Parliment Election: ಮೊದಲ ಹಂತದ ಮತದಾನ – ಈ 5 ವಿಷಯಗಳು ನಿಮಗೆ ತಿಳಿದಿರಲಿ

Parliment Election : ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ(Parliament Election) ಶುಕ್ರವಾರ ನಡೆಯಲಿದ್ದು, 14 ಕ್ಷೇತ್ರಗಳಲ್ಲಿ ನಾಗರೀಕರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ಸುಮಾರು 2.9 ಕೋಟಿ ಜನರು ಶುಕ್ರವಾರ 247 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ದಕ್ಷಿಣ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಘಟಾನುಘಟಿಗಳು ಕಣದಲ್ಲಿದ್ದಾರೆ. ಮತದಾರರು ಕೂಡ ತಮ್ಮ ಮತ ನೀಡಿ ನೆಚ್ಚಿನ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾತರರಾಗಿದ್ದಾರೆ. ಇದರ ನಡುವೆ ಮೊದಲ ಹಂತದ ಮತದಾನ ಪ್ರಕ್ರಿಯೆ ವೇಳೆ ನೀವು ಈ 5 ಅಂಶಗಳನ್ನು ಗಮನಿಸಿ.

ಹೌದು, ನಾಳೆ ದಕ್ಷಿಣ ಕರ್ನಾಟಕದ 14 ಕ್ಷೇತ್ರಗಳಲ್ಲಿ ಶುಕ್ರವಾರ ನಾಗರೀಕರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದ್ದು, ಬಿಜೆಪಿ – ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನಡುವೆ ಹೋರಾಟ ನಡೆಯುತ್ತಿದೆ. ಇದರ ನಡುವೆ ಶುಕ್ರವಾರ ನಡೆಯುವ ಲೋಕಸಭಾ ಚುನಾವಣೆ ಒಂದಿಷ್ಟು ಕುತೂಹಲಕಾರಿ ಅಂಶಗಳಿಂದ ಗಮನ ಸೆಳೆದಿವೆ. ಅವುಗಳ ಕುರಿತು ನೋಡೋಣ.

2ನೇ ಸಲ ಮೈತ್ರಿ VS ಏಕಪಕ್ಷದ ಕದನ !!
ಕರ್ನಾಟಕದಲ್ಲಿ ಮೂರು ಪ್ರಮುಖ ಪಕ್ಷಗಳಿದ್ದು, ಚುನಾವಣೆಯಲ್ಲಿ ತ್ರಿಕೋನ ಸಮರ ನಡೆಯುತ್ತಿತ್ತು. ಆದರೆ ಈ ಸಲ ಮೈತ್ರಿ ಪಕ್ಷಗಳು ಹಾಗೂ ಏಕ ಪಕ್ಷದ ನಡುವೆ ಕಾಳಗ ನಡೆಯಲಿದೆ. ಅದೂ ಕೂಡ ಎರಡನೇ ಸಲ. ಕಳೆದ ಬಾರಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಮಾಡಿಕೊಂಡು ಬಿಜೆಪಿಯನ್ನು ಎದುರಿಸಿದ್ದರೆ, ಈ ಬಾರಿ ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ಮೈತ್ರಿ ಮಾಡಿಕೊಂಡು ಕಾಂಗ್ರೆಸ್‌ ಅನ್ನು ಎದುರಿಸುತ್ತಿವೆ.

ಒಕ್ಕಲಿಗರ ಶಕ್ತಿ ಪ್ರದರ್ಶನ
ಮೊದಲ ಹಂತದಲ್ಲಿ ಚುನಾವಣೆ ನಡೆಯುವ 14 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ – ಜೆಡಿಎಸ್‌ ಹಾಗೂ ಕಾಂಗ್ರೆಸ್‌ನ ಅಭ್ಯರ್ಥಿಗಳ ಪಟ್ಟಿಯಲ್ಲಿ ಒಕ್ಕಲಿಗರ ಪ್ರಾಬಲ್ಯ ಇದೆ. 14 ಕ್ಷೇತ್ರಗಳ ಪೈಕಿ ಚಾಮರಾಜನಗರ, ಕೋಲಾರ ಮತ್ತು ಚಿತ್ರದುರ್ಗ ಮೀಸಲು ಕ್ಷೇತ್ರಗಳಾಗಿವೆ. ಉಳಿದ 11 ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಕಾಂಗ್ರೆಸ್‌ ಮತ್ತು ಎನ್‌ಡಿಎ ಎರಡು ಕೂಡ ಒಕ್ಕಲಿಗ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಉಳಿದ 6 ಕ್ಷೇತ್ರಗಳ ಪೈಕಿ ಇಬ್ಬರು ಒಕ್ಕಲಿಗರು ಸ್ಪರ್ಧಿಸಿದ್ದಾರೆ.

