ರೋಗಿಯನ್ನು ಆಸ್ಪತ್ರೆಗೆ ಸೇರಿಸದೆ ಕುಡಿದ ಅಮಲಿನಲ್ಲಿ ಆಂಬುಲೆನ್ಸ್ ನ್ನು ಅರ್ಧದಲ್ಲೇ ನಿಲ್ಲಿಸಿದ ಚಾಲಕ

ಮೈಸೂರು:ತುರ್ತಾಗಿ ಆಸ್ಪತ್ರೆ ಸೇರಲೆಂದು ಆಂಬುಲೆನ್ಸ್ ಗೆ ಕರೆ ಮಾಡಿ ಆಸ್ಪತ್ರೆಗೆ ಸಾಗಿಸುತ್ತಾರೆ. ಆದರೆ ಇಲ್ಲೊಂದು ಕಡೆ ಆಂಬುಲೆನ್ಸ್ ಚಾಲಕ ಕಂಠ ಪೂರ್ತಿ ಕುಡಿದು ಗಾಡಿ ಮುಂದೆ ಚಲಾಯಿಸಲು ಆಗದೆ ರಸ್ತೆ ಮಧ್ಯದಲ್ಲೇ ನಿಲ್ಲಿಸಿದ ಘಟನೆ ಮೈಸೂರಿನ ಹುಣಸೂರು ನಗರದಲ್ಲಿ ನಡೆದಿದೆ.

ಹಾಸನದ ಸಿದ್ದಾಪುರ ಗ್ರಾಮದ ತೀರ್ಥನಂದ (30) ಮನೆಯಲ್ಲಿ ಇದ್ದಕ್ಕಿದ್ದಂತೆ ಅಸ್ವಸ್ಥರಾಗಿದ್ದ ಕಾರಣದಿಂದ ಮಡಿಕೆರಿ ಆಸ್ಪತ್ರೆಗೆ ಪೋಷಕರು ಕರೆದುಕೊಂಡು ಹೋಗಿದ್ದರು.ಈ ವೇಳೆ ತೀರ್ಥನಂದರ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿದೆ ಎಂಬ ವಿಷಯ ತಿಳಿಯಿತು.ಹೀಗಾಗಿ ಬೆಂಗಳೂರು ನಿಮ್ಹಾನ್ಸ್​ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಅಲ್ಲಿನ ವೈದ್ಯರು ಸೂಚಿಸಿದ್ದಾರೆ. ಅದರಂತೆ ಮಡಿಕೇರಿಯಿಂದ ಬೆಂಗಳೂರಿಗೆ ಆಂಬುಲೆನ್ಸ್​ನಲ್ಲಿ ತೆರಳುತ್ತಿದ್ದರು. ಆದರೆ ಆಂಬುಲೆನ್ಸ್ ಚಾಲಕ ಕುಡಿದು ದಾರಿಯಲ್ಲಿಯೇ ಮಧ್ಯ ನಿಲ್ಲಿಸಿದ್ದಾನೆ.

ರೋಗಿ ಕರೆದುಕೊಂಡು ಬರುತ್ತಿದ್ದ ಆಂಬುಲೆನ್ಸ್ ಚಾಲಕ ಮಧ್ಯೆ ಮಧ್ಯೆ ಆಂಬುಲೆನ್ಸ್ ನಿಲ್ಲಿಸುತ್ತಿದ್ದು, ಅಲ್ಲಲ್ಲಿ ಕುಡಿದಿದ್ದಾನೆ ಎಂದು ಆಂಬುಲೆನ್ಸ್​ನಲ್ಲಿದ ರೋಗಿಯ ಪೋಷಕರು ತಿಳಿಸಿದ್ದಾರೆ. ಹುಣಸೂರು ಬಳಿ ಮುಂದೆ ಹೋಗಲು ಸಾಧ್ಯವಿಲ್ಲ ಎಂದು ಚಾಲಕ ನಿಲ್ಲಿಸಿದ್ದು, ಇದನ್ನು ಕಂಡ ಸ್ಥಳೀಯರು ತಕ್ಷಣ ರೋಗಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.ಸದ್ಯ ರೋಗಿಯನ್ನು ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಗೆ ರೋಗಿಯ ಪೋಷಕರು ಕರೆ ಮಾಡಿದ್ದರು. ಆದರೆ ಪೊಲೀಸರಿಗೆ ದೂರು ನೀಡಿದರು ಯಾವುದೇ ಕ್ರಮಕೈಗೊಂಡಿಲ್ಲ. ಸರಿಯಾಗಿ ಸ್ಪಂದಿಸದ ಪೊಲೀಸರ ವಿರುದ್ಧ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದು, ಆಂಬುಲೆನ್ಸ್ ಚಾಲಕನಿಗೆ ಮೆಡಿಕಲ್ ಮಾಡಿಸುವಂತೆ ಮನವಿ ಮಾಡಿದ್ದಾರೆ.

Leave A Reply

Your email address will not be published.