ಸರ್ಕಾರಿ ನೌಕರರೇ ಗಮನಿಸಿ: ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಪೋಸ್ಟ್ ಗಳಿಗೆ ಇರಲಿದೆ ಕಣ್ಗಾವಲು!!

ಸರ್ಕಾರಿ ನೌಕರರು ಸಮಾಜದ ಸೇವೆ, ಸಾರ್ವಜನಿಕ ಕರ್ತವ್ಯ ಮಾಡುವವರು ಆಗಿದ್ದಾರೆ. ಸರ್ಕಾರಿ ನೌಕರರಿಗೆ ಸಮಾಜದಲ್ಲಿ ತನ್ನದೇ ಆದ ಗೌರವ ಮತ್ತು ವೇತನವನ್ನು ನೀಡಲಾಗುತ್ತದೆ. ಹಾಗಿರುವಾಗ ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರಿ ನೌಕರರು ಮನಸ್ಸಿಗೆ ಬಂದಂತೆ, ಸಿಕ್ಕಸಿಕ್ಕ ಪೋಸ್ಟ್‌ಗಳನ್ನು ಹಂಚಿಕೊಳ್ಳುವ ಮುನ್ನ ಎಚ್ಚರವಿರಲಿ.

2016ರಲ್ಲಿ ಪೊಲೀಸರು ಪ್ರತಿಭಟನೆ ಮಾಡಿದ ದಿನದಿಂದ ಹಿಡಿದು ಇತರ ಸರ್ಕಾರಿ ನೌಕರರ ವಿವಿಧ ಬೇಡಿಕೆಗಾಗಿ ನಡೆದ ಎಲ್ಲ ಹೋರಾಟಗಳ ಸಂದರ್ಭ ಪೊಲೀಸರ ಮುಖಾಂತರ ಸರ್ಕಾರಿ ನೌಕರರ ವಾಟ್ಸ್ಆಪ್, ಟ್ವಿಟರ್, ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಖಾತೆಗಳ ಮೇಲೆ ಸರ್ಕಾರ ನಿಗಾ ಇರಿಸುತ್ತಲೇ ಬಂದಿದೆ.

ಹೌದು ಸೋಶಿಯಲ್ ಮೀಡಿಯಾ ಖಾತೆಗಳ ಮೇಲೆ ಸರ್ಕಾರ ನಿಗಾ ವಹಿಸಿದೆ. ಸರ್ಕಾರಕ್ಕೆ ಮುಜುಗರ ತರುವಂತಹ, ಸರ್ಕಾರಕ್ಕೆ ವಿರುದ್ಧವಾಗಿರುವಂತಹ ಸಂದೇಶಗಳನ್ನು ಕೆಲ ಸರ್ಕಾರಿ ನೌಕರರು ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟ್ವಿಟರ್, ಟೆಲಿಗ್ರಾಂನಲ್ಲಿ ಶೇರ್ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಖಾತೆಗಳ ಮೇಲೆ ಕಣ್ಣಿಡಲು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ.

ಇತ್ತೀಚಿಗೆ ಸರ್ಕಾರದ ಮೇಲೆ ನೌಕರರು ಮುನಿಸಿಕೊಂಡಿದ್ದಾರೆ. ಸರ್ಕಾರ ಘೋಷಿಸಿದ ಪುಣ್ಯಕೋಟಿ ಯೋಜನೆಗೆ ಹಣ ನೀಡಿದವರು ಕೇವಲ ಶೇ.20 ನೌಕರರು. ಎನ್‌ಪಿಎಸ್ ವಿರುದ್ಧ ಹೋರಾಟದ ವೇಳೆ, ನಂತರವೂ ಸರ್ಕಾರದಿಂದ ಯಾವುದೇ ರೀತಿಯ ಸೂಕ್ತ ಭರವಸೆ ಸಿಕ್ಕಿಲ್ಲ. ಹೀಗಾಗಿ ಸರ್ಕಾರದ ಆಡಳಿತ ವೈಖರಿ ವಿರುದ್ಧ ಸಂದೇಶಗಳನ್ನು ಹರಿಬಿಡುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

ಟ್ವಿಟ್ಟರ್ ಸೇರಿ ಸಾಮಾಜಿಕ ಜಾಲತಾಣದಲ್ಲಿ ಕಾನೂನು ಸುವ್ಯವಸ್ಥೆ, ಶಾಂತಿ ಸುವ್ಯವಸ್ಥೆಗೆ, ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಹಾಗೂ ಪರಸ್ಪರ ಗುಂಪಿನ ನಡುವೆ ದ್ವೇಷ ಭಾವನೆ ಬರುವಂತಹ ಪ್ರಚೋದನಕಾರಿ ಪೋಸ್ಟ್ ಗಳನ್ನು ಹಾಕುವವರು ಹಾಗೂ ಅದನ್ನು ಪಾರ್ವರ್ಡ್ ಮಾಡುವವರ ವಿರುದ್ಧ ಕಾನೂನು ರೀತಿಯ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ.

ಸದ್ಯ ಕೋಮುಗಲಭೆಗೆ ಪ್ರಚೋದನೆ ನೀಡುವ ಧರ್ಮ ಮತ್ತು ಅವಹೇಳನಕಾರಿ ಸಂದೇಶಗಳನ್ನು ಜಾಲತಾಣಗಳಲ್ಲಿ ವಿನಿಮಯ ಮಾಡಿಕೊಳ್ಳುತ್ತಿರುವುದರಿಂದ ಸಾರ್ವಜನಿಕರು ಬಳಸುವ ಜಾಲತಾಣಗಳ ಮೇಲೂ ಕಣ್ಣು ಇಡಲಾಗಿದೆ. ಸಾಮಾಜಿಕ ಜಾಲತಾಣಗಳ ಮೇಲೆ ನಿರಂತರವಾಗಿ ನಿಗಾ ವಹಿಸಲೆಂದೇ ಪೊಲೀಸರಿಗೆ ತರಬೇತಿ ನೀಡಲಾಗಿದೆ. ಜಾಲತಾಣಗಳ ಪರಿಶೀಲನೆಗಾಗಿ ಪ್ರತಿ ಜಿಲ್ಲೆಯಲ್ಲಿ ಒಂದು ಪ್ರತ್ಯೇಕ ತಂಡ ಕೆಲಸ ಮಾಡುತ್ತಿದೆ.

ಇದರ ಜೊತೆಗೆ ರಾಜಕೀಯ ಕುರಿತು ಚರ್ಚೆಗಳನ್ನು ಜಾಲತಾಣ ಗಳಲ್ಲಿ ಮಾಡದಂತೆ ಸರ್ಕಾರಿ ನೌಕರರ ವಾಟ್ಸ್ಆಪ್ ಗ್ರೂಪ್‌ಗಳಲ್ಲಿ ಸಂದೇಶ ಎಲ್ಲೆಡೆ ಹರಿದಾಡುತ್ತಿದೆ. ಒಟ್ಟಿನಲ್ಲಿ ಸರ್ಕಾರಿ ನೌಕರರ ಸಾಮಾಜಿಕ ಜಾಲತಾಣಗಳ ಮೇಲೆ ನಿರಂತರವಾಗಿ ನಿಗಾ ವಹಿಸಲೆಂದೇ ಪೊಲೀಸರನ್ನು ನೇಮಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ.

Leave A Reply

Your email address will not be published.