ಮುಂದಿನ 6 ತಿಂಗಳು ಅಡುಗೆ ಎಣ್ಣೆ, ಚಿನ್ನ ಅಗ್ಗ, ಕಸ್ಟಮ್ಸ್ ಸುಂಕ ವಿನಾಯಿತಿ – ಕೇಂದ್ರದಿಂದ ದಸರಾ ಗಿಫ್ಟ್

ಹಣದುಬ್ಬರದಿಂದ ಗಾಯದ ಮೇಲೆ ಬರೆ ಎಳೆದಂತಹ ಸ್ಥಿತಿಯಲ್ಲಿರುವ ಸಾಮಾನ್ಯ ಜನತೆಗೆ ಕೇಂದ್ರ ಸರ್ಕಾರ ದಸರಾ ಹಬ್ಬದ ಆಫರ್ ಆಗಿ, ಹಣದುಬ್ಬರದ ಹೊಡೆತವನ್ನು ಕೊಂಚ ಮಟ್ಟಿಗೆ ಇಳಿಸುವ ನಿಟ್ಟಿನಲ್ಲಿ ಮಹತ್ತರ ನಿರ್ಧಾರ ಕೈಗೊಂಡಿದೆ.

ಕೋವಿಡ್ ಚೇತರಿಕೆಯ ನಂತರ ಸಾಲದ ಹೊರೆಯ ಭಾರ , ತೈಲದ ಬೆಲೆಯಲ್ಲಿ ಏರಿಕೆ, ದಿನನಿತ್ಯದ ಸಾಮಗ್ರಿಯ ಜೊತೆಗೆ ಔಷಧಿಗಳ ಬೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಳ ಹೀಗೆ ಸಾಲು ಸಾಲು ಸಂಕಷ್ಟದಲ್ಲಿರುವ ಜನತೆಗೆ ಹೆಚ್ಚುತ್ತಿರುವ ಹಣದುಬ್ಬರವೂ ಕೂಡ ಗಂಭೀರ ಪರಿಣಾಮ ಬೀರುವ ಆಂತಕ ಹೆಚ್ಚಾಗಿದೆ.

ಭಾರತವು ಖಾದ್ಯ ತೈಲವನ್ನು ಆಮದು ಮಾಡಿಕೊಳ್ಳುವ ಪ್ರಮುಖ ದೇಶವಾಗಿದೆ. ಒಟ್ಟು ಬಳಕೆ ಮಾಡಲಾಗುವ ಖಾದ್ಯ ತೈಲದ ಪೈಕಿ ಸುಮಾರು ಮೂರನೇ ಎರಡು ಭಾಗದಷ್ಟು ಖಾದ್ಯ ತೈಲವನ್ನು ಭಾರತವು ಆಮದು ಮಾಡಿಕೊಳ್ಳುತ್ತದೆ. ಆದ್ದರಿಂದಾಗಿ ಜಾಗತಿಕವಾಗಿ ಖಾದ್ಯ ತೈಲದ ಬೆಲೆಯ ಏರಿಳಿತವು ಭಾರತದಲ್ಲಿ ತೈಲ ದರದ ಮೇಲೆ ಪರಿಣಾಮ ಉಂಟು ಮಾಡುತ್ತದೆ.

ಈ ನಡುವೆ ಕೇಂದ್ರ ಸರ್ಕಾರವು ಪರಿಹಾರ ನೀಡುವ ಉದ್ದೇಶದಿಂದ ದಸರಾ ಹಬ್ಬದ ಸಂಭ್ರಮದಲ್ಲಿರುವ ಜನರಿಗೆ ನೆರವಾಗುವ ತೀರ್ಮಾನ ಕೈಗೊಳ್ಳಲಿದೆ. ಕೇಂದ್ರೀಯ ನೇರ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ (CBIC) ಅದರ ಬೆಲೆಗಳನ್ನ ನಿಯಂತ್ರಿಸಲು ಖಾದ್ಯ ತೈಲದ ಆಮದಿನ ಮೇಲೆ ಕಸ್ಟಮ್ಸ್ ಸುಂಕದ ವಿನಾಯಿತಿಯನ್ನು ಮುಂದುವರೆಸಿ ಜನರಿಗೆ ನೆರವಾಗಲಿದೆ.

