ಉದನೆ : ನದಿ ಪರಂಬೋಕು ಜಾಗದಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣ ,ಜಿಲ್ಲಾಧಿಕಾರಿಗಳ ತಡೆಯಾಜ್ಞೆ ಇದ್ದರೂ ಕೇಳೋರೆ ಇಲ್ಲ

ಕಡಬ ತಾಲೂಕಿನ ಕೊಣಾಜೆ ಗ್ರಾಮದ ಉದನೆ ಎಂಬಲ್ಲಿ ಸರ್ವೇ ನಂಬರ್ 137/3ರಲ್ಲಿ ವ್ಯಕ್ತಿಯೋರವರಿಗೆ 94ಸಿ ಯಡಿ ಯಾವುದೇ ವಾಸ್ತವ್ಯ ನಿವೇಶನ ಇಲ್ಲದೇ 94c 25/18-19ರಂತೆ ಮಂಜೂರಾದ ನದಿ ಪೋರಂಬೊಕು ಜಾಗದಲ್ಲಿ ಅನಧಿಕೃತವಾಗಿ ಇದೀಗ ನಿರ್ಮಾಣವಾಗುತಿರುವ ವಾಣಿಜ್ಯ ಕಟ್ಟಡಕ್ಕೆ ಅಧಿಕಾರಿಗಳೇ ಸಾಥ್ ನೀಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಈ ಬಗ್ಗೆ ಟಿ. ಜೆ ಮಾತ್ಯು ಎಂಬವರು ಈ ಅನಧಿಕೃತ 94ಸಿ ಆದೇಶವನ್ನು ರದ್ದು ಮಾಡಬೇಕೆಂದು ಸಹಾಯಕ ಆಯುಕ್ತರಿಗೂ ಮೆಲ್ಮನವಿ ಸಲ್ಲಿಸಿದ್ದರು. ಆದರೆ ಅಲ್ಲಿ ಯಾವುದೇ ಉತ್ತರ ಸಿಗದಿದ್ದಾಗ ಮಾನ್ಯ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ನ್ಯಾಯಾಲಯದಿಂದ ಇದರ ವಿರುದ್ಧ ತಡೆ ಆಜ್ಞೆಯನ್ನು ತಂದಿದ್ದರು. ಈ ದೂರಿನ ವಿಚಾರಣೆಯು 4-03-2022 ರಂದು ಪುತ್ತೂರಿನ ಸಹಾಯಕ ಆಯುಕ್ತರ ಬಳಿ ಆಗಬೇಕಿತ್ತು. ಆದರೆ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಈ ವಿಚಾರಣೆ ನಡೆದಿಲ್ಲ ಎಂದು ತಿಳಿದುಬಂದಿದೆ.

ಈ ಕಟ್ಟಡ ಇರುವ ಜಾಗವು ಗುಂಡ್ಯ ನದಿಯ ಪರಂಬೋಕು ಪ್ರದೇಶದಲ್ಲಿ ಬರುತ್ತದೆ ಮತ್ತು ಇಲ್ಲಿ ವಾಸ್ತವ್ಯ ಕಟ್ಟಡ ಇಲ್ಲದೇ ಅದರ ಬದಲಾಗಿ ವಾಣಿಜ್ಯ ಕಟ್ಟಡ ಇರುವುದರಿಂದ ಮತ್ತು ಕರ್ನಾಟಕ ಭೂಕಂದಾಯ ನಿಯಮ 1966 ರ 108T ಮತ್ತು ಕರ್ನಾಟಕ ಭೂಮಂಜೂರಾತಿ ನಿಯಮಕ್ಕೆ ವಿರುದ್ಧವಾಗಿ ಇರುವುದರಿಂದ ಸುಳ್ಳು ದಾಖಲೆಗಳನ್ನು ನೀಡಿ ಪಡೆದ ಸದ್ರಿ 94ಸಿ ಆದೇಶವನ್ನು ರದ್ದುಪಡಿಸಬೇಕೆಂದು ಸ್ಥಳೀಯ ಗ್ರಾಮ ಲೆಕ್ಕಿಗಗರ ವರದಿಯನ್ನು ಉಲ್ಲೆಕ್ಕಿಸಿ ಕಡಬದ ಕಂದಾಯ ನಿರೀಕ್ಷಕರು ಈಗಾಗಲೇ ಕಡಬ ತಹಶೀಲ್ದಾರ್ ಅವರಿಗೆ ವರದಿಯನ್ನೂ ನೀಡಿದ್ದಾರೆ.ಮಾತ್ರವಲ್ಲದೆ ಈಗಾಗಲೇ ಈ ವಿಚಾರದಲ್ಲಿ ಮಾನ್ಯ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ತಡೆ ಆಜ್ಞೆಯೂ ಇದೆ. ಜಿಲ್ಲಾಧಿಕಾರಿಗಳ ತಡೆಯಾಜ್ಞೆ ಹಾಗೂ ಕಂದಾಯ ನಿರೀಕ್ಷಕರಿಂದ ಈ ಪ್ರದೇಶ ನದಿ ಪರಂಬೋಕು ಎಂಬ ವರದಿ ಇದ್ದರೂ ಇದಕ್ಕೆ ಯಾವುದಕ್ಕೂ ಮನ್ನಣೆ ನೀಡದೇ ಸ್ಥಳೀಯ ಪಂಚಾಯತ್ ಅಧಿಕಾರಿಗಳೂ ಸೇರಿದಂತೆ ಇತರ ಕೆಲವು ಅಧಿಕಾರಿಗಳು ಕಟ್ಟಡ ನಿರ್ಮಾಣಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.ಈ ಬಗ್ಗೆ ಅಧಿಕಾರಿಗಳಲ್ಲಿ ಮಾಧ್ಯಮ ಪ್ರತಿನಿಧಿಗಳು ವಿಚಾರಿಸಿದರೆ ನಮಗೆ ರಾಜಕೀಯ ವ್ಯಕ್ತಿಗಳ ಒತ್ತಡ ಇದೆ ಏನೂ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಿರುವುದು ದೊಡ್ಡ ಸಂಶಯಕ್ಕೆ ಎಡೆ ಮಾಡುತ್ತಿದೆ..

Leave A Reply

Your email address will not be published.