ಎಲ್ಲಾ ನಾಯಿಗಳಿಗೂ ಇನ್ನು ಮುಂದೆ ಮಾಸ್ಕ್ ಕಡ್ಡಾಯ | ಈ ಮೂರು ತಳಿಯ ನಾಯಿ ಸಾಕಲು ಅವಕಾಶವಿಲ್ಲ |

ಇತ್ತೀಚೆಗೆ ನಾಯಿಗಳು ದಾಳಿ ಮಾಡುವ, ಕಂಡಕಂಡವರಿಗೆ ಕಚ್ಚುವ ಪ್ರಕರಣಗಳು ಹೆಚ್ಚಾಗಿದೆ. ಈ ಕಾರಣದಿಂದ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತವು ನಾಯಿಗಳನ್ನು ಸಾಕುವುದಕ್ಕೆ ಸಂಬಂಧಿಸಿದಂತೆ ಹೊಸದಾಗಿ ನಿಯಮಾವಳಿಗಳನ್ನು ರೂಪಿಸಿದೆ. ಹೌದು, ಉತ್ತರ ಪ್ರದೇಶದ ಗಾಜಿಯಾಬಾದ್​ ಮುನಿಸಿಪಲ್ ಕಾರ್ಪೊರೇಷನ್​ನಲ್ಲಿ (GMC) ಈ ಬಗ್ಗೆ ಕ್ರಮ ತಗೊಂಡಿದೆ. ಅದರಂತೆ ಹೋರಾಟ ಮನೋಭಾವದ ಪಿಟ್​ಬುಲ್, ರೊಟ್​ವೀಲರ್ ಮತ್ತು ಡೊಗೊ ಅರ್ಜಂಟಿನೊ (Pit Bull, Rottweiler and Dogo Argentino) ತಳಿಗಳನ್ನು ಮನೆಗಳಲ್ಲಿ ಮುದ್ದಿನ ನಾಯಿಗಳಾಗಿ ಸಾಕುವುದಕ್ಕೆ ನಿಷೇಧ ಹೇರಲಾಗಿದೆ.

ಹಾಗೆನೇ ಯಾವುದೇ ಕುಟುಂಬವು ಒಂದಕ್ಕಿಂತ ಹೆಚ್ಚು ನಾಯಿಗಳನ್ನು ಸಾಕುವಂತಿಲ್ಲ. ನಾಯಿಗಳನ್ನು ಸಾಕಲು ಕಡ್ಡಾಯವಾಗಿ ಲೈಸೆನ್ಸ್​ ಪಡೆಯಬೇಕು. ನವೆಂಬರ್ 1 ರಿಂದ ಹೊಸ ಲೈಸೆನ್ಸ್​ ವಿತರಣೆ ಪ್ರಕ್ರಿಯೆಯ ಆರಂಭವಾಗುತ್ತದೆ. ಹಾಗಾಗಿ ಈ ಹೊಸ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಗಾಜಿಯಾಬಾದ್ ನಗರಾಡಳಿತವು ಸ್ಪಷ್ಟವಾಗಿ ಹೇಳಿದೆ. ಎತ್ತರದ ಕಟ್ಟಡಗಳಲ್ಲಿ ವಾಸಿಸುತ್ತಿರುವವರು ನಾಯಿಗಳನ್ನು ಮನೆಗಳಿಂದ ಹೊರಗೆ ಕರೆತರಲು ಕಡ್ಡಾಯವಾಗಿ ಲಿಫ್ಟ್ ಬಳಸಬೇಕು, ಸಾರ್ವಜನಿಕ ಸ್ಥಳಗಳಲ್ಲಿ ನಾಯಿಗಳನ್ನು ಕರೆದೊಯ್ಯುವಾಗ ಬಲೆಯಂಥ ಮಾಸ್ಕ್​ ಅನ್ನು ನಾಯಿಗಳ ಬಾಯಿಗೆ ಕಡ್ಡಾಯವಾಗಿ ಹಾಕಿರಬೇಕು ಎಂದು ಸೂಚಿಸಲಾಗಿದೆ.

ಇತ್ತೀಚೆಗೆ ಗಾಜಿಯಾಬಾದ್ ನಗರದ ವಿವಿಧೆಡೆ ಇತ್ತೀಚೆಗೆ ನಾಯಿ ಕಡಿತ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಈ ನಿಯಮಗಳನ್ನು ನಗರಾಡಳಿತ ಜಾರಿಗೊಳಿಸಿದೆ. ನಾಯಿಗಳನ್ನು ಸಾಕಿರುವವರು ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಲಾಗಿದೆ. ಪಿಟ್​ ಬುಲ್, ರೊಟ್​ವೀಲರ್ ಮತ್ತು ಡೊಗೊ ಅರ್ಜೆಂಟಿನೊ ತಳಿಗಳು ಹೋರಾಟದ ಮನೋಭಾವ (ಫೆರೊಶಿಯಸ್) ಹೊಂದಿರುವ ನಾಯಿಗಳು. ಹಾಗಾಗಿ ಇನ್ನು ಮಂದೆ ಇಂತಹ ತಳಿಗಳನ್ನು ಸಾಕಲು ಯಾರಿಗೂ ಅನುಮತಿ ನೀಡುವುದಿಲ್ಲ. ಸೂಚನೆ ಉಲ್ಲಂಘಿಸಿ ಯಾರೇ ಈ ತಳಿಗಳನ್ನು ಸಾಕಿದರೆ ಅದರಿಂದ ಆಗುವ ಅನಾಹುತಗಳಿಗೆ ಅವರೇ ಜವಾಬ್ದಾರರಾಗುತ್ತಾರೆ. ಈ ಮೂರೂ ತಳಿಗಳನ್ನು ಗಾಜಿಯಾಬಾದ್​ನಲ್ಲಿ ನಿಷೇಧಿಸಲಾಗಿದೆ ಎಂದು ಬಿಜೆಪಿ ನಾಯಕ ಮತ್ತು ಗಾಜಿಯಾಬಾದ್ ಪಾಲಿಕೆಯ ಸದಸ್ಯ ಸಂಜಯ್ ಸಿಂಗ್ ಪಿಟಿಐ ಸುದ್ದಿಸಂಸ್ಥೆಗೆ ಹೇಳಿದ್ದಾರೆ.

