ಉಪ್ಪಿನಂಗಡಿ | ನಮ್ಮೂರ ಮಸೀದಿ ನೋಡಲು ಬನ್ನಿ ಕಾರ್ಯಕ್ರಮಕ್ಕೆ ಗಣ್ಯರಾಗಿ ಶಾಸಕ ಮಠದೂರು ಸಹಿತ ಸುಬ್ರಹ್ಮಣ್ಯ ಸ್ವಾಮೀಜಿ!! | ಸಾಮಾಜಿಕ ಜಾಲತಾಣದಲ್ಲಿ ಆಹ್ವಾನ ಪತ್ರಿಕೆ ಹರಿದಾಡಿದ ಬಳಿಕ ಬಯಲಾಯಿತು ಸತ್ಯ!

ಉಪ್ಪಿನಂಗಡಿ: ಉಪ್ಪಿನಂಗಡಿಯಲ್ಲಿ ‘ಮಸ್ಜಿದ್ ದರ್ಶನ್ ‘ ಎಂಬ ಕಾರ್ಯಕ್ರಮವೊಂದು ಮಸ್ಜಿದ್ ಹುದಾದಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಗಣ್ಯರಾಗಿ ಶಾಸಕ ಸಂಜೀವ ಮಠಂದೂರು ಹಾಗೂ ಸುಬ್ರಹ್ಮಣ್ಯ ಮಠದ ಸ್ವಾಮೀಜಿಗಳು ಆಗಮಿಸುತ್ತಾರೆ ಎಂಬ ಆಹ್ವಾನ ಪತ್ರಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸೂಕ್ಷ್ಮ ವಿಷಯದ ಕಾರಣಕ್ಕೆ ಅದು ಹಿಂದೂ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹಿಂದೂಪರ ಕಾರ್ಯಕರ್ತರು ಶಾಸಕರ ಮೇಲೆ ಎಗರಾಡುತ್ತಿದ್ದಾರೆ.

ಇದೇ ಜನವರಿ 2 ರಂದು ನಮ್ಮೂರ ಮಸೀದಿ ನೋಡ ಬನ್ನಿ ಎಂಬ ಶೀರ್ಷಿಕೆಯಲ್ಲಿ ನಡೆಯಲಿರುವ ಮಸ್ಜಿದ್ ದರ್ಶನ್ ಕಾರ್ಯಕ್ರಮಕ್ಕೆ ಶಾಸಕರ ಸಹಿತ ಸ್ವಾಮೀಜಿ ಆಗಮಿಸುತ್ತಾರೆ ಎಂಬ ಆಹ್ವಾನ ಪತ್ರಿಕೆಯಲ್ಲಿ ಅನುಮತಿ ಇಲ್ಲದೇ ಹೆಸರು ನಮೂದಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ನಮ್ಮ ತಂಡ ಶಾಸಕರನ್ನು ಸಂಪರ್ಕಿಸಿದಾಗ, ಅನುಮತಿ ರಹಿತವಾಗಿ ಹೆಸರು ಹಾಕಿದ್ದಾರೆ, ಆಹ್ವಾನ ಪತ್ರಿಕೆಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ನನ್ನ ಗಮನಕ್ಕೆ ಬಂದಿರುವುದೆಂದು ಸ್ಪಷ್ಟನೆ ನೀಡಿದ್ದಾರೆ. ಶಾಸಕರ ಅನುಮತಿ ಇಲ್ಲದೇ ಆಹ್ವಾನ ಪತ್ರಿಕೆಯಲ್ಲಿ ಹೆಸರು ನಮೂದಿಸಿದ ಪ್ರಾಯೋಜಕರು ಪೇಚಿಗೆ ಸಿಲುಕಿದ್ದಾರೆ. ಅಷ್ಟೇ ಅಲ್ಲದೆ ಇನ್ನೂ ಕೆಲವರ ಅನುಮತಿ ಇಲ್ಲದೆ ಆಹ್ವಾನ ಪತ್ರಿಕೆಯಲ್ಲಿ ಸದರಿ ನಾಯಕರ ಹೆಸರು ಹಾಕಲಾಗಿದೆಯಂತೆ.

ಇತ್ತ ಜನವರಿ 10 ರಂದು ಹಿಂದೂ ಸಂಘಟನೆಗಳ ವತಿಯಿಂದ  ದೇಶದ್ರೋಹಿಗಳಿಂದ ಉಪ್ಪಿನಂಗಡಿಯನ್ನು ರಕ್ಷಿಸಿ ಎಂಬ ಶೀರ್ಷಿಕೆಯಡಿಯಲ್ಲಿ ಬೃಹತ್ ಉಪ್ಪಿನಂಗಡಿ ಚಲೋ ಕೂಡಾ ನಡೆಯಲಿದೆ. ಒಟ್ಟಾರೆಯಾಗಿ ಇತ್ತೀಚಿನ ಕೆಲ ದಿನದಿಂದ ಉಪ್ಪಿನಂಗಡಿ ಭಾರೀ ಸದ್ದು ಮಾಡುತ್ತಿದೆ. ಮತೀಯ ಸೂಕ್ಷ್ಮ ವಿಷಯಗಳ ಮಧ್ಯೆ ಇದೊಂದು ಆಹ್ವಾನ ಪತ್ರಿಕೆ ಸಾಮಾಜಿಕ ತಾಣದಲ್ಲಿ ಬಿಸಿ ಚರ್ಚೆಗೆ ದಾರಿ ಮಾಡಿ ಕೊಟ್ಟಿದೆ.

Leave A Reply

Your email address will not be published.