ಬೆಳ್ತಂಗಡಿ | ಅರೆಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ; ಶವದ ಸುತ್ತ ಕೊಲೆ ಶಂಕೆ..!!
ಬೆಳ್ತಂಗಡಿ: ಅರೆಸುಟ್ಟ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾದ ಘಟನೆ ಇಲ್ಲಿನ ನಡ ಗ್ರಾಮದಲ್ಲಿ ನಡೆದಿದೆ. ಅಲ್ಲಿನ ನಡ ಪಂಚಾಯತ್ ವ್ಯಾಪ್ತಿಯ ಕನ್ಯಾಡಿ ಸಮೀಪದ ಸೊರಕೆ ಎಂಬಲ್ಲಿ ನಡೆದಿದೆ.
ನಿನ್ನೆ ಸಂಜೆಯಿಂದ ಊರಿನಲ್ಲಿ ವಿಚಿತ್ರ ವಾಸನೆ ಬರುತ್ತಿತ್ತು. ಸೋಮವಾರ ರಾತ್ರಿಯಾಗುತ್ತಿದ್ದಂತೆ ಪಕ್ಕದ ಮನೆಯವರಿಗೆ ದುರ್ನಾತ ಜಾಸ್ತಿ ಬರಲು ಪ್ರಾರಂಭ ಆಯ್ತು. ಆಗ, ಸುತ್ತಲೂ ಹುಡುಕಾಟ ನಡೆಸಿದಾಗ ಅಲ್ಲಿಯೇ ಚರಂಡಿಯೊಂದರಲ್ಲಿ ಕಟ್ಟಿಗೆಯ ರಾಶಿಯ ಕೆಳಗೆ ಮಹಿಳೆಯ ಶವ ಅಧ೯ ಬೆಂದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸುಟ್ಟು ಹಾಕಿದಂತೆ ಇರುವ ಶವವು ಪೂರ್ತಿ ಕೊಳೆತ ಸ್ಥಿತಿಯಲ್ಲಿದೆ. ಸಾವಿನ ಸುತ್ತ ಹಲವಾರು ಅನುಮಾನಗಳು ಮೂಡಿದ್ದು, ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.
ಮಾಹಿತಿ ತಿಳಿದ ಪೋಲೀಸರು ಸ್ಥಳಕ್ಕಾಗಮಿಸಿ, ಪರಿಶೀಲನೆ ನಡೆಸುತ್ತಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಹತ್ತಿರದ ಪೋಲಿಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆಯೇ ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸದ್ಯದ ಮಾಹಿತಿಯ ಪ್ರಕಾರ ಎಲ್ಲಿಯೂ ಮಿಸ್ಸಿಂಗ್ ಕಂಪ್ಲೇಂಟ್ ಸುತ್ತಮುತ್ತಲಿನ ಠಾಣೆಗಳಲ್ಲಿ ದಾಖಲಾಗಿಲ್ಲ. ಆದುದರಿಂದ ಇದು ಪರವೂರಿನ ಮಹಿಳೆ ಎನ್ನಲಾಗಿದೆ. ಬೇರೆ ಊರಿನ ಮಹಿಳೆಯನ್ನು ಇಲ್ಲಿಗೆ ಕರೆದುಕೊಂಡು ಬಂದು ಕೊಲೆ ನಡೆಸಿ ಅರೆಬರೆ ಸುಟ್ಟು ಹಾಕಲಾಗಿದೆ ಎನ್ನಲಾಗುತ್ತಿದೆ.