ಈ ಮೂರೂ ತಳಿಗಳನ್ನು ನಿಷೇಧಿಸುವ ಕುರಿತು ಸಿಂಗ್ ಅವರು ಮಂಡಿಸಿದ ನಿಲುವಳಿಯನ್ನು ಮಹಾನಗರ ಪಾಲಿಕೆಯು ಅಂಗೀಕರಿಸಿದೆ. ‘ಹೊಸದಾಗಿ ಈ ತಳಿಗಳನ್ನು ಸಾಕಲು ಅವಕಾಶವಿಲ್ಲ. ಈಗಾಗಲೇ ಸಾಕುತ್ತಿರುವವರು ತಮ್ಮ ನಾಯಿಗಳಿಗೆ ಎರಡು ತಿಂಗಳ ಒಳಗೆ ಸಂತಾನಹರಣ ಚಿಕಿತ್ಸೆ ಮಾಡಿಸಬೇಕು’ ಎಂದು ಗಾಜಿಯಾಬಾದ್ ಮೇಯರ್ ಆಶಾ ಶರ್ಮಾ ಹೇಳಿದ್ದಾರೆ.

ನಾಯಿಗಳನ್ನು ಸಾಕಿರುವವರಿಗೆ ಅದು ಮುದ್ದು. ಆದರೆ ನಾಯಿಗಳಿಂದ ಕಚ್ಚಿಸಿಕೊಂಡು ಗಾಯಗೊಂಡ ಮಕ್ಕಳ ಬಗ್ಗೆಯೂ ನಾವು ಯೋಚಿಸಬೇಕಿದೆ. ಪಿಟ್​ಬುಲ್ ಕಡಿತದಿಂದ ಕುಶ್ ತ್ಯಾಗಿ ಎಂಬ ಮಗುವಿನ ಮುಖಕ್ಕೆ 150 ಹೊಲಿಗೆ ಬಿದ್ದಿದೆ. ಇದಾದ ಕೆಲವೇ ದಿನಗಳಲ್ಲಿ ಇದೇ ತಳಿಯ ಮತ್ತೊಂದು ನಾಯಿ ಇನ್ನೊಂದು ಮಗುವಿನ ಮೇಲೆ ದಾಳಿ ಮಾಡಿತ್ತು. ನಗರ ವ್ಯಾಪ್ತಿಯಲ್ಲಿ 10ಕ್ಕೂ ಹೆಚ್ಚು ಮಕ್ಕಳು ನಾಯಿ ಕಡಿತದಿಂದ ಗಾಯಗೊಂಡಿದ್ದಾರೆ’ ಎಂದು ಅವರು ಹೇಳಿದ್ದಾರೆ.

ಆದರೆ ಬೀದಿನಾಯಿಗಳಿಗೆ ಆಹಾರ ಕೊಡುವ ಬಗ್ಗೆ ಗಾಜಿಯಾಬಾದ್ ಮಹಾನಗರ ಪಾಲಿಕೆಯು ಯಾವುದೇ ನಿರ್ಬಂಧ ವಿಧಿಸಿಲ್ಲ. ಅವುಗಳಿಗೆ ಆಹಾರ ಕೊಡಲು ನಿರ್ದಿಷ್ಟ ಸ್ಥಳಗಳನ್ನು ಗುರುತಿಸಲಾಗುವುದು. ಹಾಗಾಗಿ ಎಲ್ಲೆಂದರಲ್ಲಿ ಆಹಾರ ಕೊಡುವಂತಿಲ್ಲ ಎಂದು ಪಾಲಿಕೆಯು ಸೂಚಿಸಿದೆ. ಸಾಕು ನಾಯಿ ಕಡಿತದಿಂದ ಯಾವುದೇ ವ್ಯಕ್ತಿಗೆ ತೊಂದರೆಯಾದರೆ ನಾಯಿ ಸಾಕಿದವರಿಗೆ ದಂಡ ವಿಧಿಸಲಾಗುವುದು ಎಂದು ಪಾಲಿಕೆಯು ಎಚ್ಚರಿಕೆಯ ಮಾತನ್ನು ಹೇಳಿದೆ.

Leave A Reply

Your email address will not be published.