ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಖಾಸಗಿ ಬಸ್ ಡಿಕ್ಕಿ | ಸ್ಥಳದಲ್ಲೇ ಸಾವು,ಛಿದ್ರಗೊಂಡ ದೇಹ

ಉಡುಪಿ : ಖಾಸಗಿ‌ ಬಸ್ ಢಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ಸಂಜೆ ಕಾಪು ತಾಲೂಕಿನ ಮೂಳೂರಿನಲ್ಲಿ ನಡೆದಿದೆ.

ಮೂಳೂರು ಬೀಚ್ ಬಳಿಯ ನಿವಾಸಿ ರಮೇಶ್ ಬಂಗೇರ ಅಲಿಯಾಸ್ ಹರಿ ಓಂ (65) ಎಂಬವರು ಮೃತ ವ್ಯಕ್ತಿ.

ರಾಷ್ಟ್ರೀಯ ಹೆದ್ದಾರಿ 66 ರ ಮೂಳೂರು ಬಸ್ ನಿಲ್ದಾಣ ದ ಬಳಿ ರಸ್ತೆ ದಾಟುತ್ತಿದ್ದ ಅವರಿಗೆ ಮಂಗಳೂರಿನಿಂದ ಉಡುಪಿ‌ ಕಡೆಗೆ ತೆರಳುತ್ತಿದ್ದ ಎಕ್ಸ್‌ಪ್ರೆಸ್ ಬಸ್ ಢಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.

ಅಪಘಾತದ ತೀವ್ರತೆಗೆ ರಮೇಶ್ ಬಂಗೇರ ಅವರ ದೇಹ ಛಿದ್ರ ಛಿದ್ರವಾಗಿ ಹೋಗಿದ್ದು, ದೇಹದ ಭಾಗಗಳು ರಸ್ತೆಯಲ್ಲಿ ಚೆಲ್ಲಲ್ಪಟ್ಟಿವೆ.

ಅಪಘಾತದಿಂದಾಗಿ ಹೆದ್ದಾರಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು ಕಾಪು ಪೊಲೀಸರು ಮತ್ತು ಸ್ಥಳೀಯರು ಸಕಾಲಿಕ ಕಾರ್ಯಾಚರಣೆ ನಡೆಸಿ ರಸ್ತೆ ಸಂಚಾರ ಸುಗಮಗೊಳಿಸಿದರು.

ಕಾಪು ಎಸ್ಸೈ ರಾಘವೇಂದ್ರ ಸಿ., ಎಎಸ್ಐ ಗೋಪಾಲ ಶೆಟ್ಟಿಗಾರ್ ಹಾಗೂ‌ ಸಿಬಂದಿಗಳು ಸ್ಥಳಕ್ಕೆ ಧಾವಿಸಿದ್ದು, ಉಚ್ಚಿಲದ ಖಾಸಗಿ ಅಂಬುಲೆನ್ಸ್ ಮೂಲಕ ಶವವನ್ನು ಉಡುಪಿ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ‌ ಸಾಗಿಸಿದ್ದಾರೆ.

ಮೃತರು ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದು, ಮೂರು ತಿಂಗಳ ಹಿಂದಷ್ಟೇ ಸಂಬಂಧಿಕರ ನೆರವಿನೊಂದಿಗೆ ಹೊಸ‌ ಮನೆ‌ ನಿರ್ಮಿಸಿಕೊಂಡಿದ್ದರು. ಕೆಲವು ತಿಂಗಳ ಹಿಂದೆ ಇದೇ ಸ್ಥಳದಲ್ಲಿ ಕಾರು ಢಿಕ್ಕಿ ಹೊಡೆದು ಪ್ರಜ್ಞೆ ತಪ್ಪಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ, ಸೂಕ್ತ ಚಿಕಿತ್ಸೆ ಕೊಡಿಸಿದ್ದು ಅವರು ಪ್ರಾಣಾಪಾಯದಿಂದ ಪಾರಾಗಿದ್ದನ್ನು ಸ್ಥಳೀಯರು ನೆನಪಿಸಿಕೊಂಡಿದ್ದಾರೆ.

Leave A Reply

Your email address will not be published.