ಕಾರ್ಕಳ: ಬಾಟಲಿಯ ಗಾಜಿನಿಂದ ತಂದೆಗೆ ತಿವಿದು ಹತ್ಯೆಗೆ ಯತ್ನಿಸಿದ ಮಗ, ದೂರು ದಾಖಲು

ಮಗನೊಬ್ಬ ಬಾಟಲಿಯ ಗಾಜಿನಿಂದ ತನ್ನ ಸ್ವಂತ ತಂದೆಯ ಹೊಟ್ಟೆಗೆ ತಿವಿದು ಹತ್ಯೆಗೆ ಯತ್ನಿಸಿದ ಘಟನೆ ಕಾರ್ಕಳ ತಾಲೂಕಿನ ನಂದಳಿಕೆಯ ಗೋಳಿಕಟ್ಟೆ ಎಂಬಲ್ಲಿ ನಡೆದಿದೆ.

ವಿಶ್ವನಾಥ ಈ ಘಟನೆಯಲ್ಲಿ ಗಾಯಗೊಂಡವರು. ಪ್ರಕರಣದ ಆರೋಪಿಯನ್ನು ಮಂಜುನಾಥ ಎಂದು ಗುರುತಿಸಲಾಗಿದೆ.

ಹೆಂಡತಿ, ಮಕ್ಕಳಿಂದ ದೂರ ಉಳಿದಿದ್ದ ಆರೋಪಿ ಮಂಜುನಾಥ, ಕಳೆದ ಎರಡು ವರ್ಷಗಳಿಂದ ಕೆಲಸಕ್ಕೆ ಹೋಗದೇ ತಂದೆಗೆ ಸೇರಿದ ಗೋಳಿಕಟ್ಟೆಯ 5 ಸೆಂಟ್ಸ್ ಕಾಲನಿಯ ಮನೆಯಲ್ಲಿ ನೆಲೆಸಿದ್ದ. ತಂದೆ-ತಾಯಿ ದುಡಿದ ಸಂಪಾದನೆಯಲ್ಲಿಯೇ ತನ್ನ ಜೀವನ ಸಾಗಿಸುತ್ತಿದ್ದ ಮಂಜುನಾಥ ಹಾಗೂ ಆತನ ತಂದೆ ವಿಶ್ವನಾಥನ ನಡುವೆ ಅಗ್ಗಿಂದಾಗ್ಗೆ ಜಗಳ ನಡೆಯುತ್ತಿತ್ತು. ಇದರ ಮುಂದುವರಿದ ಭಾಗವಾಗಿ ಡಿಸೆಂಬರ್ 17ರ ಸಂಜೆ ಮತ್ತೆ ಅವರಿಬ್ಬರಲ್ಲಿ ಜಗಳ ಏರ್ಪಟ್ಟಿದೆ.

ಕುಪಿತನಾಗಿ ತಾಳ್ಮೆ ಕಳೆದುಕೊಂಡ ಆರೋಪಿ ಮಂಜುನಾಥ ತನ್ನ ಕೈಯಲ್ಲಿ ಇದ್ದ ಬಾಟಲಿಯ ಗಾಜಿನಲ್ಲಿ ತಂದೆಗೆ ಇರಿದು ಹತ್ಯೆಗೆ ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ. ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಆರೋಪಿ ಮಂಜುನಾಥನ ವಿರುದ್ಧ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.