ಕಂಟಕವಾಗಿ ಪರಿಣಮಿಸಿದ ಓಮಿಕ್ರೋನ್!! ರಾಜ್ಯದೆಲ್ಲೆಡೆ ಮುನ್ನೆಚ್ಚರಿಕೆಯಾಗಿ ಕಟ್ಟುನಿಟ್ಟಿನ ಕ್ರಮ

ಬೆಂಗಳೂರು :ಜಗತ್ತು ಯಾವ ಕಡೆಗೆ ದಾಪು ಕಾಲಿಡುತ್ತಿದೆ ಎಂಬುದೇ ಅರಿವಾಗದ ಪರಿಸ್ಥಿತಿಗೆ ಬಂದು ತಲುಪಿದೆ. ಶಾಂತವಾಗಿದ್ದ ಜನರ ಮನಸ್ಥಿತಿಗೆ ಕೊರೋನ ಎಂಬ ರಕ್ಕಸನ ಪ್ರವೇಶವಾಗಿ ಎಲ್ಲೆಡೆ ಅದರದ್ದೇ ಆರ್ಭಟವಾಗಿ ಮತ್ತೆ ಸ್ವಲ್ಪ ತಲ್ಲಣವಾಯಿತು ಎನ್ನೋ ಹೊತ್ತಿಗೆ ಮತ್ತೆ ಶುರುವಾಯಿತು ‘ಓಮಿಕ್ರೋನ್ ‘ಎಂಬ ಕಂಟಕ.

ಮಾರಣಾಂತಿಕ ಎನಿಸಿರುವ ಆಫ್ರಿಕನ್‌ ವೈರಸ್‌ ಸೋಂಕಿನ ಕುರಿತು ವಿಶ್ವದ ಹಲವು ರಾಷ್ಟ್ರಗಳು ಮುನ್ನೆಚ್ಚರಿಕೆಯನ್ನು ಕೈಗೊಂಡಿದ್ದು,ಇದರ ಬೆನ್ನಲ್ಲೇ ಕರ್ನಾಟಕ ಕೂಡ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದೆ.ಕರುನಾಡು ಮತ್ತೆ ಲಾಕ್‌ ಆಗುತ್ತಾ? ಎಂಬ ಮಾತುಗಳೆ ಕೇಳಿ ಬರುತ್ತಿದೆ. ಈ ನಡುವಲ್ಲೇ ಕರ್ನಾಟಕದ ಶಾಲೆ, ಕಾಲೇಜುಗಳಲ್ಲಿ ಸೋಂಕು ಹೆಚ್ಚುತ್ತಿದ್ದು, ಪರಿಸ್ಥಿತಿ ನೋಡಿಕೊಂಡು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸಿಎಂ ಬಸವರಾಜ್‌ ಬೊಮ್ಮಾಯಿ ಹೇಳಿದ್ದಾರೆ.ಹೀಗಾಗಿ ರಾಜ್ಯದಲ್ಲಿ ಶಾಲೆ ಕಾಲೇಜುಗಳು ಬಂದ್‌ ಆಗೋ ಸಾಧ್ಯತೆಯಿದೆ.

ಲಾಕ್‌ಡೌನ್ ಕುರಿತು ಯಾವುದೇ ಪ್ರಸ್ತಾಪ ಸರಕಾರದ ಮುಂದಿಲ್ಲ ,ಸುಳ್ಳು ಸುದ್ದಿ ಹಬ್ಬಿಸಿದರೆ ಕ್ರಮ- ಡಾ.ಸುಧಾಕರ್