ಬೇಡಿಕೆ ಮತ್ತು ಸಂದರ್ಭಕ್ಕೆ ತಕ್ಕಂತೆ ವಸ್ತುಗಳ ಬೆಲೆ ಏರಿಕೆ ಯಾಗುವುದು ಸಹಜ. ಅದರಲ್ಲೂ ಹಬ್ಬ ಹರಿದಿನಗಳ ಸಮಯದಲ್ಲಿ ಆಹಾರ, ಬೇಡಿಕೆಯ ವಸ್ತುಗಳ ಬೆಲೆ ಗಣನೀಯವಾಗಿ ಹೆಚ್ಚಾಗಿ ಗ್ರಾಹಕನಿಗೆ ಹೊಡೆತ ಬೀಳುತ್ತದೆ.ಈ ನಡುವೆ ಖಾದ್ಯ ತೈಲಗಳ ಆಮದಿನ ಮೇಲೆ ಮುಂದಿನ ಆರು ತಿಂಗಳವರೆಗೆ , ಮಾರ್ಚ್ 2023 ರೊಳಗೆ ಕಸ್ಟಮ್ಸ್ ಸುಂಕ ವಿನಾಯಿತಿ ನೀಡುವುದಾಗಿ ಸರ್ಕಾರ ಹೇಳಿಕೊಂಡಿದೆ.

ವರದಿಯ ಆಧಾರದಲ್ಲಿ, ಸರ್ಕಾರವು ಕಚ್ಚಾ ತಾಳೆ ಎಣ್ಣೆಯ ಮೂಲ ಬೆಲೆಯನ್ನು ಪ್ರತಿ ಟನ್‍ಗೆ 996 ಡಾಲರ್ ನಿಂದ 937 ಡಾಲರ್‍ಗೆ ತಗ್ಗಿಸಿದ್ದುಜ್ ಇದರಿಂದ ತಾಳೆ ಎಣ್ಣೆಯ ಮೂಲ ಬೆಲೆಯನ್ನು ಇಳಿಕೆ ಮಾಡಿದ್ದರಿಂದ ಖಾದ್ಯ ತೈಲಗಳ ಬೆಲೆಗಳನ್ನು ಕಡಿಮೆ ಮಾಡಬಹುದು ಎಂದು ಊಹಿಸಲಾಗಿದೆ.

ಆರ್ ಬಿಡಿ ಕೂಡ ಟನ್‍ಗೆ 1,019 ಡಾಲರ್‍ನಿಂದ 982 ಡಾಲರ್ ಗೆ ಟನ್‍ಗೆ ತಾಳೆ ಎಣ್ಣೆಯ ಮೂಲ ಬೆಲೆಯನ್ನು ತಗ್ಗಿಸಿದ್ದು, ಪಾಮೊಲಿನ್ ಅನ್ನು ಪ್ರತಿ ಟನ್ ಗೆ 1,035 ಡಾಲರ್ ನಿಂದ ಇಳಿಕೆ ಮಾಡಿ 998 ಡಾಲರ್ ಗೆ, ಇದಲ್ಲದೆ, 1, 362ಡಾಲರ್ ಇದ್ದ ಕಚ್ಚಾ ಸೋಯಾಬೀನ್ ತೈಲವನ್ನು 1,257 ಡಾಲರ್ ಗೆ ತಗ್ಗಿಸಿದೆ.

ಚಿನ್ನ ಮತ್ತು ಬೆಳ್ಳಿಯ ಬೆಲೆಯನ್ನು ಕೂಡ ಇಳಿಸಿದ್ದು, ಚಿನ್ನ ಪ್ರತಿ 10 ಗ್ರಾಂಗೆ 549 ಡಾಲರ್ ನಿಂದ 553 ಡಾಲರ್ ಗೆ ಇಳಿಸಲಾಗಿದೆ. ಬೆಳ್ಳಿಯನ್ನು ಪ್ರತಿ ಟನ್ ಗೆ 635 ಡಾಲರ್ ಗೆ ಇಳಿಸಿದೆ.

ಪ್ರಮುಖವಾಗಿ ಭಾರತವು ಪಾಮ್ ಆಯಿಲ್‌ಗಾಗಿ ಇಂಡೋನೇಷ್ಯಾ ಹಾಗೂ ಮಲೇಷಿಯಾದ ಮೇಲೆ ಅವಲಂಭಿತವಾಗಿರುವ ಕಾರಣದಿಂದಾಗಿ ಅಲ್ಲಿನ ಬೆಳವಣಿಗೆ ಭಾರತದಲ್ಲಿ ಖಾದ್ಯ ತೈಲ ಬೆಲೆಯ ಮೇಲೆ ಪ್ರಭಾವ ಬೀರುತ್ತದೆ. ಕಡಿಮೆ ಮೂಲ ಆಮದು ಬೆಲೆಯಿಂದಾಗಿ, ಕಸ್ಟಮ್ಸ್ ಸುಂಕವನ್ನು ಕಡಿಮೆ ಮಾಡಲಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ, ಖಾದ್ಯ ತೈಲದ ಜೊತೆಗೆ, ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಸ್ವಲ್ಪ ಇಳಿಕೆಯಾಗುವ ಸಾಧ್ಯತೆ ಇದೆ.

Leave A Reply

Your email address will not be published.