ರತಿಯೊಂದು ಭಾಗಕ್ಕೆ ಪೇಸ್ಟ್‌ ತರ ಹೆಚ್ಚಿಡಿ. ಅರ್ಧಗಂಟೆ ಬಳಿಕ ಸ್ನಾನ ಮಾಡಿದರೆ ತಲೆಯ ಹೊಟ್ಟು ಮತ್ತು ಕೂದಲು ಉದುರುವುದು ಕಡಿಮೆಯಾಗುತ್ತದೆ.
  • ವೀಳ್ಯದ ಎಲೆಗಳಲ್ಲಿ, ಅಪಾರ ಪ್ರಮಾಣದಲ್ಲಿ ಉರಿಯೂತ ಹಾಗೂ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿರುವುದರಿಂದ ಮುಖದ ಮೇಲಿರುವ, ಕಲೆಗಳು ಹಾಗೂ ಮೊಡವೆಗಳನ್ನು ಸುಲಭವಾಗಿ ತೆಗೆದುಹಾಕಲು ವೀಳ್ಯದ ಎಲೆ ಬಳಸಲಾಗುತ್ತದೆ. • ವೀಳ್ಯದೆಲೆಯನ್ನು ಕಾವಲಿಯ ಮೇಲೆ ಬೆಚ್ಚಗೆ ಮಾಡಿ, ಅದಕ್ಕೆ ಕರ್ಪೂರ ಬೆರೆಸಿದ ಕೊಬ್ಬರಿ ಎಣ್ಣೆಯನ್ನು ಲೇಪಿಸಿ, ಹಣೆಗೆ ಶಾಖ ನೀಡಿದರೆ ತಲೆನೋವು ನಿಯಂತ್ರಣಕ್ಕೆ ಬರುತ್ತದೆ.
  • ಗರ್ಭಿಣ ಸ್ತ್ರೀಯರಲ್ಲಿ ವಾಕರಿಕೆ, ಬಿಕ್ಕಳಿಕೆ ಉಂಟಾದಾಗ 2 ವೀಳ್ಯದೆಲೆಯಲ್ಲಿ ಅಡಿಕೆಯ ಚೂರನ್ನು ಇಟ್ಟು ಜೊತೆಗೆ 4 ಏಲಕ್ಕಿ ಕಾಳುಗಳನ್ನಿಟ್ಟು ಜಗಿವುದರಿಂದ ವಾಕರಿಕೆ ನಿಲ್ಲುತ್ತದೆ.

ಹೀಗೆ ವೀಳ್ಯದೆಲೆಯಲ್ಲಿ ನಾನಾ ವಿಧದ ಔಷಧ ಗುಣಗಳಿವೆ. ಆದ್ದರಿಂದ ನೀವು ಈ ಮೇಲಿನ ಸಮಸ್ಯೆಗಳಿಗೆ ವೀಳ್ಯದೆಲೆಯನ್ನು ಉಪಯೋಗಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಅತಿಯಾದರೆ ಅಮೃತವು ವಿಷ ಎನ್ನುವ ಗಾದೆ ಇದೆ. ಯಾಕೆಂದರೆ ಕೆಲವರಿಗೆ ವೀಳ್ಯದೆಲೆಯನ್ನು ಅಡಿಕೆ ಸುಣ್ಣದ ಜೊತೆ ತಿನ್ನುವ ಅತಿಯಾದ ಚಟ ಇರುತ್ತವೆ. ಇಂತಹ ಚಟಗಳು ನಿಮ್ಮ ಆರೋಗ್ಯವನ್ನು ಕೆಡಿಸುವ ಸಾಧ್ಯತೆ ಸಹ ಇರುತ್ತವೆ.

Leave A Reply

Your email address will not be published.