ಕಳೆದ ಎರಡು ವರ್ಷಗಳಿಂದಲೂ ಕೊರೊನಾ ವೈರಸ್‌ ಸೋಂಕಿನ ಹಾವಳಿಯ ಹಿನ್ನೆಲೆಯಲ್ಲಿ ಶೈಕ್ಷಣಿಕ ಚಟುವಟಿಕೆ ತಡವಾಗಿ ಆರಂಭಗೊಂಡಿತ್ತು.ಈ ನಡುವಲ್ಲೇ ರಾಜ್ಯದಲ್ಲಿ ಮೂರನೇ ಅಲೆಯ ಆತಂಕ ಸೃಷ್ಟಿಯಾಗಿದೆ.ಇದೀಗ ಧಾರವಾಡ, ಬೆಂಗಳೂರು, ಹಾವೇರಿ ಜಿಲ್ಲೆಗಳಲ್ಲಿನ ಶಾಲೆ, ಕಾಲೇಜುಗಳಲ್ಲಿ ಕೊರೊನಾ ವೈರಸ್‌ ಸೋಂಕು ಕಾಣಿಸಿಕೊಂಡಿದೆ. ಅದ್ರಲ್ಲೂ ಧಾರವಾಡ ಎಸ್‌ಡಿಎಂ ಕಾಲೇಜಿನಲ್ಲಿ ಕೊರೊನಾ ಸ್ಪೋಟಗೊಂಡಿದೆ. ಈಗಾಗಲೇ ಮೂನ್ನೂರಕ್ಕೂ ಅಧಿಕ ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಅಲ್ಲದೇ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳ ಕೊರೊನಾ ತಪಾಸಣಾ ವರದಿ ಇನ್ನಷ್ಟೇ ಬರಬೇಕಾಗಿದೆ.ಅಲ್ಲದೇ ಎಸ್‌ಡಿಎಂ ಕಾಲೇಜಿನಲ್ಲಿ ನಡೆದ ಸಾಂಸ್ಕೃತಿಕ ಉತ್ಸವದ ಬೆನ್ನಲ್ಲೇ ಕೊರೊನಾ ಸ್ಪೋಟಗೊಂಡಿದೆ ಎನ್ನಲಾಗುತ್ತಿದೆ.

ಈಗಾಗಲೇ ತಜ್ಞರು ರಾಜ್ಯದಲ್ಲಿ ಲಾಕ್‌ಡೌನ್‌ ಹೇರಿಕೆ ಮಾಡುವ ಕುರಿತು ಸಲಹೆಯನ್ನು ನೀಡಿದ್ದಾರೆ. ನವೆಂಬರ್‌ 30 ರಂದು ಕೋವಿಡ್‌ ತಾಂತ್ರಿಕ ಸಮಿತಿಯ ಸಭೆ ನಡೆಯಲಿದೆ.ಈಗಾಗಲೇ ಸಿಎಂ ಬಿಬಿಎಂಪಿ ಸೇರಿದಂತೆ ಕೊರೊನಾ ಆತಂಕವಿರುವ ಜಿಲ್ಲೆಗಳಲ್ಲಿನ ಅಧಿಕಾರಿಗಳ ಜೊತೆಗೆ ಸಭೆಯನ್ನು ನಡೆಸಿದ್ದಾರೆ. ಸಭೆಯ ಬೆನ್ನಲ್ಲೇ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ಕುರಿತು ಸೂಚಿಸಿದ್ದಾರೆ.

