ಹಾಸ್ಟೆಲ್ ನಲ್ಲಿದ್ದ 9ನೇ ತರಗತಿ ವಿದ್ಯಾರ್ಥಿನಿಯರಿಂದ ಕೊಲೆಯತ್ನ ನಾಟಕ…ಸತ್ಯ ತಿಳಿದ ಪೊಲೀಸ್, ವಾರ್ಡನ್ ತಬ್ಬಿಬ್ಬು

ಮನೆಗೆ ಹೋಗಲು ಪ್ಲಾನ್ ಮಾಡಿದ್ದ ಹಾಸ್ಟೆಲ್ ವಿದ್ಯಾರ್ಥಿನಿಯರು ಕೊಲೆ ಯತ್ನ ನಾಟಕ ಮಾಡಿದ ವಿಚಿತ್ರ ಪ್ರಕರಣ ಆಂಧ್ರಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

ಹಾಸ್ಟೆಲ್ ನಲ್ಲಿ ಇರಲು ಇಚ್ಛಿಸದ ವಿದ್ಯಾರ್ಥಿನಿಯರು ಕೊಲೆಯತ್ನ ನಾಟಕ ಮಾಡಿದ ಘಟನೆಯೊಂದು ಆಂಧ್ರಪ್ರದೇಶದಲ್ಲಿ ನಡೆದಿದೆ. ಈ ವಿದ್ಯಾರ್ಥಿನಿಯರು ನಾಟಕವಾಡಿರುವ ಘಟನೆ ಎನ್‌ಟಿಆರ್ ಜಿಲ್ಲೆಯ ತಿರುವೂರು ಮಂಡಲದ ಮೈಲವರಂನಲ್ಲಿ ಬೆಳಕಿಗೆ ಬಂದಿದೆ.

ರಜೆ ಮೇಲೆ ಮನೆಗೆ ತೆರಳಿದ್ದ ಮೂವರು ವಿದ್ಯಾರ್ಥಿನಿಯರು ಮಂಗಳವಾರ ತಮ್ಮ ಹಾಸ್ಟೆಲ್ ಗೆ ವಾಪಸ್ಸಾಗಿದ್ದಾರೆ. ಬುಧವಾರ ಸಂಜೆ ಮೂವರು ಬಾಲಕಿಯರ ಪೈಕಿ ಓರ್ವಳ ಕುತ್ತಿಗೆ ಮತ್ತು ಕೆನ್ನೆಯ ಮೇಲೆ ಸಣ್ಣಪುಟ್ಟ ಗಾಯಗಳಾಗಿದ್ದವು.

ಇದನ್ನು ಉಳಿದ ವಿದ್ಯಾರ್ಥಿನಿಯರು ಗಮನಿಸಿ ತಕ್ಷಣ ಹೋಗಿ ವಾರ್ಡನ್‌ಗೆ ತಿಳಿಸಿದ್ದಾರೆ. ವಾರ್ಡನ್ ಓಡಿ ಬಂದು ವಿದ್ಯಾರ್ಥಿನಿಯರನ್ನು ವಿಚಾರಿಸಿದ್ದಾರೆ. ಏನಾಯಿತು ಎಂದು ಕೇಳಿದಾಗ ಮುಖವಾಡ ಧರಿಸಿದ ಅಪರಿಚಿತ ವ್ಯಕ್ತಿ ತನ್ನನ್ನು ಕೊಲ್ಲಲು ಪ್ರಯತ್ನಿಸಿದ್ದಾನೆ ಎಂದು ಆಕೆ ಹೇಳಿದ್ದಾಳೆ. ಇದರಿಂದ ಆತಂಕಗೊಂಡ ವಾರ್ಡನ್ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಹಾಸ್ಟೆಲ್‌ಗೆ ಭೇಟಿ ನೀಡಿದಾಗ ಭಯಗೊಂಡ ವಿದ್ಯಾರ್ಥಿನಿಯರು ನಿಜ ವಿಷಯ ಹೇಳಿದ್ದಾರೆ. ಪೊಲೀಸರನ್ನು ಕಂಡು ಹೆದರಿದ ಬಾಲಕಿ ಹಾಸ್ಟೆಲ್‌ನಿಂದ ಮನೆಗೆ ಹೋಗಲು ನಾಟಕ ಆಡಿರುವುದಾಗಿ ಸತ್ಯ ಬಾಯ್ದಿಟ್ಟಿದ್ದಾಳೆ.

ಇದೆಲ್ಲವೂ ಒಂದು ಯೋಜನೆ. ಮೂವರೂ ಸೇರಿ ಹಾಸ್ಟೆಲ್ ನಿಂದ ಮನೆಗೆ ಹೋಗಲು ನಾಟಕ ಆಡಿದ್ದೇವೆ ಎಂದು ಬಾಲಕಿ ಸತ್ಯಾಂಶ ತಿಳಿಸಿದ್ದಾಳೆ. ಇದನ್ನು ಕೇಳಿ ಪೊಲೀಸರು ಮತ್ತು ವಾರ್ಡನ್ ಆಶ್ಚರ್ಯಚಕಿತರಾದರು. ಯಾಕೆ ಹೀಗೆ ಮಾಡಿದೆ ಎಂದು ಕೇಳಿದಾಗ ಮತ್ತೆ ಮನೆಗೆ ಹೋಗಬೇಕೆಂದು ಮೂವರೂ ಸೇರಿ ಈ ಪ್ಲಾನ್ ಮಾಡಿದ್ದು, ಪೆನ್ಸಿಲ್ ಶಾರ್ಪ್ ಮಾಡುವ ಬೇಡ್‌ನಿಂದ ಕುತ್ತಿಗೆ ಮತ್ತು ಕೆನ್ನೆಯನ್ನು ಕುಯ್ದುಕೊಂಡಿರುವುದಾಗಿ ವಿದ್ಯಾರ್ಥಿನಿ ಹೇಳಿದ್ದಾಳೆ.

Leave A Reply

Your email address will not be published.