ಏಕೈಕ ಮುಸ್ಲಿಂ ಅಭ್ಯರ್ಥಿ
20 ವರ್ಷಗಳ ಹಿಂದೆ ಕರ್ನಾಟಕದಿಂದ ಕೊನೆ ಬಾರಿ ಮುಸ್ಲಿಂ ಸಂಸದರೊಬ್ಬರು ಆಯ್ಕೆಯಾಗಿದ್ದರು. ಇದೀಗ 14 ಕ್ಷೇತ್ರಗಳ ಪೈಕಿ ಎನ್‌ಡಿಎ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಗಳ ಪೈಕಿ ಇರುವ ಏಕೈಕ ಮುಸ್ಲಿಂ ಅಭ್ಯರ್ಥಿ ಎಂದರೆ ಅದು ಮನ್ಸೂರ್‌ ಅಲಿ ಖಾನ್‌ ಮಾತ್ರ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ದಿಂದ ಕಾಂಗ್ರೆಸ್‌ ಮನ್ಸೂರ್‌ ಅಲಿ ಖಾನ್‌ ಅವರನ್ನು ಕಣಕ್ಕಿಳಿಸಿದೆ.

ಹಾಲಿ ಸಂಸದರಿಗಿಲ್ಲ ಟಿಕೆಟ್:
ಈ ಬಾರಿ 15 ಹಾಲಿ ಸಂಸದರಿಗೆ ಬಿಜೆಪಿ ಕೊಕ್‌ ನೀಡಿದೆ. ಅದರಲ್ಲೂ ನಾಳೆ ಶುಕ್ರವಾರ ನಡೆಯುವ 14 ಲೋಕಸಭಾ ಕ್ಷೇತ್ರಗಳ ಪೈಕಿ ಎ ನಾರಾಯಣಸ್ವಾಮಿ (ಚಿತ್ರದುರ್ಗ), ಮಾಜಿ ಸಿಎಂ ಡಿವಿ ಸದಾನಂದ ಗೌಡ (ಬೆಂಗಳೂರು ಉತ್ತರ), ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ (ದಕ್ಷಿಣ ಕನ್ನಡ), ಮುನಿಸ್ವಾಮಿ (ಕೋಲಾರ), ಪ್ರತಾಪ್‌ ಸಿಂಹ (ಮೈಸೂರು – ಕೊಡಗು), ಶ್ರೀನಿವಾಸ್‌ ಪ್ರಸಾದ್‌ (ಚಾಮರಾಜನಗರ), ಸುಮಲತಾ ಅಂಬರೀಶ್‌ (ಮಂಡ್ಯ), ಬಿಎನ್‌ ಬಚ್ಚೇಗೌಡ (ಚಿಕ್ಕಬಳ್ಳಾಪುರ), ಜಿಎಸ್‌ ಬಸವರಾಜ್‌ (ತುಮಕೂರು) ಅವರ ಬದಲಿಗೆ ಬೇರೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ.

ಒಂದು ಕುಟುಂಬದಿಂದ 3 ಅಭ್ಯರ್ಥಿಗಳು ಸ್ಪರ್ಧೆ:
ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಅದಲ್ಲದೇ ಒಂದೇ ಕುಟುಂಬದ ಮೂರು ಅಭ್ಯರ್ಥಿಗಳು ಮೊದಲ ಹಂತದಲ್ಲಿ ಕಣದಲ್ಲಿದ್ದಾರೆ. ಮಂಡ್ಯದಲ್ಲಿ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ, ಹಾಸನದಲ್ಲಿ ಪ್ರಜ್ವಲ್‌ ರೇವಣ್ಣ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದರೆ. ಬೆಂಗಳೂರು ಗ್ರಾಮಾಂತರದಲ್ಲಿ ಡಾ ಸಿಎನ್‌ ಮಂಜುನಾಥ್‌ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಮೂವರು ಕೂಡ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಕುಟುಂಬದವರಾಗಿದ್ದಾರೆ.

ಏಪ್ರಿಲ್‌ 26ರಂದು ಮತದಾನ ನಡೆಯುವ ಕ್ಷೇತ್ರಗಳು:
1.ಉಡುಪಿ-ಚಿಕ್ಕಮಗಳೂರು (ಸಾಮಾನ್ಯ)
2.ಹಾಸನ (ಸಾಮಾನ್ಯ)
3.ದಕ್ಷಿಣ ಕನ್ನಡ (ಸಾಮಾನ್ಯ)
4.ಚಿತ್ರದುರ್ಗ (ಪರಿಶಿಷ್ಟ ಜಾತಿ ಮೀಸಲು)
5. ತುಮಕೂರು (ಸಾಮಾನ್ಯ)
6.ಮಂಡ್ಯ (ಸಾಮಾನ್ಯ)
7.ಮೈಸೂರು-ಕೊಡಗು (ಸಾಮಾನ್ಯ)
8.ಚಾಮರಾಜನಗರ (ಪರಿಶಿಷ್ಟ ಜಾತಿ ಮೀಸಲು)
9. ಬೆಂಗಳೂರು ಗ್ರಾಮಾಂತರ (ಸಾಮಾನ್ಯ)
10 ಬೆಂಗಳೂರು ಉತ್ತರ (ಸಾಮಾನ್ಯ)
11. ಬೆಂಗಳೂರು ಕೇಂದ್ರ (ಸಾಮಾನ್ಯ)
12. ಬೆಂಗಳೂರು ದಕ್ಷಿಣ (ಸಾಮಾನ್ಯ)
13.ಚಿಕ್ಕಬಳ್ಳಾಪುರ (ಸಾಮಾನ್ಯ)
14.ಕೋಲಾರ (ಪರಿಶಿಷ್ಟ ಜಾತಿ ಮೀಸಲು)

Leave A Reply

Your email address will not be published.