ದೆವ್ವ ಹಿಡಿದಿದೆ ಎಂದು ಮೂರು ವರ್ಷದ ಕಂದಮ್ಮಗೆ ಮನಸೋ ಇಚ್ಛೆ ಥಳಿಸಿ ಕೊಲೆ ಮಾಡಿದ ಪ್ರಕರಣ;

ದೆವ್ವ ಹಿಡಿದಿದೆ ಎಂದು ಮೂರು ವರ್ಷದ ಕಂದಮ್ಮನಿಗೆ ಮನಸೋ ಇಚ್ಛೆ ಥಳಿಸಿ, ಕೊಲೆಗೈದ ವಾಮಾಚಾರಿ ಸಹೋದರರು ತಕ್ಕ ಶಿಕ್ಷೆಗೆ ಗುರಿಯಾಗಿದ್ದಾರೆ.

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕು ಅಜ್ಜಿ ಕ್ಯಾತನಹಳ್ಳಿ ನಿವಾಸಿ ಪ್ರವೀಣ್ ಅವರ ಪುತ್ರಿ ಮೂರು ವರ್ಷದ ಪೂರ್ವಿಕಾಳನ್ನು ಮೈಮೇಲೆ ದೇವರು ಬರುತ್ತೆ, ದೆವ್ವ ಬಿಡಿಸುತ್ತೇವೆ ಎನ್ನುತ್ತಾ ಮೌಡ್ಯಾಚಾರಣೆ, ವಾಮಾಚಾರಗಳೊಂದಿಗೆ ಜನರಲ್ಲಿ ಸಲ್ಲದ ಭಯ ಉಂಟು ಮಾಡುತ್ತಿದ್ದರು. ವಿಪರೀತ ಹಠ ಮಾಡುತ್ತಿದ್ದ ಪೂರ್ವಿಕಾಳನ್ನು ಸರಿ ಮಾಡುತ್ತೇವೆ ಎಂದು ಹೇಳಿ, ತಂದೆ-ತಾಯಿಯೊಂದಿಗೆ 2020ರ ಸೆಪ್ಟೆಂಬರ್ 27ರಂದು ತಮ್ಮ ಗುಡಿಸಿಲಿಗೆ ಕರೆಸಿಕೊಂಡು ಆಕೆಗೆ ಬಾಸುಂಡೆ ಬರುವಂತೆ ಥಳಿಸಿದ್ದರು. ಅಸ್ವಸ್ಥಳಾಗಿದ್ದ ಬಾಲಕಿ ನಂತರ ಅಸುನೀಗಿದ್ದಳು. ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು.

ಈಗ ನ್ಯಾಯಾಲಯ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿದ್ದು, ದಂಡ ಕಟ್ಟಲು ವಿಫಲವಾದಲ್ಲಿ ಒಂದು ವರ್ಷ ಶಿಕ್ಷೆ ನೀಡಿ ತೀರ್ಪು ನೀಡಿದ್ದಾರೆ. ರಾಜ್ಯದಲ್ಲಿ ಮೌಡ್ಯ ನಿಷೇಧ ಕಾಯ್ದೆ ಜಾರಿ ಬಳಿಕ ಜಿಲ್ಲೆಯಲ್ಲಿ ನಡೆದ ಪ್ರಥಮ ಘಟನೆ ಇದಾಗಿದ್ದು, ಈ ಸಂಬಂಧ ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Leave A Reply

Your email address will not be published.