ರಾಜ್ಯದಲ್ಲಿ ಇದುವರೆಗೆ ಓಮಿಕ್ರಾನ್‌ ಸೋಂಕು ಇದುವರೆಗೂ ಪತ್ತೆಯಾಗಿಲ್ಲ. ಆದರೆ ರಾಜ್ಯದಲ್ಲಿ ಆಫ್ರಿಕಾ ಸೇರಿದಂತೆ ಹಲವು ರಾಷ್ಟ್ರಗಳಿಂದಲೂ ನಿತ್ಯವೂ ಸಾವಿರಾರು ಮಂದಿ ಆಗಮಿಸುತ್ತಿದ್ದಾರೆ. ಒಂದೊಮ್ಮೆ ಆಫ್ರಿಕನ್‌ ವೈರಸ್‌ ಸೋಂಕು ರಾಜ್ಯಕ್ಕೆ ವ್ಯಾಪಿಸಿದ್ರೆ ನಿಯಂತ್ರಣ ಕಷ್ಟ ಸಾಧ್ಯ. ಇನ್ನೊಂದೆಡೆಯಲ್ಲಿ ಕೊರೊನಾ ಹಾಗೂ ಡೆಲ್ಟಾ ಪ್ಲಸ್‌ ಹಾವಳಿ ಮಿತಿಮೀರುತ್ತಿದೆ. ಹೀಗಾಗಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ತರಗತಿಗಳನ್ನು ಬಂದ್‌ ಮಾಡುವ ಕುರಿತು ಸರಕಾರದ ವಲಯದಲ್ಲಿ ಚಿಂತನೆ ನಡೆಯುತ್ತಿದ ಎನ್ನಲಾಗುತ್ತಿದೆ.

ಎಸ್‌ಡಿಎಂ ಕಾಲೇಜಿನಲ್ಲಿ ಕೊರೊನಾ ವೈರಸ್‌ ಸೋಂಕು ದೃಢಪಟ್ಟಿರುವ ಬೆನ್ನಲ್ಲೇ,ನರ್ಸಿಂಗ್‌, ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳನ್ನು ಕೊರೊನಾ ಟೆಸ್ಟ್‌ಗೆ ಒಳಪಡಿಸುವಂತೆ ಈಗಾಗಲೇ ರಾಜ್ಯ ಆರೋಗ್ಯ ಇಲಾಖೆ ಸೂಚನೆಯನ್ನು ನೀಡಿದೆ. ರಾಜ್ಯ ಆರೋಗ್ಯ ಇಲಾಖೆ ಮಾರ್ಗಸೂಚಿಯನ್ನು ಹೊರಡಿಸಿದ್ದರೂ ಕೂಡ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ, ಕೊರೊನಾ ಮಾರ್ಗಸೂಚಿಯ ಪಾಲನೆಯ ವಿಚಾರದಲ್ಲಿ ನಿರ್ಲಕ್ಷ್ಯವನ್ನು ವಹಿಸಿದೆ. ಇದೇ ಕಾರಣದಿಂದಾಗಿಯೇ ಶಾಲೆ, ಕಾಲೇಜುಗಳಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದೆ ಅನ್ನೋ ಆರೋಪ ಕೇಳಿಬರುತ್ತಿದೆ.

ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಬೆನ್ನಲ್ಲೇ ರಾಜ್ಯ ಆರೋಗ್ಯ ಇಲಾಖೆ ಬೆಂಗಳೂರು, ಮೈಸೂರು ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಮುಂದಿನ ಎರಡು ತಿಂಗಳುಗಳ ಕಾಲ ಶೈಕ್ಷಣಿಕ ಚಟುವಟಿಕೆಯನ್ನು ಮುಂದೂಡುವಂತೆ ಸೂಚನೆಯನ್ನು ನೀಡಿದೆ. ಪ್ರಮುಖವಾಗಿ ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆ, ಕಾನ್ಪರೆನ್ಸ್‌, ಸೆಮಿನಾರ್‌ ಸೇರಿದಂತೆ ಯಾವುದೇ ಕಾರ್ಯಕ್ರಮವನ್ನು ಆಯೋಜನೆ ಮಾಡದಂತೆ ಸೂಚಿಸಿದೆ. ಅಲ್ಲದೇ ಶೈಕ್ಷಣಿಕ ಸಂಸ್ಥೆಗಳು 18 ವರ್ಷ ಮೇಲ್ಪಟ್ಟವರಿಗೆ ಕಡ್ಡಾಯವಾಗಿ ಕೊರೊನಾ ಲಸಿಕೆಯನ್ನು ನೀಡುವಂತೆ ಸೂಚಿಸಿದೆ.

Leave A Reply

Your email address will not be published.